ಮಿಡ್‌ನೈಟ್‌ ರೌಂಡ್ಸ್‌ ವಿರುದ್ಧ ಬಿಜೆಪಿ ಆಕ್ಷೇಪ

KannadaprabhaNewsNetwork | Published : Jun 4, 2025 1:06 AM
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಹಿಂಸೆ ತಡೆಗೆ ಪೊಲೀಸರ ಮಿಡ್‌ನೈಟ್‌ ಕಾರ್ಯಾಚರಣೆ ಬೆನ್ನಲ್ಲೇ ಬಿಜೆಪಿ ನಿಯೋಗ ಮಂಗಳೂರನ ಪೊಲೀಸ್‌ ಆಯುಕ್ತ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಹಿಂಸೆ ತಡೆಗೆ ಪೊಲೀಸರ ಮಿಡ್‌ನೈಟ್‌ ಕಾರ್ಯಾಚರಣೆ ಬೆನ್ನಲ್ಲೇ ಬಿಜೆಪಿ ನಿಯೋಗ ಮಂಗಳೂರನ ಪೊಲೀಸ್‌ ಆಯುಕ್ತ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಮಂಗಳವಾರ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿತು.

ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಶಾಸಕ ಹರೀಶ್‌ ಪೂಂಜಾ ಅವರು, ಒಂದು ಸಮುದಾಯವನ್ನು ಕೇಂದ್ರೀಕರಿಸಿ ರಾತ್ರಿ ಮನೆಗಳಿಗೆ ಪೊಲೀಸರು ತೆರಳಿ ತನಿಖೆ ನಡೆಸುವುದು ಸರಿಯಲ್ಲ. ಈ ಬಗ್ಗೆ ಪೊಲೀಸ್‌ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿದೆ. ಪೊಲೀಸರ ಅತಿರೇಕದ ಕ್ರಮ ಮುಂದುವರಿದರೆ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.ಶಾಸಕ ಡಾ। ಭರತ್ ಶೆಟ್ಟಿ ಸುದ್ದಿಗಾರರಲ್ಲಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅವರಿಗೆ ಬಿಜೆಪಿ ಸಹಕಾರ ನೀಡಲಿದೆ. ಕಾಂಗ್ರೆಸ್ ನಾಯಕರು ಪೊಲೀಸ್ ಠಾಣೆಗಳನ್ನು ಕಾಂಗ್ರೆಸ್ ಕಚೇರಿ ರೀತಿ ಬಳಸುತ್ತಿದ್ದಾರೆ. ಇಂಥವುಗಳಿಗೆ ಕಡಿವಾಣ ಹಾಕುವಂತೆ ಅಧಿಕಾರಿಗಳಿಗೆ ಹೇಳಿದ್ದೇವೆ. ಯಾವುದೇ ರಾಜಕೀಯ ಹಸ್ತಕ್ಷೇಪ ಇಲ್ಲದೇ ತನಿಖೆ ನಡೆಯಲಿ ಎಂದಿದ್ದೇವೆ ಎಂದರು.ನಡುರಾತ್ರಿಯಲ್ಲಿ ಕಾರ್ಯಕರ್ತರ ಮನೆಗೆ ಪೊಲೀಸರು ಹೋಗೋದನ್ನು ಒಪ್ಪಲು ಸಾಧ್ಯವಿಲ್ಲ. ಯಾವುದೇ ಕೇಸ್ ಇಲ್ಲದ ಹಿರಿಯರ ಮನೆಗಳಿಗೆ ಹೋಗುವುದು ಸರಿಯಲ್ಲ ಎಂದು ಪೊಲೀಸರಿಗೆ ಹೇಳಿದ್ದೇವೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ನೇತೃತ್ವದಲ್ಲಿ ಸಭೆ ನಡೆಸಿ ಶಾಸಕರ ನಿಯೋಗ ಪೊಲೀಸ್‌ ಅಧಿಕಾರಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡುವುದು ಎಂದು ತೀರ್ಮಾನಿಸಲಾಯಿತು.‘ತಾಕತ್ತು ಇದ್ದರೆ ಪುತ್ತಿಲರನ್ನು ಗಡಿಪಾರು ಮಾಡಿ ನೋಡಿ’

ಅರುಣ್ ಕುಮಾರ್ ಪುತ್ತಿಲ ಸೇರಿ 36 ಜನರ ವಿರುದ್ಧ ಗಡಿಪಾರು ಮಾಡುವ ಕಾನೂನು ಪ್ರಕ್ರಿಯೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಚರ್ಚೆಗಳು ಶುರುವಾಗಿವೆ.

ಈ ವಿಚಾರಕ್ಕೆ ಯುವಕನೊಬ್ಬ ಸೆಲ್ಫಿ ವಿಡಿಯೋ ಮಾಡಿ ಆಕ್ರೋಶ ಹೊರಹಾಕಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಯುವಕ ‘ತಾಕತ್ತಿದ್ರೆ ಗಡಿಪಾರು ಮಾಡಿ ನೋಡಿ, ಒಮ್ಮೆ ಪುತ್ತಿಲರ ವಿಷಯಕ್ಕೆ ಬನ್ನಿ ನೋಡೊಣ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುಗಳು ಸತ್ತಿದ್ದಾರಾ…? ಬದುಕಿದ್ದಾರಾ ನೊಡೋಣ…?’ ಎಂದು ಸರ್ಕಾರ ಮತ್ತು ಪೊಲೀಸರಿಗೆ ಸವಾಲು ಹಾಕಿದ್ದಾನೆ.ಯಾವ ಕಾರಣಕ್ಕೆ ಗಡಿಪಾರು ಮಾಡುತ್ತಿದ್ದೀರ ಹೇಳಿ. ಹಿಂದು ಸಮಾಜ ಯಾವ ಅನ್ಯಾಯ ಮಾಡಿದೆ ಹೇಳಿ, ಆಮೇಲೆ ನೋಟಿಸ್‌ ಕೊಡಿ. ಇನ್ನು ಮುಂದೆ ಕೂಡ 24 ಗಂಟೆಗಳ ಕಾಲ ಹಿಂದುತ್ವಕ್ಕೆ ದುಡಿಯುತ್ತೇವೆ. ನಿಮ್ಮ ತಾಕತ್ತನ್ನು ಒಳ್ಳೆಯದಕ್ಕೆ ತೋರಿಸಿ. ಕರಾವಳಿಯ ಕೋಮುಗಲಭೆ ನಿಲ್ಲಿಸಲು ಅದನ್ನು ಬಳಸಿ ಎಂದು ಸರ್ಕಾರ ಮತ್ತು ಪೊಲೀಸರಿಗೆ ಸವಾಲು ಹಾಕಿದ್ದಾನೆ. ಯುವಕನ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ಶುರುವಾಗಿವೆ.ದಕ್ಷಿಣ ಕನ್ನಡ ಪೊಲೀಸ್‌ ವಿರುದ್ಧ ಶೋಭಾ ಪ್ರಾಧಿಕಾರಕ್ಕೆ ದೂರುರಾತ್ರಿ ವೇಳೆ ಹಿಂದೂ ಮುಖಂಡರ ಮನೆಗಳಿಗೆ ಭೇಟಿ, ಹಿಂದೂ ಮುಖಂಡರ ಗಡಿಪಾರು ಸೇರಿ ಕೋಮು ಸಂಘರ್ಷ ತಡೆಯುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಕೈಗೊಳ್ಳುತ್ತಿರುವ ಬಿಗಿ ಕ್ರಮಗಳ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕರ್ನಾಟಕ ಪೊಲೀಸ್ ದೂರು ಪ್ರಾಧಿಕಾರದ ನ್ಯಾ. ಎನ್.ಕೆ.ಸುಧೀಂದ್ರ ರಾವ್ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದು, ದೂರು ಸಲ್ಲಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ದೌರ್ಜನ್ಯದ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ರಾಜಕೀಯ ಒತ್ತಡದಡಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಹಿಂದೂ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ತೊಂದರೆ ಕೊಡುತ್ತಿದ್ದಾರೆ. ರಾತ್ರಿ ಹೊತ್ತು ಈ ವ್ಯಕ್ತಿಗಳ ಮನೆಗಳಿಗೆ ಪೊಲೀಸರು ತೆರಳುತ್ತಿದ್ದು, ಅವರ ನಿವಾಸಗಳ ಫೋಟೋ ತೆಗೆದು, ಜಿಪಿಎಸ್‌ ಸ್ಥಳಾಂಕಗಳನ್ನು ಸಂಗ್ರಹಿಸುತ್ತಿದ್ದಾರೆ. ಈ ಎಲ್ಲವೂ ಯಾವುದೇ ಕಾನೂನಾತ್ಮಕ ವಾರಂಟ್ ಇಲ್ಲದೇ ಅಥವಾ ನ್ಯಾಯಸಮ್ಮತ ಕಾರಣವಿಲ್ಲದೆ ನಡೆಯುತ್ತಿದೆ.

ಈ ರೀತಿಯ ಕ್ರಮಗಳು ಭಾರತೀಯ ಸಂವಿಧಾನದಡಿಯಲ್ಲಿ ಕಾನೂನುಬಾಹಿರ. ಆರ್ಟಿಕಲ್ 21ರಡಿಯಲ್ಲಿ ಜೀವಿತದ ಹಕ್ಕು ಹಾಗೂ ಗೌಪ್ಯತೆಗಿರುವ ಹಕ್ಕು ಮತ್ತು ಆರ್ಟಿಕಲ್ 14ರಡಿಯಲ್ಲಿ ಸಮಾನತೆಯ ಹಕ್ಕುಗಳನ್ನು ಉಲ್ಲಂಘಿಸುತ್ತವೆ. ಮಂಗಳೂರಿನಲ್ಲಿ ಪೊಲೀಸ್ ಅಧಿಕಾರಿಗಳ ಬದಲಾವಣೆ ನಂತರ ಈ ಕ್ರಮಗಳಾಗುತ್ತಿವೆ. ಹಿಂದೂ ಸಮುದಾಯದ ಸದಸ್ಯರನ್ನೇ ಗುರಿಯಾಗಿಸಿಕೊಂಡಿದ್ದಾರೆ. ಈ ರೀತಿ ತೊಂದರೆಗೆ ಒಳಗಾಗಿರುವವರು ಯಾವುದೇ ಅಪರಾಧ ಹಿನ್ನೆಲೆ ಇಲ್ಲದವರಾಗಿದ್ದು, ಯಾವುದೇ ದುಷ್ಕೃತ್ಯದಲ್ಲಿ ಭಾಗಿಯಾಗಿಲ್ಲ. ಈ ಕ್ರಮಗಳು ಪೊಲೀಸ್ ವ್ಯವಸ್ಥೆಯನ್ನು ರಾಜಕೀಯ ಪ್ರತೀಕಾರದ ಅಸ್ತ್ರವಾಗಿ ಬಳಸುವ ಆತಂಕವಿದೆ. ಹೀಗಾಗಿ, ಈ ಕಾನೂನು ವಿರೋಧಿ ಕ್ರಮಗಳನ್ನು ತಡೆಗಟ್ಟಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.ಇದರಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳ ವಿರುದ್ಧ ನ್ಯಾಯಸಮ್ಮತವಾಗಿ ಮತ್ತು ಪಕ್ಷಪಾತವಿಲ್ಲದೆ ತನಿಖೆ ನಡೆಯಬೇಕು. ಸಂವಿಧಾನಾತ್ಮಕ ಮೌಲ್ಯಗಳು ಮತ್ತು ನಾಗರಿಕರ ಹಕ್ಕುಗಳನ್ನು ಉಲ್ಲಂಘಿಸಿದವರನ್ನು ಹೊಣೆಯಾಗಿ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.