ಯಲ್ಲಾಪುರ: ಗಂಗಾಧರ ಕಾಲನಿಗೆ ಮೂಲ ಸೌಕರ್ಯ ಕಲ್ಪಿಸದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಗಂಗಾಧರ ಕಾಲನಿಯ ಮಹಿಳಾ ಮುಖಂಡರಾದ ಸರೋಜ ರಂಗು ರಾಠೋಡ ಎಚ್ಚರಿಸಿದರು.
ನಮ್ಮ ವಾಸಸ್ಥಳ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ್ದು, ಇಲ್ಲಿಗೆ ವಿದ್ಯುತ್ ಸಂಪರ್ಕ ನೀಡಲು ಬರುವುದಿಲ್ಲ. ದಾಖಲೆಗಳು ಬೇಕು ಎಂಬಿತ್ಯಾದಿ ಸಬೂಬನ್ನೇ ಹೇಳುತ್ತಾ ೩೦ ವರ್ಷ ಕಳೆದಿದ್ದಾರೆ. ೨೦೨೦ರ ವರೆಗೆ ತೆರಿಗೆ ಭರಣ ಮಾಡಿದ್ದು, ನಂತರದಲ್ಲಿ ತೆರಿಗೆ ಕಟ್ಟುವುದು ಬೇಡ ಎಂದು ಹೇಳಿದ್ದಾರೆ. ಮನೆ ನಂಬರ್, ವಾಸಸ್ಥಳ ದೃಢೀಕರಣ, ರೇಷನ್ ಕಾರ್ಡ್, ಆಧಾರ ಕಾರ್ಡ್ ಎಂದು ಇಷ್ಟೆಲ್ಲಾ ದಾಖಲೆಗಳಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಸ್ಥಳವನ್ನು ಯಲ್ಲಾಪುರದ ಖಾಸಗಿ ವ್ಯಕ್ತಿಯೊಬ್ಬರು ಪಡೆದುಕೊಂಡಿದ್ದು, ವಾಸ ಮಾಡುತ್ತಿರುವ ನಮ್ಮೆಲ್ಲರಿಗೂ ಬೇರೆಡೆ ಸ್ಥಳ ನೀಡುವುದಾಗಿ ಹೇಳಿದ್ದರು. ಅದೂ ಸಹ ಸಾಧ್ಯವಾಗಿಲ್ಲ ಎಂದರು.
ಪ್ರಧಾನಮಂತ್ರಿಗಳ ಆಶಯದಂತೆ ಸ್ವಚ್ಛ ಭಾರತ, ಬೇಟಿ ಬಚಾವೋ ಬೇಟಿ ಪಡಾವೋ ಎಂಬ ಘೋಷಣೆಗಳು ಕೇವಲ ಘೋಷಣೆಗಳಾಗಿವೆ. ನಿತ್ಯ ಶೌಚಕ್ಕೆ ಬಯಲು ಪ್ರದೇಶದಲ್ಲೇ ಹೋಗುವ ಪರಿಸ್ಥಿತಿ ಇಲ್ಲಿನ ಮಹಿಳೆಯರದ್ದಾಗಿದೆ. ವಿದ್ಯುತ್ ಸಂಪರ್ಕ ನೀಡದೇ ಕತ್ತಲಲ್ಲೇ ಜೀವನ ದೂಡುತ್ತಾ ಓದಲಾಗದೇ ಬಹಳಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳಿಗೆ ಪರಿಹಾರ ಬೇಕಿದೆ. ಬಾಯಿಮಾತಿನ ಸಮಾಧಾನದಿಂದ ಯಾವುದೂ ಬಗೆಹರಿದಿಲ್ಲ.ಸದ್ಯ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ೭೦ಕ್ಕೂ ಅಧಿಕ ಕುಟುಂಬ ೨೫೦ಕ್ಕೂ ಅಧಿಕ ಮತದಾರರು ಮತದಾನವನ್ನು ಬಹಿಷ್ಕರಿಸುತ್ತಿದ್ದು, ಮೂಲ ಸೌಕರ್ಯ ಒದಗಿಸದ ಹೊರತಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದರು.