ಗದಗ:ಬಸವತತ್ವಗಳನ್ನು ತಮ್ಮ ಜೀವಿತಾವಧಿಯವರೆಗೂ ಅನುಷ್ಠಾನಗೊಳಿಸಿದ ಶ್ರೇಷ್ಠ ಶರಣರಾದ ಬೂದೀಶ್ವರರು ಬಿಂಕದಕಟ್ಟಿ ಗ್ರಾಮದ ತಿರ್ಲಾಪುರ ಮನೆತನದಲ್ಲಿ ತೋರಿದ ಜೀವದಯೆ- ಪ್ರಾಣಿದಯೆ ಅವರ ಮಾನವತೆಯ ಶ್ರೇಷ್ಠ ಸಾಕ್ಷಿಯಾಗಿದೆ ಎಂದು ಅಭಿನವ ಬೂದೀಶ್ವರ ಸ್ವಾಮೀಜಿ ನುಡಿದರು.
ಅಧ್ಯಕ್ಷತೆಯನ್ನು ವಹಿಸಿದ ತುಪ್ಪದಕುರಟ್ಟಿಯ ಪ.ಪೂ.ವಾಗೇಶಾರಾಧ್ಯ ಶಿವಾಚಾರ್ಯರು, ಅಭಿನವ ಬೂದೀಶ್ವರ ಸ್ವಾಮೀಜಿ, ಗ್ರಾಮೀಣ ಭಾಗದ ರೈತರ, ಬಡವರ ಮಕ್ಕಳಿಗೆ ಅಕ್ಷರ ದಾಸೋಹದ ಮೂಲಕ ಶ್ರೀಮಠವನ್ನು ಸಮಾಜಮುಖಿಯಾಗಿಸಿದ್ದಾರೆಂದು ನುಡಿದರು.
ಬೂದೀಶ್ವರ ಪವಾಡ ಕಲಾಪ್ರತಿಮೆಯನ್ನು ಹುಲಕೋಟಿ ಆರ್ಟಿಇ ಸೊಸೈಟಿ ಕಾರ್ಯದರ್ಶಿ ಸಚಿನ್ ಡಿ. ಪಾಟೀಲ ಅನಾವರಣಗೊಳಿಸಿದರು. ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಡಾ. ಶರಣಬಸವ ವೆಂಕಟಾಪೂರ ಅವರು, ಲೋಕಕಲ್ಯಾಣಗೈದ ಕಲ್ಯಾಣದ ಶರಣರಲ್ಲಿ ಬೂದೀಶ್ವರರ ವ್ಯಕ್ತಿತ್ವ ಅನನ್ಯವಾದುದು. ಅವರು ಪವಾಡ ಪುರುಷರು ಯೋಗಿ ಪುರುಷರಾಗಿದ್ದರೆಂದು ನುಡಿದರು. ಸದ್ಯದ ಅಭಿನವ ಬೂದೀಶ್ವರ ಮಹಾಸ್ವಾಮಿಗಳವರಿಂದ ಶ್ರೀಮಠ ಲೋಕಕಲ್ಯಾಣದ ಸೇವಾ ಕೇಂದ್ರವಾಗಿದೆ ಎಂದು ನುಡಿದರು. ವೇದಿಕೆಯಲ್ಲಿ ಕುರ್ತಕೋಟಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಪ್ಪಣ್ಣ ಎ. ಇನಾಮತಿ, ರಾಮಕರುಣಾನಂದ ಆಶ್ರಮದ ಶಿವಶರಣೆ ಮಲ್ಲಮ್ಮತಾಯಿಯವರು, ಬಿಂಕದಟ್ಟಿ ಗ್ರಾಮದ ಅಡಿವೆಪ್ಪ ತಿರ್ಲಾಪುರ, ಭೀಮರಡ್ಡಿ ತಿರ್ಲಾಪುರ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಶ್ರೀಮಠದ ಪೀಠಾಧಿಕಾರಿಗಳ ಸಾಲಗದ್ದುಗೆಗಳ ನವೀಕರಣದ ಲೋಕಾರ್ಪಣೆ ಹಾಗೂ ೭೭೫ ಸುಮಂಗಲೆಯರ ಉಡಿತುಂಬುವ ಕಾರ್ಯಕ್ರಮ ಅತ್ಯಂತ ಭಕ್ತಿಭಾವ ಪೂರ್ಣವಾಗಿ ಜರುಗಿತು. ಈ ಮಠಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಹಾಗೂ ಬಿಂಕದಕಟ್ಟಿ ಗ್ರಾಮದ ತಿರ್ಲಾಪುರ ಪರಿವಾರದ ಬಳಗದ ಹಿರಿಯರನ್ನು ಸನ್ಮಾನಿಸಲಾಯಿತು.ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ಟಿ.ವಿ. ರೋಣದ ಸ್ವಾಗತಿಸಿದರು. ಪ್ರೊ. ಅನುರಾಗ ರಕ್ಕಸಗಿಯವರು ವಂದನಾರ್ಪಣೆ ಸಲ್ಲಿಸಿದರು.