ಕೂಡ್ಲಿಗಿ: ತಾಲೂಕಿನ ಗಜಾಪುರ ಹತ್ತಿರದ ಐತಿಹಾಸಿಕ ದೇವಲಾಪುರ ಕೆರೆಯನ್ನು ಅತಿಕ್ರಮಣ ಮಾಡಿಕೊಂಡು ಕೊಳವೆಬಾವಿ ಕೊರೆಸಿದ 16 ರೈತರು ಹಾಗೂ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅವಕಾಶ ಕೊಟ್ಟ ಜೆಸ್ಕಾಂ ಅಧಿಕಾರಿಗಳಿಗೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
16 ರೈತರಿಗೆ ನೋಟಿಸ್: ಕೆರೆಯಲ್ಲಿ ಕೊಳವೆಬಾವಿ ಕೊರೆಸಿದ 16 ರೈತರಿಗೆ ನೋಟಿಸ್ ನೀಡಿದ್ದಾರೆ. ಜೊತೆಗೆ ಕೆರೆಯಲ್ಲಿ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕವನ್ನು ಯಾವ ಆಧಾರದ ಮೇಲೆ ನೀಡಿದ್ದೀರಿ ಎಂದು ಜೆಸ್ಕಾಂ ಇಲಾಖೆಯ ಅಧಿಕಾರಿಗಳಿಗೂ ನೋಟಿಸ್ ನೀಡಿದ್ದಾರೆ. ಈಗಾಗಲೇ ಕೆರೆಗಳಲ್ಲಿ ಕೊಳವೆಬಾವಿ ಹಾಕಿಸಿದ ರೈತರಿಗೆ ಢವಢವ ಶುರುವಾಗಿದೆ. ಯಾವ ಸಮಯದಲ್ಲಿ ಕಾನೂನು ಕ್ರಮ ಕೈಗೊಂಡು ಕೊಳವೆಬಾವಿಗಳನ್ನು ಮುಚ್ಚುತ್ತಾರೆ ಎಂಬ ಆತಂಕ ಕಾಡುತ್ತಿದೆ.
40 ನಿಷ್ಪ್ರಯೋಜನ ಕೊಳವೆಬಾವಿಯಿಂದ ನೀರು ಪೋಲು:ದೇವಲಾಪುರ ಕೆರೆಯಲ್ಲಿ 16 ಕೊಳವೆಬಾವಿಗಳು ಇವೆ. ಆದರೆ ಕೆರೆಯಲ್ಲಿ ಕೊಳವೆಬಾವಿ ಕೊರೆಸಿದಾಗ ನೀರು ಬಾರದಿರುವ ನಿರುಪಯುಕ್ತ ಕೊಳವೆಬಾವಿಗಳು ಸಂಖ್ಯೆ ಬರೋಬ್ಬರಿ 40ಕ್ಕೂ ಅಧಿಕ ಎಂಬುದನ್ನು ಸ್ಥಳೀಯ ರೈತರೇ ಹೇಳುತ್ತಾರೆ. ಆ ಕೊಳವೆಬಾವಿಗಳ ಮೂಲಕ ಕೆರೆಯ ನೀರು ಪೋಲು ಆಗುತ್ತದೆ. ಈಗ ಕೆರೆ ತುಂಬಿದ್ದರಿಂದ ಅವುಗಳನ್ನು ಪತ್ತೆ ಹಚ್ಚಲು ಹಾಗೂ ನೀರು ಪೋಲು ಆಗದೇ ಮುಚ್ಚಲು ಸಾಧ್ಯವಿಲ್ಲ. ಕೆರೆಯ ನೀರು ಖಾಲಿಯಾದಾಗ ಈ ಕಾರ್ಯ ಮಾಡಬೇಕಾಗುತ್ತದೆ.