ವಾಲ್ಮೀಕಿ ನಿಗಮ ಅಕ್ರಮದಲ್ಲಿ ಸಚಿವ ಶರಣಪ್ರಕಾಶ್‌ ಕೂಡ ಭಾಗಿ: ಅಶ್ವತ್ಥ್‌

KannadaprabhaNewsNetwork |  
Published : Jun 08, 2024, 12:37 AM IST

ಸಾರಾಂಶ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ವೈದ್ಯಕೀಯ ಸಚಿವ ಶರಣಪ್ರಕಾಶ ಪಾಟೀಲ್ ಅವರೂ ಶಾಮೀಲಾಗಿರುವ ಅನುಮಾನವಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಆಪಾದಿಸಿದ್ದಾರೆ.

- ನಾಗೇಂದ್ರ ಜತೆ ಹಗರಣ ಮುಚ್ಚಿಹಾಕುವ ಬಗ್ಗೆ ಶರಣ್‌ ಚರ್ಚೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ವೈದ್ಯಕೀಯ ಸಚಿವ ಶರಣಪ್ರಕಾಶ ಪಾಟೀಲ್ ಅವರೂ ಶಾಮೀಲಾಗಿರುವ ಅನುಮಾನವಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಆಪಾದಿಸಿದ್ದಾರೆ.ಶುಕ್ರವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಕಳೆದ ಮೇ 25ರಂದು ಶರಣಪ್ರಕಾಶ ಪಾಟೀಲ್ ತಮ್ಮ ಕೊಠಡಿಯಲ್ಲಿ ಈ ಹಗರಣಕ್ಕೆ ಸಂಬಂಧಪಟ್ಟಂತೆ ಸಚಿವರಾಗಿದ್ದ ಬಿ.ನಾಗೇಂದ್ರ ಹಾಗೂ ವಾಲ್ಮೀಕಿ ನಿಗಮದ ಅಧ್ಯಕ್ಷರಾಗಿರುವ ಶಾಸಕ ಬಸವನಗೌಡ ದದ್ದಲ್ ಜೊತೆ ಈ ಪ್ರಕರಣ ಮುಚ್ಚಿಹಾಕುವ ಬಗ್ಗೆ ಚರ್ಚಿಸಿದ್ದಾರೆ. ಹೀಗಾಗಿಯೇ ನಿಗಮದ ಮುಖ್ಯ ಲೆಕ್ಕಾಧಿಕಾರಿ ಪರಶುರಾಂ ಅವರು ತಮ್ಮ ಅಫಿಡವಿಟ್‍ನಲ್ಲಿ ಸಾಕ್ಷಿ ನಾಶ ಆಗದಂತೆ ನೋಡಿಕೊಳ್ಳಲು ಕೋರಿ ಕೋರ್ಟಿಗೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.ವಾಲ್ಮೀಕಿ ನಿಗಮದ ಬ್ರಹ್ಮಾಂಡ ಭ್ರಷ್ಟಾಚಾರ ದೇಶದ ಗಮನ ಸೆಳೆದಿದೆ. ದಲಿತರ ಹಣವನ್ನು ಸರ್ಕಾರ ಲೂಟಿ ಹೊಡೆಯಲು ಮುಂದಾಗಿತ್ತು. ಸರ್ಕಾರದ ಖಜಾನೆಯ ಹಗಲು ದರೋಡೆ ಬಯಲಾಗಿದೆ. ಎಲ್ಲರ ಭಾಗಿತ್ವ, ಸರ್ಕಾರದ ಸಹಮತ ಇಲ್ಲದೆ, ಎಲ್ಲರ ಗಮನಕ್ಕೆ ಬಾರದೆ ರಾಜ್ಯದ ಖಜಾನೆಯಿಂದ ಹಣ ವರ್ಗಾವಣೆ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

===ಅಕ್ರಮ ಹಣ ವರ್ಗಾವಣೆ ಸರ್ಕಾರದ ಸಹಮತ ಇಲ್ಲದೇ ನಡೆಯಲು ಸಾಧ್ಯವಿಲ್ಲ. ಹಗರಣದಡಿ ದೊಡ್ಡ ಜಾಲ ಇದ್ದಂತಿದೆ. ಎಲ್ಲರೂ ಅನುಕೂಲ ಪಡೆದುಕೊಂಡಂತೆ ಕಾಣುತ್ತಿದೆ. ಹಾಗಾಗಿ ಎಲ್ಲ ಸಂದೇಹಗಳಿಗೆ ಉತ್ತರ ಕೊಟ್ಟು ಕ್ರಮ ವಹಿಸಬೇಕಿದೆ. ಕರ್ಮಕಾಂಡ ಮಾಡಿ ಭಂಡತನದಲ್ಲಿ ಏನೂ ಉತ್ತರ ಕೊಡದೆ ನಾಗೇಂದ್ರ ಅವರ ರಾಜೀನಾಮೆಯನ್ನು ಅತ್ಯಂತ ಕಷ್ಟಪಟ್ಟು ಪಡೆದಿದ್ದಾರೆ. ನಾಗೇಂದ್ರ ಅವರ ಬಂಧನ ಆಗಬೇಕಿತ್ತು. ಬಂಧಿಸುವ ಕಾರ್ಯವನ್ನು ಸಿಬಿಐನವರಿಗೆ ಬಿಡಿ ಎಂದರು.ರಾಜ್ಯ ವಕ್ತಾರ ನರೇಂದ್ರ ರಂಗಪ್ಪ, ಬಿಜೆಪಿ ಎಸ್.ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು ಉಪಸ್ಥಿತರಿದ್ದರು.

==- ಬಿಜೆಪಿ ಶಾಸಕ ಅಶ್ವತ್ಥನಾರಾಯಣ ಗಂಭೀರ ಆರೋಪ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರಿಕೆಟ್ ಪಂದ್ಯಾವಳಿ: ಗೆದ್ದು ಬೀಗಿದ ಆಯುರ್ವೇದ ಕಾಲೇಜು ತಂಡ
ಪರಿಶ್ರಮದಿಂದ ಪ್ರತಿಫಲ ಸಾಧ್ಯ: ಇಒ ಬಡಿಗೇರ