ವಾರದಲ್ಲಿ ‘ಗೃಹಲಕ್ಷ್ಮೀ’ಯರಿಗೂ ಬಯೋಮೆಟ್ರಿಕ್‌

KannadaprabhaNewsNetwork |  
Published : Jun 11, 2026, 02:45 AM IST
1.ಶೇಷಗಿರಿಹಳ್ಳಿ ಗ್ರಾಮದಲ್ಲಿ ಸರ್ವೆ ನಡೆಸಲು ಆಗಮಿಸಿದರುವ ಅಧಿಕಾರಿಗಳನ್ನು ರೈತರು ಪ್ರಶ್ನೆ ಮಾಡುತ್ತಿರುವುದು. | Kannada Prabha

ಸಾರಾಂಶ

ಕುಟುಂಬದ ತಲಾ ಒಬ್ಬ ಅರ್ಹ ಮಹಿಳೆಗೆ ಮಾಸಿಕ ₹2 ಸಾವಿರ ಪಾವತಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಗೃಹಲಕ್ಷ್ಮೀ’ ದುರುಪಯೋಗಕ್ಕೆ ತಡೆ ಹಾಕಲು ಮುಂದಾಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಫಲಾನುಭವಿಗಳ ಅರ್ಜಿ ನವೀಕರಣಗೊಳಿಸುವ ಪ್ರಕ್ರಿಯೆಗೆ ವಾರದಲ್ಲಿ ಚಾಲನೆ ನೀಡಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕುಟುಂಬದ ತಲಾ ಒಬ್ಬ ಅರ್ಹ ಮಹಿಳೆಗೆ ಮಾಸಿಕ ₹2 ಸಾವಿರ ಪಾವತಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಗೃಹಲಕ್ಷ್ಮೀ’ ದುರುಪಯೋಗಕ್ಕೆ ತಡೆ ಹಾಕಲು ಮುಂದಾಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಫಲಾನುಭವಿಗಳ ಅರ್ಜಿ ನವೀಕರಣಗೊಳಿಸುವ ಪ್ರಕ್ರಿಯೆಗೆ ವಾರದಲ್ಲಿ ಚಾಲನೆ ನೀಡಲಿದೆ.

ಮೃತಪಟ್ಟವರ ಖಾತೆಗೂ ಹಣ ಸಂದಾಯ, ಆದಾಯ ತೆರಿಗೆ ಪಾವತಿದಾರರೂ ‘ಗೃಹಲಕ್ಷ್ಮೀ’ ಯೋಜನೆಯ ಫಲಾನುಭವಿಗಳಾಗಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಂದಾಗಿದ್ದು, ಅದಕ್ಕಾಗಿ ಯಾವ ಮಾನದಂಡಗಳನ್ನು ಅನುಸರಿಸಬೇಕು ಎಂಬ ಚರ್ಚೆ ನಡೆಸುತ್ತಿದೆ. ಬುಧವಾರವೂ ಈ ಸಂಬಂಧ ಸಭೆ ನಡೆದಿದ್ದು, ವಾರದಲ್ಲಿ ರೂಪುರೇಷೆ ಸಿದ್ಧವಾಗಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಈಗಾಗಲೇ ಅರ್ಜಿಗಳು ಸಲ್ಲಿಕೆ ಆಗಿರುವುದರಿಂದ ಪುನಃ ಅರ್ಜಿ ಸಲ್ಲಿಸಲು ಹೇಳಿದರೆ ಗೊಂದಲ ಸೃಷ್ಟಿಯಾಗುತ್ತದೆ. ಆದ್ದರಿಂದ ಹಳೆಯ ಅರ್ಜಿಯ ಆಧಾರದಲ್ಲೇ ನವೀಕರಣ ಪ್ರಕ್ರಿಯೆ ಪೂರ್ಣಗೊಳಿಸುವುದು. ಆಧಾರ್‌ ಸಂಖ್ಯೆ ಜೋಡಣೆ ಮಾಡುವುದನ್ನು ಕಡ್ಡಾಯಗೊಳಿಸಲಿದ್ದು ಮೊಬೈಲ್‌ ಸಂಖ್ಯೆ ಬದಲಾವಣೆಗೂ ಅವಕಾಶ ಕಲ್ಪಿಸಬೇಕು ಎಂಬ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.

ಹೇಗಿರಲಿದೆ ದೃಢೀಕರಣ?:

ಫಲಾನುಭವಿಯ ಬಯೋಮೆಟ್ರಿಕ್‌ ಪಡೆದು ಅರ್ಜಿಯನ್ನು ನವೀಕರಣ ಮಾಡಲಾಗುವುದು. ಕೆಲವೊಮ್ಮೆ, ಹಿರಿಯ ಫಲಾನುಭವಿಗಳಿಗೆ ಬಯೋಮೆಟ್ರಿಕ್‌ನಿಂದ ನವೀಕರಣ ಸಾಧ್ಯವಾಗುವುದಿಲ್ಲ. ಆದ್ದರಿಂದ ರೆಟಿನಾ ಅಥವಾ ಫೇಸ್‌ ರೆಕಗ್ನೆಷನ್‌ ಮೂಲಕವೂ ದೃಢೀಕರಣ ಮಾಡಬೇಕು. ಕರ್ನಾಟಕ ಒನ್‌, ಬೆಂಗಳೂರು ಒನ್‌, ಗ್ರಾಮ ಒನ್‌ ಅಥವಾ ಬಾಪೂಜಿ ಸೇವಾ ಕೇಂದ್ರಗಳಿಗೆ ತೆರಳಿ ದೃಢೀಕರಣ ನೀಡಬೇಕು. ಜಾತಿ ಪ್ರಮಾಣ ಪತ್ರದಲ್ಲಿನ ಆರ್‌ಡಿ ಸಂಖ್ಯೆಯನ್ನೂ ನಮೂದಿಸಬೇಕಾಗಲಿದೆ.ಮೃತಪಟ್ಟವರಿಗೂ ₹120 ಕೋಟಿ ಪಾವತಿ:

‘ಗೃಹಲಕ್ಷ್ಮೀ’ ಯೋಜನೆಯಡಿ ರಾಜ್ಯದಲ್ಲಿ ಸುಮಾರು 1,24,10,000 ಮಹಿಳೆಯರು ಫಲಾನುಭವಿಗಳಾಗಿದ್ದು, ಇಲ್ಲಿಯವರೆಗೂ ತಲಾ ₹60 ಸಾವಿರ ಪಾವತಿಸಲಾಗಿದೆ. 1.48 ಲಕ್ಷ ಮಹಿಳೆಯರು ಮೃತಪಟ್ಟ ನಂತರವೂ ಅವರ ಖಾತೆಗಳಿಗೆ ₹120 ಕೋಟಿ ಪಾವತಿಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಇದೀಗ ಬಯೋಮೆಟ್ರಿಕ್‌ ದೃಢೀಕರಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.

ಫಲಾನುಭವಿಗಳು ಮೃತಪಟ್ಟ ನಂತರ ಇದನ್ನು ಅಂಗನವಾಡಿ ಕಾರ್ಯಕರ್ತೆಯರು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು (ಸಿಡಿಪಿಒ) ತಕ್ಷಣ ಸಂಬಂಧಪಟ್ಟವರ ಗಮನಕ್ಕೆ ತಂದು ಹಣ ಪಾವತಿಯಾಗುವುದನ್ನು ತಪ್ಪಿಸಬೇಕು ಎಂದು ಈಗಾಗಲೇ ಸೂಚನೆ ನೀಡಲಾಗಿದೆ. ಮೃತಪಟ್ಟವರಿಗೆ ಸಂದಾಯವಾದ ಹಣ ಖಾತೆಯಲ್ಲಿದ್ದರೆ ಅದನ್ನು ಸ್ಥಗಿತಗೊಳಿಸುವಂತೆ ಈಗಾಗಲೇ ಬ್ಯಾಂಕ್‌ಗಳಿಗೂ ಸ್ಪಷ್ಟಪಡಿಸಿದ್ದು ಹಣ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನನ್ನ ಕಂಡರೆ ವಿರೋಧ ಪಕ್ಷಕ್ಕೆ ಅಸೂಯೆ: ಡಿಕೆಶಿ ಆರೋಪ
ಸುಧೀರ್ಘ ಪ್ರಧಾನಿ ದಾಖಲೆ: ಬಿಜೆಪಿ ಸಂಭ್ರಮ