ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ ಗುರುವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು, ₹ 16.17 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಹಾವೇರಿ: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ ಗುರುವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು, ₹ 16.17 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಶಿಗ್ಗಾಂವಿ ಚುನಾವಣಾಧಿಕಾರಿಗೆ ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಸ್ಥಿರಾಸ್ತಿ ಮತ್ತು ಚರಾಸ್ತಿಯನ್ನು ಘೋಷಿಸಿಕೊಂಡಿದ್ದರು. ಭರತ್ ₹ 2.03 ಲಕ್ಷ ನಗದು ಹಣ ಹೊಂದಿದ್ದಾರೆ. ವಿವಿಧ ಬ್ಯಾಂಕ್, ಹಣಕಾಸು ಸಂಸ್ಥೆಗಳಲ್ಲಿ ₹ 4.05 ಲಕ್ಷ ನಿಶ್ಚಿತ ಠೇವಣಿ, ಉಳಿತಾಯ ಖಾತೆಗಳಲ್ಲಿ ₹ 1.19 ಕೋಟಿ ಹೊಂದಿದ್ದಾರೆ. ಸಾರ್ವಜನಿಕ ಕಂಪನಿಗಳಲ್ಲಿ ₹ 1.74 ಲಕ್ಷ , ಖಾಸಗಿ ಕಂಪನಿಗಳಲ್ಲಿ ₹ 50 ಸಾವಿರ, ಪಾಲುದಾರಿಕೆಯಲ್ಲಿ ₹ 1.23 ಕೋಟಿ ರು. ಬಂಡವಾಳ ತೊಡಗಿಸಿದ್ದಾರೆ. ಗೋಲ್ಡ್ ಚಿಟ್ ಫಂಡ್ನಲ್ಲಿ ₹ 70 ಸಾವಿರ, ಮ್ಯೂಚುವಲ್ ಫಂಡ್ನಲ್ಲಿ ₹ 10.20 ಲಕ್ಷ ತೊಡಗಿಸಿದ್ದಾರೆ. ₹ 81.61 ಲಕ್ಷ ಮೌಲ್ಯದ ಚಿನ್ನಾಭರಣ ಹೊಂದಿರುವ ಇವರ ಬಳಿ ಯಾವುದೇ ವಾಹನವಿಲ್ಲ. ಇನ್ನಿತರ ಆದಾಯ, ಬಡ್ಡಿ ಸೇರಿದಂತೆ ಒಟ್ಟು ₹ 3.79 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ.ಇನ್ನು ಬೆಂಗಳೂರಿನ ಆರ್.ಟಿ.ನಗರದಲ್ಲಿ ಒಂದು ವಾಸದ ಮನೆ, ಬೆಂಗಳೂರಿನ ಸೆಂಚುರಿ ಎಥೋಸ್ ಅಪಾರ್ಟ್ಮೆಂಟ್ನಲ್ಲಿ ಪ್ಲಾಟ್ ಸೇರಿದಂತೆ ₹ 5.50 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.
ಪತ್ನಿ ಇಬ್ಬನಿ ಬಳಿ ₹ 1.43 ಲಕ್ಷ ನಗದು ಹಣ, ವಿವಿಧ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿ, ಉಳಿತಾಯ ಖಾತೆಗಳಲ್ಲಿ ₹ 56.32 ಲಕ್ಷ ಹೊಂದಿದ್ದಾರೆ. ವಿವಿಧ ಕಂಪನಿಗಳಲ್ಲಿ ₹ 33 75 ಲಕ್ಷ ಬಂಡವಾಳ ಹೂಡಿಕೆ ಮಾಡಿದ್ದು, ಪಾಲುದಾರಿಕೆ ವ್ಯವಹಾರದಲ್ಲಿ ₹ 31.12 ಲಕ್ಷ ತೊಡಗಿಸಿದ್ದಾರೆ. ಇವರ ಬಳಿ ಮಾರುತಿ ಸ್ವಿಫ್ಟ್ ಕಾರು ಇದ್ದು, ₹ 1.73 ಕೋಟಿ ಮೌಲ್ಯದ 2702 ಗ್ರಾಂ ಚಿನ್ನಾಭರಣ ಸೇರಿದಂತೆ ಒಟ್ಟು ₹ 3.64 ಕೋಟಿ ಮೌಲ್ಯದ ಸ್ಥಿರಾಸ್ತಿಯಿದೆ. ಬೆಂಗಳೂರಿನ ತಾವರೆಕೆರೆ ಹೋಬಳಿ ಅಜ್ಜನಹಳ್ಳಿ ಗ್ರಾಮದಲ್ಲಿ ಒಂದು ಸೈಟ್, ಕೆಂಗೇರಿಯಲ್ಲಿ ಕೆಎಚ್ಬಿ ನಿವೇಶನ ಹಾಗೂ ಸೆಂಚುರಿ ಎಥೋಸ್ ಅಪಾರ್ಟ್ಮೆಂಟ್ನಲ್ಲಿ ಪ್ಲಾಟ್ ಸೇರಿದಂತೆ ₹ 2.83 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇವರ ಪುತ್ರನ ಬಳಿ ₹ 40.47 ಲಕ್ಷ ಮೌಲ್ಯದ ಚರಾಸ್ತಿಯಿದೆ. ಒಟ್ಟು ಭರತ್ ಬೊಮ್ಮಾಯಿ ಅವರು 16.17 ಕೋಟಿ ರು. ಮೌಲ್ಯದ ಆಸ್ತಿ ಹೊಂದಿದ್ದಾರೆ.
ಅಪ್ಪನಿಂದ ಸಾಲ: ಭರತ್ ಬೊಮ್ಮಾಯಿ ಅವರು ಗೃಹ ಸಾಲ, ವೈಯಕ್ತಿಕ ಸಾಲ ಸೇರಿದಂತೆ ಒಟ್ಟು ₹ 2.32 ಕೋಟಿ ಸಾಲ ಹೊಂದಿದ್ದಾರೆ. ತಂದೆ ಬಸವರಾಜ ಬೊಮ್ಮಾಯಿ ಅವರಿಂದ ₹ 5.74 ಲಕ್ಷ ಸಾಲ ಪಡೆದಿದ್ದಾರೆ.
ಭರತ್ ಅವರ ಪತ್ನಿ ಇಬ್ಬನಿ ಅವರ ಹೆಸರಿನಲ್ಲಿ ಗೃಹ ಸಾಲ, ವಾಹನ ಸಾಲ ಸೇರಿದಂತೆ 1 ಕೋಟಿ ರು ಸಾಲವಿದೆ.
ಅಮೆರಿಕ, ಸಿಂಗಾಪುರದಲ್ಲಿ ಶಿಕ್ಷಣ: ಭರತ್ ಬೊಮ್ಮಾಯಿ ಅವರು ಅಮೆರಿಕದ ಫರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ, ಸಿಂಗಾಪುರದ ಮ್ಯಾನೇಜ್ಮೆಂಟ್ ವಿವಿಯಲ್ಲಿ ಮಾಸ್ಟರ್ ಆಫ್ ಸೈನ್ಸ್ ಇನ್ ಇನ್ನೋವೇಶನ್ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.