ಜೆಡಿಎಸ್ಗೆ ಪೀಕಲಾಟ । ಅಧಿಕೃತವಾಗಿ ಎನ್ಡಿಎ ಅಭ್ಯರ್ಥಿ ಪ್ರಕಟ ಇಲ್ಲ । ಬಿಜೆಪಿಯಿಂದ ಸ್ವತಂತ್ರವಾಗಿ ಲೋಕಸಭೆಗೆ ಸ್ಪರ್ಧೆ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಈ ಬಾರಿ ಹಾಸನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎನ್ನುವ ಮೂಲಕ ಬಿಜೆಪಿ ಮುಖಂಡ ಕಿರಣ್ಗೌಡ ಜೆಡಿಎಸ್ ಅಭ್ಯರ್ಥಿಗೆ ಚಾಟಿ ಬೀಸಿದ್ದಾರೆ. ಅಲ್ಲದೆ ಅಧಿಕೃತವಾಗಿ ಬಹಿರಂಗ ಪ್ರಚಾರ ಆರಂಭಿಸಿದ್ದಾರೆ.ಪಟ್ಟಣದ ೪೦ ಅಡಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಅಧಿಕೃತವಾಗಿ ಎನ್ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಎಂದು ಎಲ್ಲೂ ಹೆಸರು ಪ್ರಕಟವಾಗಿಲ್ಲ, ಬಿಜೆಪಿ ಪಕ್ಷದ ಕಾರ್ಯಕರ್ತರು, ಹೈಕಮಾಂಡ್ ಇದುವರೆಗೂ ಯಾವುದೇ ಅಭ್ಯರ್ಥಿಯಾಗಲೀ ಬೇರೆ ಪಕ್ಷದ ಪರವಾಗಿ ಆಗಲೀ ನಾನು ಎಲ್ಲೂ ಮಾತನಾಡಿಲ್ಲ’ ಎಂದು ಹೇಳಿದರು.
‘ಬಿಜೆಪಿಯವರು ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡರೆ ನಾನು ಸ್ವತಂತ್ರ ಪಕ್ಷದ ಅಭ್ಯರ್ಥಿಯೇ ಹೊರೆತು ಎನ್ಡಿಎ ಪಕ್ಷದ ಅಭ್ಯರ್ಥಿ ಅಲ್ಲ. ಏಕೆಂದರೆ ಲೋಕಸಭಾ ಚುನಾವಣೆಯಲ್ಲಿ ಹಾಸನ ಜಿಲ್ಲೆಯ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧನಿರುತ್ತೇನೆ, ಅದರಂತೆ ನಾನು ಶುಕ್ರವಾರ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಜಿಯನ್ನು ಪಡೆದಿದ್ದೇನೆ. ಅದರಲ್ಲೂ ಕೆಲವು ಪಕ್ಷದಲ್ಲಿ ಆಗುವ ಬದಲಾವಣೆಯಿಂದ ನನಗೆ ಮುಂದಿನ ದಿನಗಳಲ್ಲಿ ಎನ್ಡಿಎ ಪಕ್ಷದಿಂದ ಏನಾದರೂ ಅವಕಾಶ ನೀಡಿದರೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧನಿರುತ್ತೇನೆ. ಹಾಗೇನಾದರೂ ಭಾರತೀಯ ಜನತಾ ಪಾರ್ಟಿಯಿಂದ ಟಿಕೆಟ್ ನೀಡಿದರೆ ಅದರಿಂದಲೂ ಕೂಡ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧನಿರುತ್ತೇನೆ. ಅದರ ಅನ್ವಯ ಇಂದು ಚನ್ನರಾಯಪಟ್ಟಣ ತಾಲೂಕಿಗೆ ಭೇಟಿ ನೀಡಿ ಕೆಲ ಮತಬಾಂಧವರನ್ನು ಮತ್ತು ಕೆಲ ಸ್ನೇಹಿತರನ್ನು ಭೇಟಿ ಮಾಡಲು ಆಗಮಿಸಿದ್ದೇನೆ’ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಪುರಸಭಾ ಸದಸ್ಯ ಮೋಹನ್, ಸ್ನೇಹಿತರಾದ ರಘು, ಅಶೋಕ್, ಮಂಜುನಾಥ್, ಗೂರನಹಳ್ಳಿ ಬಸವರಾಜ್, ಗುಬ್ಬಿ, ಮುನ್ನಾ ಹಾಜರಿದ್ದರು.
ಚನ್ನರಾಯಪಟ್ಟಣದ ೪೦ ಅಡಿ ಆಂಜನೇಯ ಸ್ವಾಮಿ ದೇವಸ್ಥಾನದ ಎದುರು ಬಿಜೆಪಿ ಮುಖಂಡ ಕಿರಣ್ಗೌಡ ಸುದ್ದಿಗಾರರೊಂದಿಗೆ ಮಾತನಾಡಿದರು.