ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬಿಜೆಪಿ ಸಂವಿಧಾನ ಒಪ್ಪಿದರೆ ಆರ್.ಎಸ್.ಎಸ್. ಅನ್ನು ತಿರಸ್ಕರಿಸಬೇಕು. ಅಥವಾ ಆರ್.ಎಸ್.ಎಸ್. ಅನ್ನು ಒಪ್ಪಿದರೆ ಸಂವಿಧಾನ ತಿರಸ್ಕರಿಸಬೇಕು. ಆದರೆ, ಇವರು ದ್ವಂದ್ವ ನಿಲುವು ತಾಳಿದ್ದಾರೆ. ಜಾತ್ಯಾತೀತವನ್ನೇ ವಿರೋಧಿಸುತ್ತಿದ್ದಾರೆ. ಮೀಸಲಾತಿಯನ್ನು ಒಪ್ಪುತ್ತಿಲ್ಲ. ಈ ಬಗ್ಗೆ ಬಿಜೆಪಿ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಎಲ್ಲಾ ಜಾತಿ ಧರ್ಮದವರನ್ನು ಒಳಗೊಳ್ಳುವ ಬಹುತ್ವದ ಭಾರತ ಕಟ್ಟುವ ಜಾತ್ಯಾತೀತತೆಯನ್ನು ಅಪ್ಪಿಕೊಳ್ಳುವ ಸಾಮಾಜಿಕ ಮತ್ತು ಶೈಕ್ಷಣಿಕ ಅಸಮಾನತೆ ತೆಗೆದು ಸಹಬಾಳ್ವೆಯ ವಾತಾವರಣವನ್ನು ಮೂಡಿಸುತ್ತದೆ. ಇದು ಕಾಂಗ್ರೆಸ್ ಪಕ್ಷದ ಮೂಲ ತತ್ವವಾಗಿದೆ. ಆದರೆ, ಇದಕ್ಕೆ ವಿರುದ್ಧವಾಗಿ ಬಿಜೆಪಿ ನಡೆಯುತ್ತಿದ್ದು, ಪ್ರಧಾನಿ ಮೋದಿ ಅವರ ನೇತೃತ್ವದ ಸರ್ಕಾರದ ಉದ್ದೇಶ, ಆಡಳಿತ ಮತ್ತು ಆರ್ಥಿಕ ನೀತಿ ಶ್ರೀಮಂತರನ್ನು ಅತಿ ಶ್ರೀಮಂತರನ್ನಾಗಿ ಮಾಡುವುದು, ಬಡವರನ್ನು ನಿರ್ಗತಿಕರನ್ನಾಗಿ ಮಾಡುವುದು ಎಂದು ಕಿಡಿಕಾರಿದರು.ಮನುಷ್ಯರ ನಡುವೆ ಮೇಲು ಕೀಳು ಭಾವನೆ ಇರಬಾರದು, ಆದರೆ ಶ್ರೇಣೀಕೃತ ಸಮಾಜ ಸಮರ್ಥನೆಯನ್ನು ಬಿಜೆಪಿಯವರು ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ‘ಬಂಚ್ ಆಫ್ ಥಾಟ್ಸ್’ ಪುಸ್ತಕದಲ್ಲಿ ವಿವರಣೆ ಇದೆ. ಈ ಪುಸ್ತಕವನ್ನು ಬಿಜೆಪಿ ಒಪ್ಪಿಕೊಂಡಿದೆ ಎಂದಾದರೆ ಶ್ರೇಣೀಕೃತ ಸಮಾಜವನ್ನು ಸಮರ್ಥನೆ ಮಾಡಿಕೊಂಡಂತೆ ಆಗುತ್ತದೆ. ಆದ್ದರಿಂದ ಗೋಳ್ವಾಲ್ಕರ್ ಮತ್ತು ಹೆಗಡೇವಾರ್ ಹೇಳಿದ್ದನ್ನು ನಾವು ಒಪ್ಪುವುದಿಲ್ಲ ಎಂದು ಧೈರ್ಯವಾಗಿ ಬಿಜೆಪಿಯವರು ಹೇಳಬೇಕಲ್ಲವೇ ಎಂದು ಪ್ರಶ್ನಿಸಿದರು.
ಭಾಷೆಯ ಬಗ್ಗೆ ಕೂಡ ಅಷ್ಟೇ. ಚಿಂತನ ಗಂಗಾದ ಇಂಗ್ಲಿಷ್ ಆವೃತ್ತಿಯ ಪುಟ 112 ಮತ್ತು 113 ರಲ್ಲಿ ಸಂಸ್ಕೃತಕ್ಕೆ ಮೊದಲ ಸ್ಥಾನ ನೀಡಲಾಗಿದೆ. ಹಾಗೆಯೇ ಈ ಕೃತಿಗಳಲ್ಲಿ ಜಾತಿ ವ್ಯವಸ್ಥೆ ಸಮರ್ಥನೆ, ಒಕ್ಕೂಟ ವ್ಯವಸ್ಥೆ ರದ್ದು ಮಾಡುವುದು, ಮೀಸಲಾತಿ ವಿರೋಧ, ಅಷ್ಟೇಕೆ ಬಿಜೆಪಿ ಒಂದು ಸಂವಿಧಾನದ ಭಾಗವೇ ಎಂದು ಹೇಳಲಾಗುತ್ತಿದೆ. ಈ ಪುಸ್ತಕವನ್ನು ಒಪ್ಪಿಕೊಳ್ಳುವ ಮೂಲಕ ಬಿಜೆಪಿ ದಲಿತರು ಹಿಂದುಗಳೇ ಅಲ್ಲ ಎಂಬ ಭಾವನೆಗೆ ಬಂದಂತಿದೆ. ಮೀಸಲಾತಿ ಕೂಡ ಬೇಡ ಎಂದು ಹೇಳಿದ್ದಾರೆ. ಇದಕ್ಕೆಲ್ಲಾ ಬಿಜೆಪಿ ಮತ್ತು ಸಂಘ ಪರಿವಾದವರು ಉತ್ತರ ಕೊಡಬೇಕಲ್ಲ ಎಂದು ವಾಗ್ದಾಳಿ ನಡೆಸಿದರು.
ಹಾಗಾಗಿ ದೇಶದ ಜನರನ್ನು ಗೂಳಿಯ ಹಿಂದೇ ಏನೋ ಸಿಗುತ್ತೆ ಎಂದು ಓಡುವ ನರಿಯನ್ನಾಗಿ ಮಾಡಬಾರದು, ಬಿಜೆಪಿ ತನ್ನ ಅಂತರಂಗವನ್ನು ಬಹಿರಂಗಪಡಿಸಿ ಚರ್ಚೆಗೆ ಸಿದ್ಧರಾಗಲಿ ಎಂದು ಹರಿಹಾಯ್ದರು.