ಕನ್ನಡಪ್ರಭ ವಾರ್ತೆ ಸಾಗರ
ಪಟ್ಟಣದ ಬಿ.ಎಚ್. ರಸ್ತೆಯ ಜನತಾ ಶಾಲೆ ಎದುರಿಗಿದ್ದ ಮಟನ್ ಅಂಗಡಿಯನ್ನು ಏಕಾಏಕಿ ತೆರವುಗೊಳಿಸಿದ ವಿಷಯಕ್ಕೆ ಸಂಬಂಧಪಟ್ಟಂತೆ ನಗರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು, ಬಿಜೆಪಿ ಸದಸ್ಯರು ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಅನಂತರ ಶಾಸಕ ಗೋಪಾಲಕೃಷ್ಣ ಬೇಳೂರು ಸಲಹೆ ಮೇರೆಗೆ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.ಸಭೆಯಲ್ಲಿ ಬಿಜೆಪಿ ಸದಸ್ಯೆ ಮಧುರಾ ಶಿವಾನಂದ್, ಕಳೆದ ಮೂವತ್ತು, ನಲವತ್ತು ವರ್ಷಗಳಿಂದ ಬಿ.ಎಚ್. ರಸ್ತೆಯಲ್ಲಿರುವ ಮಟನ್ ಸ್ಟಾಲ್ನಿಂದ ನಗರಸಭೆ ಆದಾಯ ಸಂಗ್ರಹ ಮಾಡುತ್ತಿದೆ. ಸಾರ್ವಜನಿಕರು ಈ ಜಾಗವನ್ನು ನಗರಸಭೆ ಜಾಗ ಎಂದೇ ಗುರುತಿಸಿಕೊಂಡು ಬಂದಿದ್ದಾರೆ. ಆದರೆ, ಕೆಲವರು ಈ ಜಾಗ ತಮ್ಮದು ಎಂದು ನ್ಯಾಯಾಲಯಕ್ಕೆ ಹೋಗಿದ್ದಾರೆ. ಈಗ ಏಕಾಏಕಿ ಮಟನ್ ಸ್ಟಾಲ್ ತೆರವುಗೊಳಿಸಲಾಗಿದೆ. ನಗರಸಭೆ ಜಾಗ ಎಂದು ನ್ಯಾಯಾಲಯಕ್ಕೆ ಸಮರ್ಥ ದಾಖಲೆ ನೀಡುವಲ್ಲಿ ನಗರಸಭೆ ವಿಫಲವಾದಂತೆ ಕಾಣುತ್ತಿದೆ ಎಂದು ಆರೋಪಿಸಿದರು.
ಮಧುರಾ ಶಿವಾನಂದ್ ಮಾತನಾಡುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ಕಾಂಗ್ರೆಸ್ ಸದಸ್ಯೆ ಎನ್.ಲಲಿತಮ್ಮ, ಇದು ವಿಶೇಷ ಸಾಮಾನ್ಯ ಸಭೆ. ಅಜೆಂಡಾದಲ್ಲಿ ಇಲ್ಲದ ವಿಷಯ ಪ್ರಸ್ತಾಪ ಮಾಡಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆಗ ಟಿ.ಡಿ.ಮೇಘರಾಜ್ ಆಕ್ರೋಶ ವ್ಯಕ್ತಪಡಿಸಿ, ಕಾಂಗ್ರೆಸ್ ಸದಸ್ಯರು ದಬ್ಬಾಳಿಕೆ ಮೂಲಕ ನಮ್ಮ ಮಾತನಾಡುವ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆಂದು ಆರೋಪಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಬಿಜೆಪಿ ಸದಸ್ಯರು ಬಾವಿಗಿಳಿದು ಧರಣಿ ನಡೆಸಿದರು. ಆಗ ಶಾಸಕ ಬೇಳೂರು ಮತ್ತು ಪೌರಾಯುಕ್ತ ಎಚ್.ಕೆ.ನಾಗಪ್ಪ ಮಧ್ಯ ಪ್ರವೇಶ ಮಾಡಿ, ಮನವೊಲಿಸಿ ಧರಣಿ ಹಿಂದಕ್ಕೆ ಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾದರು.ಸಭೆಯಲ್ಲಿ ಟ್ಯಾಗೋರ್ ಕಲ್ಚರಲ್ ಕಾಂಪ್ಲೆಕ್ಸ್ ನಿರ್ಮಾಣ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕರು, ರಂಗಮಂದಿರ ನಿರ್ಮಾಣ ಅತ್ಯಂತ ಅಗತ್ಯವಾಗಿದೆ. ಈಗಾಗಲೇ ಕೇಂದ್ರ ಸರ್ಕಾರದ ಅನುದಾನ ಇದೆ. ನಗರಸಭೆ ಎಸ್.ಎಫ್.ಸಿ. ಅನುದಾನ ಬಳಕೆ ಮಾಡಿಕೊಳ್ಳುವ ಬಗ್ಗೆ ಪ್ರಸ್ತಾಪಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಬಿಜೆಪಿ ಸದಸ್ಯ ಟಿ.ಡಿ.ಮೇಘರಾಜ್ ಮಾತನಾಡಿ, ರಂಗಮಂದಿರ ನಿರ್ಮಾಣ ಆಗುವುದಕ್ಕೆ ನಮ್ಮದೂ ಸಹಮತ ಇದೆ. ಆದರೆ, ವಾರ್ಡ್ ಆಭಿವೃದ್ಧಿಗೆ ಹಣದ ಕೊರತೆ ಇದೆ. ಇಂತಹ ಹೊತ್ತಿನಲ್ಲಿ ಎಸ್.ಎಫ್.ಸಿ. ಹಣ ರಂಗಮಂದಿರಕ್ಕೆ ಬಳಕೆ ಮಾಡಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಸಾಗರ ನಗರಸಭೆ ಅಭಿವೃದ್ದಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ತರಲಾಗುತ್ತದೆ. ರಂಗಮಂದಿರ ಸಾಗರದ ಜನರ ಕನಸು. ಅಗತ್ಯಬಿದ್ದರೆ ಅನುದಾನ ಬಳಕೆ ಮಾಡಿಕೊಳ್ಳುತ್ತೇವೆ. ಇದಕ್ಕೆ ಸದಸ್ಯರು ಸಹಕರಿಸಬೇಕು ಎಂದಾಗ ಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ದೊರೆಯಿತು.ಬಿಜೆಪಿ ಸದಸ್ಯ ಗಣೇಶ್ ಪ್ರಸಾದ್ ಮಾತನಾಡಿ, ಈ ಹಿಂದಿನ ಶಾಸಕರ ಅನುದಾನದಿಂದ ವಾರ್ಡ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಚುನಾವಣೆ ಹಿನ್ನೆಲೆ ಕಾಮಗಾರಿ ನಿಲ್ಲಿಸಲಾಗಿದೆ. ಗುತ್ತಿಗೆದಾರರು ಹಾಲಿ ಶಾಸಕರು ಕಾಮಗಾರಿ ನಿಲ್ಲಿಸಲು ಹೇಳಿದ್ದಾರೆ ಎನ್ನುತ್ತಿದ್ದಾರೆ. ತಕ್ಷಣ ಕಾಮಗಾರಿ ಪ್ರಾರಂಭಿಸಲು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಬೇಳೂರು, ಗುಣಮಟ್ಟದ ಹಿನ್ನೆಲೆ ಕಾಮಗಾರಿ ನಿಲ್ಲಿಸಲಾಗಿದ್ದು, ಸದಸ್ಯರ ಉಪಸ್ಥಿತಿಯಲ್ಲಿ ಗುಣಮಟ್ಟದ ಕಾಮಗಾರಿ ಶೀಘ್ರ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.ಸಭೆಯಲ್ಲಿ ಆಡಳಿತಾಧಿಕಾರಿ ಪಲ್ಲವಿ ಸಾತೇನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಪೌರಾಯುಕ್ತ ನಾಗಪ್ಪ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.
- - --27ಕೆಎಸ್ಎಜಿ1:
- ಸಾಗರ ನಗರಸಭೆ ಸಾಮಾನ್ಯ ಸಭೆಯಯಲ್ಲಿ ನಗರಸಭೆ ಜಾಗ ಕುರಿತ ಚರ್ಚೆ ವೇಳೆ ಬಿಜೆಪಿ, ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ನಡೆಯಿತು.