ಯಲ್ಲಾಪುರ: ವಿಶ್ವದಲ್ಲೇ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿದ ಪಕ್ಷ ಬಿಜೆಪಿ. ಸೆ. 2ರಿಂದ ಸದಸ್ಯತ್ವ ಅಭಿಯಾನ ಪ್ರಾರಂಭಗೊಂಡಿದ್ದು, ದೇಶದಲ್ಲಿ 10 ಕೋಟಿಗೂ ಹೆಚ್ಚಿನ ಸದಸ್ಯರನ್ನು ಮಾಡಬೇಕಿದೆ. ಜಿಲ್ಲೆಯಲ್ಲಿ ನಾಲ್ಕು ಲಕ್ಷ ಸದಸ್ಯರನ್ನು ಮಾಡಬೇಕಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಮಲೆನಾಡು ಪ್ರದೇಶದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಇದೆ. ಪ್ರಧಾನಿ ನರೇಂದ್ರ ಮೋದಿ ಹೊಸ ಯೋಜನೆ ರೂಪಿಸಿದ್ದಾರೆ. ಅದರಿಂದ ಜಿಲ್ಲೆಗೆ 250 ಟವರ್ ಬರಲಿದೆ. ಹಿಂದೆ ಇದ್ದ ಟವರ್ಗಳಿಗೆ ಬ್ಯಾಟರಿ ಅಳವಡಿಸಿ ಸಡಿಪಡಿಸಲಾಗುವುದು ಎಂದರು.
ಸನಾತನ ಹಿಂದೂ ಧರ್ಮ ಜಗತ್ತಿಗೆ ಬೇಕಿದೆ. ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕಿದೆ. ಈ ಕಾರ್ಯವನ್ನು ಬಿಜೆಪಿ ಮಾತ್ರ ಮಾಡಲು ಸಾಧ್ಯ ಎಂದರು.ಅಧ್ಯಕ್ಷತೆ ವಹಿಸಿದ್ದ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ನಮ್ಮದು ವಿಶ್ವದಲ್ಲಿ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿದ ಪಕ್ಷ. ನಮ್ಮ ತಾಲೂಕಿನಲ್ಲಿ 25,000 ಸದಸ್ಯರನ್ನು ಮಾಡಬೇಕಿದೆ. ಎಲ್ಲರ ಸಹಕಾರ ಬೇಕಿದೆ ಎಂದ ಅವರು, ಯಲ್ಲಾಪುರದಲ್ಲಿ ಹಲವು ಸಮಸ್ಯೆಗಳಿವೆ. ಸಂಸದರು, ಶಾಸಕರಾಗಿ ನಮ್ಮ ಪಕ್ಷಕ್ಕೆ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎಂದರು.
ವೇದಿಕೆಯಲ್ಲಿ ಎಂಎಲ್ಸಿ ಶಾಂತರಾಮ ಸಿದ್ದಿ, ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ರಾಜ್ಯ ವಿಕೇಂದ್ರೀಕರಣ ಪಂಚಾಯತ್ ರಾಜ್ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ಪ್ರಮುಖರಾದ ಉಮೇಶ ಭಾಗವತ, ರೇಖಾ ಹೆಗಡೆ, ಗೋಪಾಲಕೃಷ್ಣ ಹಂಡರ್ಮನೆ, ಗೋಪಾಲಕೃಷ್ಣ ಗಾಂವ್ಕರ, ಸುಭಾಸ ನಸಾನಿ, ಪ್ರೇಮ ಕುಮಾರ, ರಾಘು ಭಟ್, ಗಣಪತಿ ಮಾನಿಗದ್ದೆ, ಶಿವಲಿಂಗಯ್ಯ ಹಿರೇಮಠ, ಶೃತಿ ಹೆಗಡೆ ಮತ್ತಿತರರು ಇದ್ದರು. ತಾಲೂಕು ಕಾರ್ಯದರ್ಶಿ ನಟರಾಜ್ ಗೌಡರ್ ಸ್ವಾಗತಿಸಿದರು. ರವಿ ಕೈಟ್ಕರ್ ನಿರ್ವಹಿಸಿದರು.