ಕರಾವಳಿಗೆ ಕುರುಡು ಬಜೆಟ್: ಯಶ್ಪಾಲ್‌ ಸುವರ್ಣ

KannadaprabhaNewsNetwork |  
Published : Feb 17, 2024, 01:16 AM IST
ಯಸ್ಪಾಲ್‌ | Kannada Prabha

ಸಾರಾಂಶ

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ 15ನೇ ಬಾರಿಗೆ ಬಜೆಟ್‌ ಮಂಡಿಸಿದ್ದಾರೆ. ಬಜೆಟ್‌ ಬಗ್ಗೆ ಕರಾವಳಿಯಲ್ಲಿ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ.

ಸಿದ್ದರಾಮಯ್ಯ ಸರ್ಕಾರ ಕರಾವಳಿ ಜಿಲ್ಲೆಗಳನ್ನು ಸಂಪೂರ್ಣವಾಗಿ ಕಡೆಗಣಿಸುವ ಕುರುಡು ನೀತಿಯನ್ನು ಬಜೆಟ್‌ನಲ್ಲಿಯೂ ಮುಂದುವರಿಸಿದ್ದಾರೆ. ಮೀನುಗಾರಿಕೆ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯ 3,000 ಕೋಟಿ ರು. ಅನುದಾನವನ್ನು ತನ್ನದೇ ಅನುದಾನ ಎಂದು ಘೋಷಿಸಿ ಮೀನುಗಾರರಿಗೆ ತಪ್ಪು ಮಾಹಿತಿ ನೀಡಲಾಗಿದೆ. ಗ್ಯಾರಂಟಿ ಯೋಜನೆಗಳ ಹೊರೆಯಿಂದ ಪಾರಾಗಲು ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಮೂಲಸೌಕರ್ಯಗಳ ಯೋಜನೆಗೆ ತಿಲಾಂಜಲಿ ನೀಡಿ ರಾಜ್ಯದ ಆರ್ಥಿಕ ವ್ಯವಸ್ಥೆಯ ಹಳಿ ತಪ್ಪಿಸಿದ್ದಾರೆ ಎಂದು ಉಡುಪಿ ಶಾಸಕ ಯಶ್ಪಾಲ್‌ ಸುವರ್ಣ ಪ್ರತಿಕ್ರಿಯಿಸಿದ್ದಾರೆ.--------------------ಆಶಾಭಾವನೆಗೆ ವಿರುದ್ಧ ಬಜೆಟ್: ಗುರ್ಮೆಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀರಸ ಬಜೆಟ್ ಮಂಡಿಸಿದ್ದಾರೆ. ಜನರ ಆಶಾಭಾವನೆಗಳಿಗೆ ವಿರುದ್ಧವಾದ ಬಜೆಟ್ ಇದಾಗಿದೆ. ಸಂಪತ್ತಿನ ಸಮಾನ ಹಂಚಿಕೆ ಎಂಬುದು ಮರೀಚಿಕೆಯಾಗಿದೆ. ಅಲ್ಪಸಂಖ್ಯಾತರನ್ನು ಓಲೈಸಲೆಂದೇ ಈ ಬಜೆಟ್ ತಯಾರಿಗೊಳಿಸಲಾಗಿದೆ. ನನ್ನ ತೆರಿಗೆ ನನ್ನ ಹಕ್ಕು ಎಂದು ಕೇಂದ್ರ ಸರ್ಕಾರದೆದುರು ವಾದ ಮಂಡಿಸಿದವರು ಇಂದು ಉಡುಪಿ ಜಿಲ್ಲೆಯ ತೆರಿಗೆಯ ಪಾಲನ್ನು ಸರಿಯಾದ ಕ್ರಮದಲ್ಲಿ ನಮ್ಮ ಜಿಲ್ಲೆಗೆ ಹಿಂತಿರುಗಿಸಿಲ್ಲ. ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಗೆ ಯಾವುದೇ ರೀತಿಯ ಉತ್ತೇಜನ ನೀಡಿಲ್ಲ ಎಂದು ಕಾಪು ಶಾಸಕ ಸರೇಶ್ ಶೆಟ್ಟಿ ಹೇಳಿದ್ದಾರೆ.

--------------ಆರ್ಥಿಕ ಶಿಸ್ತಿನ ಬಜೆಟ್: ಭಾಸ್ಕರ ರಾವ್ಉಡುಪಿ- ಗ್ರಾಮೀಣ ಪ್ರದೇಶದ ಮಹಿಳೆಯರ ಸ್ವಾವಲಂಬಿ ಬದುಕಿಗೆ ಹಲವಾರು ಯೋಜನೆಗಳು, ಬೆಂಗಳೂರಿನ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳು ಘನತ್ಯಾಜ್ಯ ಘಟಕ, ಆಸ್ಪತ್ರೆಗಳ ಉನ್ನತೀಕರಣ, ಆರೋಗ್ಯ, ಕೃಷಿ, ಶಿಕ್ಷಣ, ಧಾರ್ಮಿಕ ಕ್ಷೇತ್ರ ಹೀಗೆ ಎಲ್ಲ ಇಲಾಖೆಗಳಿಗೆ, ಎಲ್ಲ ವರ್ಗಗಳಿಗೆ ಸಮನಾದ ಪಾಲು, ಮೂಲಸೌಕರ್ಯಕ್ಕೆ ಆದ್ಯತೆ, ದುಡಿಯುವ ವರ್ಗಕ್ಕೆ ಕೈ ಹಿಡಿಯುವ, ಗ್ಯಾರಂಟಿಗಳಿಗೆ ಹಣ ಹೊಂದಿಸಿ ಅಭಿವೃದ್ಧಿಗೂ ಹಣ ಮೀಸಲಿಟ್ಟ ಆರ್ಥಿಕ ಶಿಸ್ತಿನ ಬಜೆಟ್ ಇದಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಪ್ರತಿಕ್ರಿಯಿಸಿದ್ದಾರೆ.------------ಅಭಿವೃದ್ಧಿ ಮರೆತ ಬಜೆಟ್: ಉದಯಕುಮಾರ್ ಶೆಟ್ಟಿಬಜೆಟ್ ಹೆಚ್ಚಿನ ಇಲಾಖೆಗಳಿಗೆ ಪ್ರಸಾದದ ರೀತಿಯಲ್ಲಿ ಅನುದಾನ ನೀಡಲಾಗಿದೆ. ಉಚಿತ ಗ್ಯಾರಂಟಿಗಳಿಗೆ 60,000 ಕೋಟಿ ರು. ವೆಚ್ಚವಾಗುವುದರಿಂದ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗುವ ಲಕ್ಷಣ ಈ ಬಜೆಟ್ ನಲ್ಲಿ ಕಾಣುತ್ತಿಲ್ಲ. ಮೋಟಾರ್ ವಾಹನ ತೆರಿಗೆ ಶೇ.7, ನೋಂದಣಿ ಮುದ್ರಾಂಕ ಶೇ.14, ಅಬಕಾರಿ ಸುಂಕ ಶೇ.20, ವಾಣಿಜ್ಯ ತೆರಿಗೆ ಶೇ.58 ಮತ್ತು ಇತರ ತೆರಿಗೆಗಳು ಶೇ.2 ಹೆಚ್ಚಳವಾಗಿದೆ. ಇದು ಮಾಧ್ಯಮ ವರ್ಗದವರಿಗೆ ಭಾರಿ ಹೊರೆಯಾಗಲಿದೆ. ಜನಸಾಮಾನ್ಯರ ನಿತ್ಯದ ಬದುಕು ದುಸ್ತರವಾಗಲಿದೆ ಎಂದು ಬಿಜೆಪಿಯ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ ಆತಂಕ ವ್ಯಕ್ತಪಡಿಸಿದ್ದಾರೆ.---------------ಜನಸಾಮಾನ್ಯರ ಬಜೆಟ್: ಅಶೋಕ್ ಕುಮಾರ್ಕರಾವಳಿಯ ಮೀನುಗಾರಿಕೆಗೆ ಬಂಪರ್ ಕೊಡುಗೆ, ಗ್ರಾಮೀಣ ಪ್ರದೇಶದ ಮಹಿಳೆಯರ ಸ್ವಾವಲಂಬಿ ಬದುಕಿಗೆ ಒತ್ತು, ಕರ್ನಾಟಕದ ಅಭಿವೃದ್ಧಿಗೆ ಪೂರಕ ವಾತಾವರಣ ಒದಗಿಸುವ ನಿಟ್ಟಿನಲ್ಲಿ ಬೆಂಗಳೂರಿಗೆ ಹಲವಾರು ಯೋಜನೆಗಳ ಕೊಡುಗೆ, ಮೂಲಸೌಕರ್ಯಗಳಾದ ನೀರು, ರಸ್ತೆ, ಶುಚಿತ್ವದ ಬಗ್ಗೆ ಬಜೆಟ್‌ನಲ್ಲಿ ಹಲವಾರು ಯೋಜನೆಗಳ ಮೂಲಕ ಜನರಿಗೆ ಹೊರೆ ನೀಡದ ಬಜೆಟ್ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪ್ರತಿಕ್ರಿಯಿಸಿದ್ದಾರೆ.----------------ಸಾಲದ ಹೊರೆಯ ಬಜೆಟ್: ಮಟ್ಟಾರ್

ಕೃಷಿಕರನ್ನು ವಂಚಿಸಿದ, ಅಭಿವೃದ್ಧಿಯನ್ನು ಕಡೆಗಣಿಸಿದ, ಉದ್ಯೋಗ ನಿರ್ಮಾಣ, ಶಿಕ್ಷಣ ಕ್ಷೇತ್ರವನ್ನು ಪೂರ್ಣವಾಗಿ ಕಡೆಗಣಿಸಿದ, ಅಲ್ಪಸಂಖ್ಯಾತರನ್ನು ಓಲೈಸಿದ ಅತ್ಯಂತ ಕೆಟ್ಟ ಬಜೆಟ್ ಇದಾಗಿದೆ. ಗ್ಯಾರಂಟಿ ಭಾಗ್ಯಗಳ ವೆಚ್ಚವನ್ನು ಸರಿದೂಗಿಸಲು ಎಲ್ಲ ತೆರಿಗೆಗಳನ್ನು ಹೆಚ್ಚಿಸಿದ, ಜನರ ಮೇಲೆ ಸಾಲದ ವಿಪರೀತ ಹೊರೆ ಹೇರಿದ ಬಜೆಟ್ ಇದಾಗಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆ ಅವರು ಹೇಳಿದ್ದಾರೆ.-----------------ಸಮಬಾಳು ಬಜೆಟ್: ರಮೇಶ್ ಕಾಂಚನ್ಭಾರತದ ಇತಿಹಾಸದಲ್ಲೇ ದಾಖಲೆಯ 15ನೇ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಪರ 5 ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ಹೊಂದಿಸುವುದರ ಜೊತೆಗೆ ‘ಹಸಿವು ಮುಕ್ತ ಕರ್ನಾಟಕ’ ನಿರ್ಮಾಣದ ಗುರಿಯೊಂದಿಗೆ, ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ನೀಡುವ ಗುರಿಯನ್ನು ಹೊಂದಿರುವ ಹೊಸ ಯೋಜನೆಗಳನ್ನು ನೀಡಿದ್ದಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಹರ್ಷ ವ್ಯಕ್ತಪಡಿಸಿದ್ದಾರೆ.

----------

ರಾಜ್ಯ ಕಂಡ ಕೆಟ್ಟ ಬಜೆಟ್‌: ಸುನಿಲ್‌ ಕುಮಾರ್‌

ಕಾರ್ಕಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಕಂಡ ಕೆಟ್ಟ ಬಜೆಟ್ ಆಗಿದ್ದು, ಕರಾವಳಿ ಸೇರಿದಂತೆ ರಾಜ್ಯದ ಯಾವುದೇ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿಲ್ಲ. ಬಜೆಟ್ ಪೂರ್ತಿ ಸುಳ್ಳುಗಳೇ ತುಂಬಿದ್ದು, ಮುಗ್ಗರಿಸುತ್ತಿರುವ ರಾಜ್ಯದ ಆರ್ಥಿಕತೆಯ ಪ್ರತಿಬಿಂಬ ಇದಾಗಿದೆ ಎಂದು ಶಾಸಕ ಸುನೀಲ್‌ ಕುಮಾರ್‌ ಹೇಳಿದ್ದಾರೆ.ಬಂಟ ಅಭಿವೃದ್ಧಿ ನಿಗಮ ಸ್ಥಾಪನೆಗೆ ಬಜೆಟ್‌ನಲ್ಲಿ ಅವಕಾಶ ಕಲ್ಪಿಸುತ್ತೇನೆ ಎಂದು ಘೋಷಿಸಿದ್ದ ಸಿದ್ದರಾಮಯ್ಯ ಕೈ ಕೊಟ್ಟಿದ್ದಾರೆ. ಬ್ರಹ್ಮರ್ಷಿ ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ ೧ ರು. ಅನುದಾನವನ್ನೂ ನೀಡಿಲ್ಲ. ಪಶ್ಚಿಮ ವಾಹಿನಿ ಸೇರಿದಂತೆ ನೀರಾವರಿ ಯೋಜನೆಗಳಿಗೆ ಅನುದಾನ ಕಲ್ಪಿಸಿಲ್ಲ. ಮಂಗಳೂರು- ಬೆಂಗಳೂರು ಕಾರಿಡಾರ್ ಹೆಸರೇನೋ ಕೇಳುವುದಕ್ಕೆ ಚೆನ್ನಾಗಿದೆ. ಆದರೆ ಅದರ ಸ್ವರೂಪ ಹಾಗೂ ಅನುದಾನದ ಬಗ್ಗೆ ಉಲ್ಲೇಖವೇ ಇಲ್ಲ. ಒಟ್ಟಾರೆಯಾಗಿ ಇದೊಂದು ಬೋಗಸ್ ಬಜೆಟ್ ಎಂದು ಮಾಜಿ ಸಚಿವ ಸುನೀಲ್ ವ್ಯಂಗ್ಯವಾಡಿದ್ದಾರೆ.

--------

ಘೋಷಣೆಗೆ ಸಿಮಿತ ಬಜೆಟ್ : ಶರ್ಮ

ರಾಜ್ಯದ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಹಲವಾರು ಯೋಜನೆಗಳಿವೆ. ಕೃಷಿ ಮಾರುಕಟ್ಟೆ, ೨೦೦ ಕೋಟಿ ರೂ. ವೆಚ್ಚದಲ್ಲಿ ಕೃಷಿಭಾಗ್ಯ ಪುನರಾರಂಭ, ತೋಟಗಾರಿಕಾ ಬೆಳೆಗಳ ಮಾರಾಟಕ್ಕೆ ಕಿಸಾನ್ ಮಾಲ್, ಸಿರಿಧಾನ್ಯಗಳಿಗೆ ಪ್ರೋತ್ಸಾಹಕ್ಕೆ ನೀಡಲು ಮಿಲ್ಲೆಟ್ ಯೋಜನೆ, ಬಡ್ಡಿರಹಿತ ಬೆಳೆಸಾಲ ೩ ರಿಂದದ ೫ ಲಕ್ಷಕ್ಕೆ ಏರಿಕೆ, ಶೇ.3 ಬಡ್ಡಿದರದಲ್ಲಿ ಮಧ್ಯಾವಧಿ ಸಾಲ ೧೦ರಿಂದ ೧೫ ಲಕ್ಷಕ್ಕೆ ಏರಿಸಲಾಗಿದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಈ ಯೋಜನೆಗಳು ಘೋಷಣೆಯಾಗಿಯೇ ಉಳಿಯುತ್ತವೆ. ಉಡುಪಿ ಜಿಲ್ಲೆಯಲ್ಲಿ ಕೃಷಿ ಕಾಲೇಜು, ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಪ್ರಸ್ತಾವವೇ ಇಲ್ಲ. ಈಗಿರುವ ಡಿಪ್ಲೋಮಾ ಕಾಲೇಜು ಕೂಡಾ ಮುಂದುವರಿಯಲು ಅನುದಾನವಿಲ್ಲ. ಉಡುಪಿ ಜಿಲ್ಲೆಯ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ ಹೇಳಿದ್ದಾರೆ.------------ಲೋಕಸಭಾ ಚುನಾವಣಾ ಬಜೆಟ್: ಶೆಟ್ಟಿಗಾರ್ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳು ಜನಪ್ರಿಯ ಬಜೆಟನ್ನು ಮಂಡಿಸಲು ಪ್ರಯತ್ನಿಸಿದ್ದಾರೆ. ಕೌಶಲ್ಯ ಅಭಿವೃದ್ಧಿಗೆ ಪ್ರಾಶಸ್ತ್ಯ, ಶಿಕ್ಷಣ, ನೀರಾವರಿ, ಪ್ರವಾಸೋದ್ಯಮಗಳಿಗೆ ಆಧ್ಯತೆ, ಗ್ಯಾರಂಟಿಗಳ ಮುಂದುವರಿಕೆ ಒಪ್ಪಬೇಕಾದರೂ, ಇದನ್ನು ಸರಿದೂಗಿಸಲು ದೊಡ್ಡಮಟ್ಟದ ಸಾಲ, ಮತ್ತು ಮದ್ಯಪ್ರಿಯರನ್ನು ಮೊರೆಹೊಕ್ಕಿರುವುದು ಕಂಡುಬರುತ್ತದೆ ಎಂದು ಆರ್ಥಿಕ ವಿಶ್ಲೇಷಕ ರಮಾನಂದ ಶೆಟ್ಟಿಗಾರ್ ಅಭಿಪ್ರಾಯಪಟ್ಟಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌
ಬ್ಯಾಲೆಟ್‌ ಪೇಪರಲ್ಲೇ ಪಂಚಾಯ್ತಿ ಚುನಾವಣೆಗೆ ಸರ್ಕಾರ ಮಸೂದೆ