ಬಿಜೆಪಿಯದ್ದು ರಾಜಕೀಯ ದುರುದ್ದೇಶದ ಪಾದಯಾತ್ರೆ: ಸಿಎಂ ಡಿಕೆಶಿ

KannadaprabhaNewsNetwork |  
Published : Sep 02, 2026, 03:15 AM IST
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್. | Kannada Prabha

ಸಾರಾಂಶ

ಕಾಂಗ್ರೆಸ್‌ ಕೂಡ ಈ ಹಿಂದೆ ಬಳ್ಳಾರಿ, ಮೇಕೆದಾಟು ಹಾಗೂ ಕೃಷ್ಣಾ ನದಿ ನೀರಿನ ವಿಚಾರವಾಗಿ ಪಾದಯಾತ್ರೆ ನಡೆಸಿದೆ. ನಮ್ಮ ಯಾತ್ರೆಗಳು ರಾಜ್ಯ ಹಾಗೂ ದೇಶದ ಹಿತಕ್ಕಾಗಿ ನಡೆದಿದ್ದವು. ಆದರೆ, ಬಿಜೆಪಿಯವರು ರಾಜಕೀಯ ಉದ್ದೇಶದಿಂದ ಪಾದಯಾತ್ರೆ ನಡೆಸುತ್ತಿದ್ದಾರೆ.

ಹುಬ್ಬಳ್ಳಿ:

ಬಿಜೆಪಿ ನಡೆಸುತ್ತಿರುವ ಪಾದಯಾತ್ರೆ ರೈತರ ಹಾಗೂ ರಾಜ್ಯದ ಹಿತಕ್ಕಾಗಿ ಅಲ್ಲ. ರಾಜಕೀಯ ಉದ್ದೇಶದಿಂದ ನಡೆಸುತ್ತಿರುವ ಯಾತ್ರೆ. ಅವರು ನೂರು ಪಾದಯಾತ್ರೆ ಬೇಕಾದರೂ ಮಾಡಲಿ. ಅವರಿಗೆ ತಿರುಗೇಟು ನೀಡಲು ಅವರೇ ದಾರಿ ಮಾಡಿಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ತೀಕ್ಷ್ಣವಾಗಿ ಹೇಳಿದರು.

ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಕೂಡ ಈ ಹಿಂದೆ ಬಳ್ಳಾರಿ, ಮೇಕೆದಾಟು ಹಾಗೂ ಕೃಷ್ಣಾ ನದಿ ನೀರಿನ ವಿಚಾರವಾಗಿ ಪಾದಯಾತ್ರೆ ನಡೆಸಿದೆ. ನಮ್ಮ ಯಾತ್ರೆಗಳು ರಾಜ್ಯ ಹಾಗೂ ದೇಶದ ಹಿತಕ್ಕಾಗಿ ನಡೆದಿದ್ದವು. ಆದರೆ, ಬಿಜೆಪಿಯವರು ರಾಜಕೀಯ ಉದ್ದೇಶದಿಂದ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಬರ ಘೋಷಣೆಗೆ ನಿಯಮ:

ಬರಪೀಡಿತ ಪ್ರದೇಶಗಳನ್ನು ಏಕಾಏಕಿ ಘೋಷಿಸಲು ಸಾಧ್ಯವಿಲ್ಲ. ಅದಕ್ಕೆ ನಿರ್ದಿಷ್ಟ ನಿಯಮ ಹಾಗೂ ಪ್ರಕ್ರಿಯೆ ಇದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಬೇಕು. ಅದರ ಆಧಾರದ ಮೇಲೆ ಬರ ಘೋಷಿಸಲಾಗುವುದು. ಕನಕಪುರದಲ್ಲಿಯೂ ಬರದ ಪರಿಸ್ಥಿತಿ ಇದೆ. ಆದರೂ ಅದನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿಲ್ಲ. ನಾನು ಮುಖ್ಯಮಂತ್ರಿ ಎಂಬ ಕಾರಣಕ್ಕೆ ಅಧಿಕಾರ ದುರ್ಬಳಕೆ ಮಾಡಿಕೊಂಡು ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಕೇಂದ್ರದ ಅಧ್ಯಯನ ತಂಡ ಹಾಗೂ ಅಧಿಕಾರಿಗಳ ಪರಿಶೀಲನೆ ಬಳಿಕ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಬಾಗಲಕೋಟೆಗೂ ಭೇಟಿ:

ಬರ ಪರಿಸ್ಥಿತಿ ಅಧ್ಯಯನ ನಡೆಸಲು ಎರಡ್ಮೂರು ದಿನಗಳಲ್ಲಿ ಬಾಗಲಕೋಟೆ ಜಿಲ್ಲೆಗೂ ತೆರಳುತ್ತೇನೆ ಎಂದ ಸಿಎಂ, ರೈತರ ಬಗ್ಗೆ ನನ್ನದೇ ಆದ ಆಲೋಚನೆಗಳಿವೆ. ಆದರೆ, ವಿಧಾನಸಭೆ ಅಧಿವೇಶನದಲ್ಲಿ ಈ ಕುರಿತು ಸಮಗ್ರ ಚರ್ಚೆ ಸಾಧ್ಯವಾಗಲಿಲ್ಲ. ಬಿಜೆಪಿಯವರು ಕೂಡ ಅಧಿವೇಶನದಲ್ಲಿ ಬರದ ಕುರಿತು ಚರ್ಚೆ ಮಾಡಲಿಲ್ಲ ಎಂದು ಟೀಕಿಸಿದರು.

ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾಗೇಂದ್ರ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಪಕ್ಷಕ್ಕಾಗಿ ಅವರು ತ್ಯಾಗ ಮಾಡಿದ್ದಾರೆ ಎಂದರು.

ನಾನು ಸಿಎಂ ಆಗಿರುವುದು ಸಹಿಸುತ್ತಿಲ್ಲ:

ನಾನು ಮುಖ್ಯಮಂತ್ರಿ ಆಗಿರುವುದನ್ನು ಯಾವುದೇ ಪಕ್ಷಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಡಿಕೆಶಿ, ಸಚಿವ ಬಸವರಾಜ ರಾಯರೆಡ್ಡಿ ಹೇಳಿಕೆ ಕುರಿತು ಸಂಪೂರ್ಣ ಮಾಹಿತಿ ಇಲ್ಲ. ಅವರನ್ನು ಭೇಟಿ ಮಾಡಿ ವಿವರಣೆ ಪಡೆಯುತ್ತೇನೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರದ ಮಾರ್ಗಸೂಚಿಯಂತೆ ಬರ ಘೋಷಣೆ: ಸಿಎಂ
ಕ್ಷೇತ್ರದಲ್ಲಿ 21 ಕೆಪಿಎಸ್ ಶಾಲೆಗಳ ಮಂಜೂರು-ಶಾಸಕ ಪಠಾಣ