ಹುಬ್ಬಳ್ಳಿಯಲ್ಲಿ ರೀಲ್ಸ್‌ ಹುಚ್ಚಾಟಕ್ಕೆ ಬಾಲಕ ಬಲಿ

KannadaprabhaNewsNetwork |  
Published : Mar 21, 2026, 02:00 AM IST
ನಮೀಷ್ ಸಂಗಳದ | Kannada Prabha

ಸಾರಾಂಶ

ರೀಲ್ಸ್‌ ಹುಚ್ಚಾಟಕ್ಕೆ ಬಿಜೆಪಿ ಮುಖಂಡರೊಬ್ಬರ ಪುತ್ರ, 15 ವರ್ಷದ ಬಾಲಕ ಅಪಘಾತದಲ್ಲಿ ಮೃತಪಟ್ಟ ಘಟನೆ ಇಲ್ಲಿನ ಉಣಕಲ್‌ನ ಮಹಾಲಕ್ಷ್ಮಿ ಲೇಔಟ್‌ನ ಶೇಜವಾಡ್ಕರ್‌ ಬಡಾವಣೆಯಲ್ಲಿ ಗುರುವಾರ ನಡೆದಿದೆ.

ಹುಬ್ಬಳ್ಳಿ: ರೀಲ್ಸ್‌ ಹುಚ್ಚಾಟಕ್ಕೆ ಬಿಜೆಪಿ ಮುಖಂಡರೊಬ್ಬರ ಪುತ್ರ, 15 ವರ್ಷದ ಬಾಲಕ ಅಪಘಾತದಲ್ಲಿ ಮೃತಪಟ್ಟ ಘಟನೆ ಇಲ್ಲಿನ ಉಣಕಲ್‌ನ ಮಹಾಲಕ್ಷ್ಮಿ ಲೇಔಟ್‌ನ ಶೇಜವಾಡ್ಕರ್‌ ಬಡಾವಣೆಯಲ್ಲಿ ಗುರುವಾರ ನಡೆದಿದೆ.

ರವಿನಗರದ ನಿವಾಸಿ, ಬಿಜೆಪಿ ಮುಖಂಡ ವೀರೇಶ ಸಂಗಳದ ಅವರ ಪುತ್ರ ನಮಿಷ್ ಸಂಗಳದ (15) ಮೃತಪಟ್ಟಿದ್ದಾನೆ. ಕಾರು ಮತ್ತು ಸ್ಕೂಟಿ ಮಧ್ಯೆ ಆ್ಯಕ್ಷನ್ ಬ್ರೇಕ್ ರೀಲ್ಸ್ ಮಾಡಲು ಹೋಗಿ ಅಪಘಾತವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಆಡಿ ಕಾರ್ ಮತ್ತು ಎಲೆಕ್ಟ್ರಿಕಲ್ ಸ್ಕೂಟಿ ಎದುರು-ಬದುರು ವೇಗವಾಗಿ ಬಂದು ತಕ್ಷಣ ಬ್ರೇಕ್ ಹಾಕುವ (ಆ್ಯಕ್ಷನ್ ಬ್ರೇಕ್ ರೀಲ್ಸ್) ವೇಳೆ, ನಿಯಂತ್ರಣ ತಪ್ಪಿ ಕಾರು, ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಸ್ಕೂಟಿಯಲ್ಲಿದ್ದ ನಮೀಷ್ ಗಂಭೀರ ಗಾಯಗೊಂಡು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾತನಾಡಿ, ಬಾಲಕ ಮೈಸೂರಿನಲ್ಲಿ ಓದುತ್ತಿದ್ದ. ಒಂಬತ್ತನೇ ತರಗತಿಯ ವಾರ್ಷಿಕ ಪರೀಕ್ಷೆ ಮುಗಿಸಿಕೊಂಡು ಯುಗಾದಿ ಹಬ್ಬಕ್ಕೆಂದು ಮನೆಗೆ ಬಂದಿದ್ದ. ಅಕ್ಕಪಕ್ಕದ ಸ್ನೇಹಿತರ ಜತೆ ಸೇರಿ ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ ಎಂದರು.

ಪೋಷಕರು ಅಪ್ರಾಪ್ತರಿಗೆ ವಾಹನ ನೀಡುವುದು ಸರಿಯಲ್ಲ. ಪಾಲಕರಲ್ಲಿ ಜಾಗೃತಿ ಮೂಡಿಸುತ್ತಿದ್ದರೂ, ಅವರ ಗಮನಕ್ಕೆ ಬರದೆ ಕೆಲವು ಮಕ್ಕಳು ವಾಹನ ಚಲಾಯಿಸುತ್ತಿದ್ದಾರೆ. ಈ ಕುರಿತು ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೆಎಂಸಿಆರ್‌ಐಗೆ ಶಾಸಕ ಮಹೇಶ ಟೆಂಗಿನಕಾಯಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇಂಥ ಘಟನೆಗಳು ನಡೆಯಬಾರದು. ಅಪ್ರಾಪ್ತರಿಗೆ ವಾಹನ ನೀಡಬಾರದು. ಈ ನಿಟ್ಟಿನಲ್ಲಿ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪ್ರಕರಣ ದಾಖಲು: ರೀಲ್ಸ್‌ ಹುಚ್ಚಾಟಕ್ಕೆ ಬಾಲಕ ಬಲಿಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಲ್ಲಿನ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆಡಿ ಕಾರು ಓಡಿಸುತ್ತಿದ್ದ ಬಾಲಕನ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ. ಜತೆಗೆ ಅಪ್ರಾಪ್ತರು ಕಾರು ಓಡಿಸುತ್ತಿದ್ದ ಪರಿಣಾಮ ವಾಹನ ಮಾಲೀಕರು ಯಾರಿದ್ದಾರೋ ಅವರಿಗೆ ನೋಟಿಸ್‌ ನೀಡಲು ಪೊಲೀಸ್‌ ಕಮಿಷನರ್‌ ಸೂಚಿಸಿದ್ದಾರೆ. ತನಿಖೆ ಮುಗಿದ ಬಳಿಕ ವಾಹನ ಮಾಲೀಕರ ಮೇಲೂ ಕ್ರಮವಾಗಲಿದೆ. ಸದ್ಯ ತನಿಖೆ ನಡೆಯುತ್ತಿದೆ ಎಂದು ಕಮಿಷನರ್‌ ಶಶಿಕುಮಾರ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿಯೊಬ್ಬರಲ್ಲಿ ದೇಶ ಭಕ್ತಿ ಮೂಡಿಸಿ
ಪಂಚಾಂಗ ಶ್ರವಣದಿಂದ ಮನಸ್ಸಿಗೆ ನೆಮ್ಮದಿ ಲಭಿಸುವುದು-ಶಿವಾಚಾರ್ಯರು