- ಹೊನ್ನಾಳಿ ಸರ್ಕಾರಿ ಕಾಲೇಜಿನಲ್ಲಿ ವಿಶ್ವ ರಕ್ತದಾನಿಗಳ ದಿನ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ರಕ್ತಕ್ಕೆ ಪರ್ಯಾಯ ವಸ್ತುವಿಲ್ಲ. ಈ ಹಿನ್ನೆಲೆ ರಕ್ತದಾನಕ್ಕಿಂತ ಅತ್ಯುತ್ತಮವಾದ ಸಮಾಜ ಸೇವೆ ಮತ್ತೊಂದಿಲ್ಲ ಎಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಬಿ.ಜಿ, ಧನಂಜಯ ಹೇಳಿದರು.ಶನಿವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶ, ರೆಡ್ ರಿಬ್ಬನ್, ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2, ಯುವ ರೆಡ್ ಕ್ರಾಸ್ ಹಾಗೂ ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ರಕ್ತದಾನಿಗಳ ದಿನ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಕ್ತದಾನ ಬಗ್ಗೆ ಸಮಾಜ, ಯುವಜನಾಂಗದಲ್ಲಿ ತಪ್ಪು ಕಲ್ಪನೆಗಳಿಂದಾಗಿ ರತ್ತದಾನ ಮಾಡಲು ಯುವಕರು ಮುಂದೆ ಬರುವುದು ಕಡಿಮೆಯಾಗಿದೆ ಸಮಾನ್ಯವಾಗಿ 1 ವರ್ಷಕ್ಕೆ 5 ಕೋಟಿ ಯೂನಿಟ್ ರಕ್ತ ಆಗತ್ಯವಿದೆ. ಆದರೆ, ರಕ್ತದಾನ ಬಗ್ಗೆ ತಪ್ಪು ಕಲ್ಪನೆಯಿಂದಾಗಿ ಕೇವಲ 2.5 ಕೋಟಿ ಯೂನಿಟ್ ರಕ್ತ ಮಾತ್ರ ದಾನಿಗಳಿಂದ ಸಂಗ್ರಹವಾಗುತ್ತಿದೆ ಎಂದು ಹೇಳಿದರು.ರಕ್ತದಾನಕ್ಕೆ ಜಾತಿ, ಮತ, ಧರ್ಮಗಳ ತಾರತಮ್ಯವಿಲ್ಲ. ರಕ್ತ ತುರ್ತು ಪರಿಸ್ಥಿತಿಗಳಲ್ಲಿ ಮಾನವನ ಪ್ರಾಣ ಉಳಿಸಲು ಅಗತ್ಯವಾಗಿ ಬೇಕೇಬೇಕಾಗುತ್ತದೆ. ಯುವಕರು ದಾನ ಮಾಡುವ ರಕ್ತರಿಂದಾಗಿ ಅದೆಷ್ಟೋ ಜನರ ಪ್ರಾಣ ಉಳಿಯುತ್ತದೆ. ರಕ್ತದಾನ ಮಾಡುವುದರಿಂದ ನೆನಪಿನ ಶಕ್ತಿ, ಆರೋಗ್ಯವೂ ಉತ್ತಮವಾಗುತ್ತದೆ. ಆದ್ದರಿಂದ ಯುವಕರು ರಕ್ತದಾನ ಮಾಡಲು ಮುಂದೆ ಬರಬೇಕು ಎಂದರು.
ಹೊನ್ನಾಳಿ ಸರ್ಕಾರಿ ಆಸ್ಪತ್ರೆಯ ಇ.ಎನ್.ಟಿ. ತಜ್ಞವೈದ್ಯರಾದ ಡಾ. ಮೀನಾಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ಪ್ರಸ್ತುತ ದಿನಗಳಲ್ಲಿ ಯುವಜನರು ಮೊಬೈಲ್ ಅತಿಯಾದ ಬಳಕೆಯಿಂದ ಇತರೆ ದೈಹಿಕ ಚಟುವಟಿಕೆಗಳಿಲ್ಲದೆ ಜೀವಿಸುತ್ತಿದ್ದಾರೆ. ಮದ್ಯಪಾನ, ಧೂಮಪಾನ, ಡ್ರಗ್ಸ್ ಸೇವನೆಯಂಥ ಕೆಟ್ಟ ಚಟಗಳಿಂದಾಗಿ ಅಮೂಲ್ಯ ಜೀವನ ಹಾಳುಮಾಡಿಕೊಳ್ಳುತ್ತಿದ್ದಾರೆ. ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು, ಮನೆಯಲ್ಲಿ ಪೋಷಕರು, ಶಾಲಾ- ಕಾಲೇಜುಗಳಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ನಡೆಯಬೇಕು. ಆಗ ಜೀವನವನ್ನು ಉಜ್ವಲಗೊಳಿಸಿಕೊಳ್ಳುವ ಜೊತೆಗೆ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕು ಸಾಗಿಸಬಹುದು ಎಂದು ಹೇಳಿದರು.ವಿಶೇಷವಾಗಿ ಹೆಣ್ಣುಮಕ್ಕಳು ಬಹುಪಾಲು ರತ್ತಹೀನತೆಯಿಂದ ಬಳಲುತ್ತಿರುತ್ತಾರೆ. ಅವರು ಆದಷ್ಟು ಹೆಚ್ಚಿನ ಪೌಷ್ಠಿಕಾಂಶವುಳ್ಳ ಆಹಾರ ಸೇವಿಸಬೇಕು. ನಿರಂತರ ವ್ಯಾಯಾಮ ಮಾಡಬೇಕು ಎಂದರು.
ಸರ್ಕಾರಿ ಆಸ್ಪತ್ರೆ ಆಪ್ತಸಮಾಲೋಚಕಿ ಭಾಗ್ಯಮ್ಮ ಸ್ವಯಂಪ್ರೇರಿತ ರಕ್ತದಾನ ಕುರಿತು ಮಾತನಾಡಿದರು. 23 ಬಾರಿ ರಕ್ತದಾನ ಮಾಡಿದ ಪತ್ರಕರ್ತ ಎನ್.ಕೆ. ಆಂಜನೇಯ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಅಂಗವಾಗಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಪ್ರಥಮ ಬಿ.ಎ. ಜಿ.ಜಿ.ಸಿಂಧು, ದ್ವಿತೀಯ ಬಹುಮಾನ ಪಡೆದ ಫೈನಲ್ ಬಿ.ಎಸ್ಸಿ. ಎಚ್.ಡಿ.ಗಗನ, ತೃತೀಯ ಬಹುಮಾನ ಪಡೆದ ಪ್ರಥಮ ಬಿ.ಕಾಂ.ನ ಎಂ. ಅರ್ಚಿತ ಅವರನ್ನು ಕಾಲೇಜು ವತಿಯಿಂದ ನಗದು ಬಹುಮಾನ ನೀಡಿ, ಗೌರವಿಸಲಾಯಿತು.ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪಿ.ಎಸ್. ಹರೀಶ್ ಕಾರ್ಯಕ್ರಮ ನಿರೂಪಿಸಿದರು. ವೈಷ್ಣವಿ ಸಂಗಡಿಗರು ಪ್ರಾರ್ಥನೆ ಸಲ್ಲಿಸಿದರು. ಸಹಾಯಕ ಪ್ರಾಧ್ಯಾಪಕ ಧನಂಜಯ ಮೂರ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಂಥಾಧಿಕಾರಿ ನಾಗರಾಜ ನಾಯ್ಕ ವಂದಿಸಿದರು.
- - - -15ಎಚ್.ಎಲ್.ಐ3:ಹೊನ್ನಾಳಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಬಿ.ಜಿ. ಧನಂಜಯ ಮಾತನಾಡಿದರು. ಡಾ.ಮೀನಾಕುಮಾರಿ ಇತರರು ಇದ್ದರು.