ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಭಾರತ ಸರ್ಕಾರದ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಜಿಲ್ಲಾಡಳಿತ, ಜಿಪಂ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜನಜಾತೀಯ ಗೌರವ ದಿವಸ್ ಅಂಗವಾಗಿ ಆಯೋಜಿಸಲಾಗಿದ್ದ ಭಗವಾನ್ ಶ್ರೀ ಬಿರ್ಸಾಮುಂಡಾ ಜಯಂತಿ ಮಹೋತ್ಸವ ಹಾಗೂ ಪಿಎಂ ಜನ್ಮನ್ ಕಾರ್ಯಕ್ರಮದ ಫಲಾನುಭವಿಗಳಿಗೆ ದಾಖಲಾತಿ, ಸವಲತ್ತು ವಿತರಣೆ, ಎಂಪಿಸಿ ಶಂಕುಸ್ಥಾಪನೆ ಮತ್ತು ದರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನದ ಸಮಾರಂಭ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಪ್ರತಿಮ ದೇಶಪ್ರೇಮಿಯಾಗಿದ್ದ ಆದಿವಾಸಿಗಳ ಮಹಾನ್ ನಾಯಕ ಬಿರ್ಸಾಮುಂಡಾ ಅವರನ್ನು ಅತ್ಯಂತ ಕಿರಿಯ ವಯಸ್ಸಿನ ಸ್ವಾತಂತ್ರ್ಯ ಹೋರಾಟಗಾರ ಎಂದರೇ ತಪ್ಪಾಗಲಾರದು. ಬಿರ್ಸಾಮುಂಡಾ ಅವರು ಸ್ವಾತಂತ್ರ್ಯ ಹೋರಾಟಕ್ಕೆ ತಾತ್ವಿಕ ನೆಲೆಗಟ್ಟು ಒದಗಿಸಿಕೊಟ್ಟರು. ಆದಿವಾಸಿ ಸಂಸ್ಕೃತಿ ರಕ್ಷಣೆಗೆ ಬಿರ್ಸಾಮುಂಡಾ ಅವರ ಕೊಡುಗೆ ಅಪಾರವಾಗಿದೆ. ಅವರ ಆದರ್ಶ ದೇಶಪ್ರೇಮವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.ಆದಿವಾಸಿ ಜನರು ಚಿಕ್ಕವಯಸ್ಸಿನಲ್ಲಿಯೇ ಹಲವು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇದು ದುರದೃಷ್ಟಕರ ಸಂಗತಿ. ಪರಿಶಿಷ್ಟರ ಕಲ್ಯಾಣಕ್ಕಾಗಿ ಸರ್ಕಾರ ಹಲವು ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸಾಮಾಜಿಕ, ಶೈಕ್ಷಣಿಕ, ಅರ್ಥಿಕ, ರಾಜಕೀಯವಾಗಿ ಆದಿವಾಸಿಗಳು ಮುಂಚೂಣಿಗೆ ಬರಬೇಕು. ಆದಿವಾಸಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರವು ಆಶ್ರಮ ಶಾಲೆಗಳನ್ನು ಸ್ಥಾಪಿಸಿದೆ. ಅವುಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ಬಿರ್ಸಾಮುಂಡಾ ಅವರು ಆದಿವಾಸಿಗಳಿಗೆ ಹಕ್ಕುಗಳನ್ನು ಹೋರಾಟದ ಮೂಲಕ ಕೊಡಿಸಿದ್ದರು. ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಆದಿವಾಸಿ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು. ಹೆಚ್ಚಿನ ಉದ್ಯೋಗ ಸೃಷ್ಟಿಯಾಗಬೇಕು. ಮಲೆಮಹದೇಶ್ವರ ಬೆಟ್ಟದ ಆಸುಪಾಸಿನ 10 ಹಳ್ಳಿಗಳಿಗೆ ಮೂಲಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್ ಸರಬರಾಜಿಗೆ ಟೆಂಡರ್ ಆಗಿದೆ. ಸಿಎಂ ಜಿಲ್ಲೆಗೆ ಭೇಟಿ ನೀಡಿ ಚಾಲನೆ ನೀಡಲಿದ್ದಾರೆ ಎಂದರು.
ಇತ್ತೀಚೆಗೆ ಪ್ರಚಲಿತವಾಗುತ್ತಿರುವ ಬಿರ್ಸಾಮುಂಡಾ ಅವರ ಜೀವನ ಚರಿತೆ ಬಗ್ಗೆ ಇತಿಹಾಸಕಾರರು ಹೆಚ್ಚಿನ ಬೆಳಕು ಚೆಲ್ಲಬೇಕು. ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಬ್ರಿಟೀಷರು ಭಾರತವನ್ನು ವಸಾಹತುವಾಗಿ ಮಾಡಿಕೊಂಡು ಪಾಶ್ವಿಮಾತ್ಯ ಸಂಸ್ಕೃತಿಯನ್ನು ಹೇರುವ ಮೂಲಕ ದೇಶದ ಮೂಲಸಂಸ್ಕೃತಿಗೆ ಕೊಡಲಿಪೆಟ್ಟು ನೀಡಿದ್ದರು. ಇವರ ವಿರುದ್ಧ ಹೋರಾಡಿದ ಬಿರ್ಸಾಮುಂಡಾ ಹೋರಾಟದ ಅರಿವು ಪ್ರತಿಯೊಬ್ಬರಿಗೂ ಮೂಡಬೇಕು. ಆದಿವಾಸಿ ಜನರ ಧೃವತಾರೆಯಾಗಿ ಇಂದಿಗೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದರು. ಭೂ ಸಂಬಂಧಿ ಕಾಯ್ದೆಗಳನ್ನು ಜಾರಿಗೊಳಿಸಿದ ಬ್ರಿಟಿಷರು ಆದಿವಾಸಿಗಳು ಕಾಡಿನಲ್ಲಿ ವಾಸಿಸುವ ಹಕ್ಕುಗಳನ್ನು ಅರಣ್ಯ ಸಂರಕ್ಷಣೆ ನೆಪದಲ್ಲಿ ಕಿತ್ತುಕೊಂಡರು. ರೈಲ್ವೆ ಯೋಜನೆಗೆ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಲು ಮುಂದಾದರು. ಇದೆಲ್ಲವನ್ನು ಮನಗಂಡಿದ್ದ ಬಿರ್ಸಾಮುಂಡಾ ಬ್ರಿಟೀಷರ ವಿರುದ್ಧ ಆರಂಭವಾದ ಸ್ವಾತಂತ್ರ್ಯ ಹೋರಾಟಕ್ಕೆ ಸೈದ್ದಾಂತಿಕ ಹಾಗೂ ತಾತ್ವಿಕ ನೆಲೆ ಕಲ್ಪಿಸಿದರು. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಬಿರ್ಸಾಮುಂಡಾ ಗೆರಿಲ್ಲಾ ಯುದ್ಧತಂತ್ರ ಮೂಲಕ ಹಿಮ್ಮೆಟ್ಟುವಂತೆ ಮಾಡಿದರು. ಇದು ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿದಾಯಕವಾಗಿತ್ತು ಎಂದು ಡಾ.ಮಹದೇವಸ್ವಾಮಿ ಹೇಳಿದರು.