ರಕ್ತದಾನ ಎಲ್ಲ ಕಾಲಕ್ಕೂ ಶ್ರೇಷ್ಠ

KannadaprabhaNewsNetwork | Published : Mar 22, 2025 2:04 AM

ಸಾರಾಂಶ

ಚಿತ್ರದುರ್ಗದ ದವಳಗಿರಿ ಬಡಾವಣೆಯ ಗಾಯತ್ರಿ ಶಿವರಾಮ್ ಇನ್ನರ್ ವ್ಹೀಲ್ ಭವನದಲ್ಲಿ ನಡೆದ ಮಹಿಳಾ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ರಕ್ತದಾನ ಎಲ್ಲ ಕಾಲಕ್ಕೂ ಶ್ರೇಷ್ಠವಾದುದು. ರಕ್ತದಾನ ಮಾಡುವ ಮೂಲಕ ಇನ್ನೊಂದು ಜೀವ ಉಳಿಸಲು ಮುಂದಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಹೇಳಿದರು.

ನಗರದ ದವಳಗಿರಿ ಬಡಾವಣೆಯ ಗಾಯತ್ರಿ ಶಿವರಾಮ್ ಇನ್ನರ್ ವ್ಹೀಲ್ ಭವನದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಇನ್ನರ್ ವ್ಹೀಲ್ ಕ್ಲಬ್, ವಾಸವಿ ಕ್ಲಬ್ ಪೋರ್ಟ್ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯವಂತರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ರಕ್ತದ ಅವಶ್ಯಕತೆಯಿಂದ ಬಳಲುವ ಜೀವ ಉಳಿಸಲು ಮುಂದಾಗಬೇಕು. ಮುಂದಿ ದಿನಗಳಲ್ಲಿ ಇನ್ನೂ ಹೆಚ್ಚು ರಕ್ತದಾನ ಶಿಬಿರಗಳು ಆಯೋಜಿಸುವಂತೆ ಸಲಹೆ ನೀಡಿದರು.

ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಸರಸ್ವತಿ ಕಾನೂನು ಕಾಲೇಜು ಪ್ರಾಂಶುಪಾಲೆ ಎಸ್.ಸುಧಾದೇವಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರೇಖಾ, ಶಿಕ್ಷಣ ಸಂಯೋಜಕರಾದ ಸೈಯದ ಸಮೀರ ಅಪಷನ್, ಎಸ್‍ಜೆಎಂ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಡಾ.ನಾಜಿರಾ ಉನ್ನಿಸ, ಸ್ತ್ರೀರೋಗ ತಜ್ಞೆ ಡಾ.ರೂಪಶ್ರೀ, ಕೋಟೆ ಪೊಲೀಸ್ ಠಾಣೆಯ ಪೊಲೀಸ್ ಸಬ್‍ಇನ್ಸೆಪೆಕ್ಟರ್ ರುಕ್ಕಮ್ಮ ಅವರನ್ನು ಸನ್ಮಾನಿಸಲಾಯಿತು.

ರೆಡ್‍ಕ್ರಾಸ್ ಸಭಾಪತಿ ಗಾಯತ್ರಿ ಶಿವರಾಮ್, ವೀರಶೈವ ಅರ್ಬನ್ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷ ಶಿವಕುಮಾರ್ ಪಾಟೀಲ್, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಪೂಜಾ ಪ್ರದೀಪ, ವಾಸವಿ ಕ್ಲಬ್ ಚಿತ್ರದುರ್ಗ ಪೋರ್ಟ್ ಅಧ್ಯಕ್ಷೆ ರಾಜೇಶ್ವರಿ ಸಿದ್ದರಾಮ್, ರೆಡ್ ಕ್ರಾಸ್ ಕಾರ್ಯದರ್ಶಿ ಮಜಹರ್ ಉಲ್ಲಾ, ಖಜಾಂಚಿ ವಿರೇಶ್, ನಿರ್ದೇಶಕರಾದ ಡಾ.ಮಧುಸೂದನ್ ರೆಡ್ಡಿ, ಶಿವರಾಮ್, ಸುರೇಶ್, ವೀರಭದ್ರಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು. ಶಿಬಿರದಲ್ಲಿ ಮಹಿಳೆಯರು ಸೇರಿ ಒಟ್ಟು 18 ಜನ ರಕ್ತದಾನ ಮಾಡಿದರು. ರೆಡ್‍ಕ್ರಾಸ್ ಸಂಸ್ಥೆಯ ಉಪಸಭಾಪತಿ ಅರುಣ್ ಕುಮಾರ್ ಅವರು 43ನೇ ಬಾರಿ ರಕ್ತದಾನ ಮಾಡಿದರು.

Share this article