ಬೇಲೂರು ಸರ್ಕಾರಿ ಶಾಲೆಯಲ್ಲಿ ಮತದಾನ । ಮೂರನೇ ಬಾರಿ ಮೋದಿ ಪ್ರಧಾನಿ
ಪ್ರಧಾನಿ ನರೇಂದ್ರ ಮೋದಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಮೂರನೇ ಭಾರಿ ಪ್ರಧಾನಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಶಾಸಕ ಎಚ್.ಕೆ.ಸುರೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಕೋಟೆ ಬಾಲಕರ ಸರ್ಕಾರಿ ಶಾಲೆಯಲ್ಲಿ ಮತದಾನ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾಗರಿಕರು ಸಂವಿದಾನ ನೀಡಿದ ಹಕ್ಕನ್ನು ಚಲಾಯಿಸುವ ಮೂಲಕ ದೇಶದಲ್ಲಿ ಸುಭದ್ರ ಆಡಳಿತಕ್ಕೆ ಮುನ್ನುಡಿ ಬರೆಯಬೇಕಿದೆ. ನಾನು ಕೂಡ ಇಂದು ಮತಗಟ್ಟೆಗೆ ಆಗಮಿಸಿ ನನ್ನ ಹಕ್ಕನ್ನು ಚಲಾಯಿಸಿದ್ದೇನೆ. ಹಾಸನ ಲೋಕಸಭಾ ಕ್ಷೇತ್ರ ಎನ್ಡಿಎ ಅಭ್ಯರ್ಥಿ ಗೆಲುವಿಗೆ ಮೈತ್ರಿ ಪಕ್ಷಗಳು ಒಟ್ಟಾಗಿ ಪ್ರಚಾರ ಕಾರ್ಯ ನಡೆಸಿದ್ದು, ಎನ್ಡಿಎ ಅಭ್ಯರ್ಥಿ ಗೆಲುವು ಸಾದ್ಯವಾಗಲಿದೆ’ ಎಂದು ಹೇಳಿದರು.‘ನಾನು ಈಗಾಗಲೇ ಕ್ಷೇತ್ರದ ಮತಗಟ್ಟೆಗಳಿಗೆ ಧಾವಿಸಿ ಅಲ್ಲಿನ ಪರಿಸ್ಥಿತಿ ಬಗ್ಗೆ ತಿಳಿದಿದ್ದು, ಎನ್ಡಿಎ ಅಭ್ಯರ್ಥಿ ಪರ ಸಕಾರತ್ಮಕ ಸ್ಪಂದನೆ ದೊರೆತಿದೆ. ನಮಗೆ ದೇಶಕ್ಕೆ ಮೂರನೇ ಭಾರಿ ನರೇಂದ್ರ ಮೋದಿ ಯವರನ್ನು ಪ್ರಧಾನಿ ಮಾಡುವುದು ಮುಖ್ಯ ಗುರಿಯಾಗಿದೆ. ಕಳೆದ ೧೦ ವರ್ಷದಲ್ಲಿ ಮೋದಿ ಸರ್ಕಾರ ನೀಡಿದ ಮಹತ್ವಪೂರ್ಣ ಯೋಜನೆಗಳು ನಮಗೆ ಫಲ ನೀಡಲಿದೆ’ ಎಂದು ತಿಳಿಸಿದರು.
ಲೋಕಸಭಾ ಚುನಾವಣೆ-೨೦೨೪ ಅಂಗವಾಗಿ ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಕೆ.ಸುರೇಶ್ ಬೇಲೂರು ಪಟ್ಟಣದ ಮತಗಟ್ಟೆಯಲ್ಲಿ ಮತದಾನ ನಡೆಸಿದರು.