ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ಅವ್ಯಾಹತವಾಗಿ ನಡೆದಿದೆ.ವಸತಿ ಇಲಾಖೆ ಲಂಚ ಪ್ರಕರಣದಲ್ಲಿ ವಸತಿ ಸಚಿವ ಜಮೀರ್ ಅಹಮದ್ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯತರ್ಕರು ತಾಪಂ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಜಮಖಂಡಿ
ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ಅವ್ಯಾಹತವಾಗಿ ನಡೆದಿದೆ. ಆಳಂದ ಶಾಸಕ ಬಿ.ಆರ್. ಪಾಟೀಲ ವಸತಿ ಇಲಾಖೆಯಲ್ಲಿ ಫಲಾನುಭವಿಗಳಿಗೆ ಮನೆ ನೀಡಲು ₹25 ಸಾವಿರ ಲಂಚ ಪಡೆಯುತ್ತಿದ್ದಾರೆ ಎಂದು ಆಡಿಯೋ ಬಿಡುಗಡೆ ಮಾಡಿ ಸಾಕ್ಷಿ ಸಮೇತ ಆರೋಪ ಮಾಡಿದ್ದು, ವಸತಿ ಸಚಿವ ಜಮೀರ್ ಅಹಮದ್ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಮುಖಂಡರು ಕಾರ್ಯತರ್ಕರು ತಾಪಂ ಕಚೇರಿಯ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಜಮಖಂಡಿಗೆ ಕೇಂದ್ರಸರ್ಕಾರ ದಿಂದ ಪಿಎಂ ಆವಾಸ ಯೋಜನೆ ಅಡಿಯಲ್ಲಿ ಮಾತ್ರ 1113 ಮನೆಗಳು ಮಂಜೂರಾಗಿದ್ದು, ಉಳಿದ್ಯಾವ ಯೋಜನೆಗಳಲ್ಲಿ ಬಡವರಿಗೆ ಮನೆಗಳನ್ನು ಮಂಜೂರು ಮಾಡದೇ ಬಿಜೆಪಿ ಶಾಸಕರ ಕ್ಷೇತ್ರಕ್ಕೆ ತಾರತಮ್ಯ ಮಾಡಲಾಗುತ್ತಿದೆ. ನಗರದಲ್ಲಿ 750 ಮನೆಗಳ ಹಕ್ಕುಪತ್ರ ನೀಡಬೇಕಾಗಿದ್ದು, ಈವರೆಗೂ ನೀಡಿಲ್ಲ. ಉಸ್ತುವಾರಿ ಸಚಿವರು ಕೂಡಲೇ ದಿನಾಂಕ ನಿಗದಿಪಡಿಸಬೇಕು. ಆರ್ಸಿಬಿ ವಿಜಯೋತ್ಸವ ಘಟನೆಗೆ ಸರ್ಕಾರವೇ ನೇರ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದ್ದು, ಎಸ್ಸಿ, ಎಸ್ಟಿ ನಿಗಮದ ಹಣದ ದುರುಪಯೋಗ ಪಡಿಸಿಕೊಂಡು ಭಾಗ್ಯಗಳ ಹೆಸರಿನಲ್ಲಿ ಲೂಟಿ ನಡೆಸಿದ್ದಾರೆ. ಸರ್ಕಾರದ ನೀತಿಯಿಂದಾಗಿ ಅಭಿವೃದ್ಧಿ ಕಾರ್ಯಗಳು ನಿಂತು ಹೋಗಿವೆ ಎಂದು ಆರೋಪಿಸಿದ ಅವರು, ಬೇರೆ ರಾಜ್ಯಗಳ ಚುನಾವಣೆಗಳಿಗೆ ಸರ್ಕಾರದ ಹಣ ದುರುಪಯೋಗ ನಡೆದಿದ್ದು, ಸರ್ಕಾರ ಕೂಡಲೇ ಸಚಿವರ ರಾಜೀನಾಮೆ ಪಡೆಯಬೇಕು, ಹಗರಣಗಳಲ್ಲಿ ಭಾಗಿಯಾಗಿರುವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಆಳಂದ ಶಾಸಕರು ಸರ್ಕಾರದ ಭ್ರಷ್ಟಾಚಾರ ಆರೋಪದ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ನಗರ ಮಂಡಲ ಅಧ್ಯಕ್ಷ ಅಜಯ ಕಡಪಟ್ಟಿ, ಗ್ರಾಮೀಣ ಮಂಡಲ ಅಧ್ಯಕ್ಷ ಮಲ್ಲುದಾನಗೌಡ, ಪದಾಧಿಕಾರಿಗಳಾದ ಗಣೇಶ ಶಿರಗಣ್ಣವರ, ಶಂಕರ ಕಾಳೆ, ಪರಶುರಾಮ ಬಿಸನಾಳ, ಬಸವರಾಜ ಬಿರಾದಾರ, ಈಶ್ವರ ಆದೆಪ್ಪನವರ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.