ಎಕ್ಸ್ ಪ್ರೆಸ್ ವೇನಲ್ಲಿ ಅಪಘಾತಗಳಿಗೆ ಬಿತ್ತು ಬ್ರೇಕ್‌

KannadaprabhaNewsNetwork |  
Published : Sep 05, 2024, 12:34 AM IST
4ಕೆಆರ್ ಎಂಎನ್ 8.ಜೆಪಿಜಿಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇ ಚಿತ್ರ | Kannada Prabha

ಸಾರಾಂಶ

ಎಕ್ಸ್ ಪ್ರೆಸ್ ವೇನಲ್ಲಿ ಅಪಘಾತಗಳಿಗೆ ಬಿತ್ತು ಬ್ರೇಕ್‌

ಎಂ.ಅಫ್ರೋಜ್ ಖಾನ್ಕನ್ನಡಪ್ರಭ ವಾರ್ತೆ ರಾಮನಗರಸಾವು ನೋವಿನ ರಹದಾರಿಯಾಗಿದ್ದ ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಪೊಲೀಸ್‌ ಇಲಾಖೆ ಕೈಗೊಂಡ ಸುರಕ್ಷತಾ ಕ್ರಮಗಳ ಪರಿಣಾಮ ಅಪಘಾತಗಳ ಪ್ರಮಾಣ ನಿಯಂತ್ರಣಕ್ಕೆ ಬಂದಿದೆ.ನಿರಂತರ ಅಪಘಾತಗಳಿಂದಾಗಿ ಡೆತ್‌ ವೇ ಎಂಬ ಕಳಂಕಕ್ಕೆ ಪಾತ್ರವಾಗಿದ್ದ ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ 2023 ಹಾಗೂ 2024ನೇ ಸಾಲಿಗೆ ಹೋಲಿಕೆ ಮಾಡಿದರೆ ಅಪಘಾತಗಳ ಪ್ರಮಾಣ ತಗ್ಗಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.2023ರ ಆಗಸ್ಟ್ ಅಂತ್ಯದವರೆಗೆ ಸಂಭವಿಸಿದ ಅಪಘಾತಗಳಲ್ಲಿ 143 ಮಂದಿ ಮರಣ ಹೊಂದಿದ್ದರೆ, 2024ರ ಆಗಸ್ಟ್ ತಿಂಗಳವರೆಗೆ 50 ಮಂದಿ ಸಾವನ್ನಪ್ಪಿದ್ದಾರೆ. ಹೆದ್ದಾರಿಯಲ್ಲಿ ವಾಹನಗಳ ವೇಗ ನಿಯಂತ್ರಣ ಮತ್ತು ಶಿಸ್ತು ಪಥವೇ ದಿನೆ ದಿನೇ ಅಪಘಾತಗಳು ನಿಯಂತ್ರಣಕ್ಕೆ ಬರಲು ಕಾರಣ‍ಾಗಿದೆ.ಹೆದ್ದಾರಿಯಲ್ಲಿ ಸಂಭವಿಸುತ್ತಿದ್ದ ಅಪಘಾತಗಳು ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಸಚಿವರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಪೊಲೀಸ್‌ ಇಲಾಖೆ ಹಿರಿಯ ಅಧಿಕಾರಿಗಳು ಹೆದ್ದಾರಿ ಅವ್ಯವಸ್ಥೆಯ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದರು. ಆನಂತರ ಸಂಚಾರ ನಿಯಂತ್ರಣ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್‌ಕುಮಾರ್‌ ರವರು ಪೊಲೀಸ್ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಹೆದ್ದಾರಿಗಿಳಿದು ಅಪಘಾತ ಸಂಭವಿಸಲು ಕಾರಣವಾಗಿರುವ ಅಂಶಗಳನ್ನು ಗುರುತಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಂಡರು.

ದಶಪಥ ಹೆದ್ದಾರಿಯಲ್ಲಿ ಎಟಿಎಂಸಿ ತಂತ್ರಜ್ಞಾನ ಅಳವಡಿಸಿದ್ದು, ಶಿಸ್ತು ಪಥ ಉಲ್ಲಂಘನೆ, ಅತೀ ವೇಗವಾಗಿ ಚಾಲನೆ ಮಾಡುವ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಸಂಚಾರ ನಿಯಮ ಉಲ್ಲಂಘನೆ ಮಾಡಿ ದ ಕೆಲವೇ ನಿಮಿಷಗಳಲ್ಲಿ ವಾಹನ ಮಾಲೀಕನ ಮೊಬೈಲ್ ಗೆ ದಂಡ ವಿಧಿಸಿರುವ ಸಂದೇಶ ಹೋಗುತ್ತಿರುವುದು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿದೆ. ಇದರ ಪರಿಣಾಮ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಾಲಿನಲ್ಲಿ ಅಪಘಾತದ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.ತಗ್ಗಿದ ಅಪಘಾತಗಳ ಸಂಖ್ಯೆ :ಈ ಹೆದ್ದಾರಿಯಲ್ಲಿ 2023ನೇ ಸಾಲಿನಲ್ಲಿ ಜನವರಿಯಿಂದ ಮೇ ತಿಂಗಳವರೆಗೆ 288 ಅಪಘಾತಗಳು ಸಂಭವಿಸಿದ್ದು, ಇದರಲ್ಲಿ 100 ಮಂದಿ ಸಾವನ್ನಪ್ಪಿದ್ದರೆ, 301 ಮಂದಿ ಗಾಯಗೊಂಡಿದ್ದರು. 2024ರ ಜನವರಿಯಿಂದ ಮೇ ತಿಂಗಳವರೆಗೆ ಒಟ್ಟು 125 ಅಪಘಾತಗಳು ನಡೆದಿದ್ದು, 31 ಮಂದಿ ಮೃತಪಟ್ಟರೆ, 167 ಮಂದಿ ಗಾಯಗೊಂಡಿದ್ದಾರೆ.2023ರ ಜನವರಿಯಲ್ಲಿ 13 ಮಾರಣಾಂತಿಕ ಅಪಘಾತ ಸೇರಿ 52 ಅಪಘಾತಗಳು ಸಂಭವಿಸಿ 14 ಮಂದಿ ಸಾವನ್ನಪ್ಪಿದರೆ , 53 ಮಂದಿ ಗಾಯಗೊಂಡಿದ್ದರು. ಫೆಬ್ರವರಿಯಲ್ಲಿ ಸಂಭವಿಸಿದ 55 ಅಪಘಾತಗಳಲ್ಲಿ 17 ಸಾವು, 56 ಗಾಯ, ಮಾರ್ಚ್ ನಲ್ಲಿ 49 ಅಪಘಾತಗಳಲ್ಲಿ 20 ಸಾವು, 58 ಗಾಯ, ಏಪ್ರಿಲ್ ನಲ್ಲಿ 61 ಅಪಘಾತದಲ್ಲಿ 20 ಸಾವು, 76 ಗಾಯ ಹಾಗೂ ಮೇ ತಿಂಗಳಲ್ಲಿ ಸಂಭವಿಸಿದ 71 ಅಪಘಾತ ಪ್ರಕರಣಗಳಲ್ಲಿ 29 ಮಂದಿ ಮೃತಪಟ್ಟರೆ, 58 ಮಂದಿ ಗಾಯಗೊಂಡಿದ್ದರು.ಇನ್ನು ಈ ವರ್ಷ (2024)ದ ಜನವರಿ ತಿಂಗಳಲ್ಲಿ 27 ಅಪಘಾತಗಳು ಸಂಭವಿಸಿದ್ದು, 10 ಮಂದಿ ಸಾವನ್ನಪ್ಪಿದ್ದರೆ, 42 ಮಂದಿ ಗಾಯಗೊಂಡಿದ್ದರು. ಫೆಬ್ರವರಿಯಲ್ಲಿ 14 ಅಪಘಾತಗಳಲ್ಲಿ 6 ಸಾವು, 18 ಗಾಯ, ಮಾರ್ಚ್ ನ 28 ಪ್ರಕರಣಗಳಲ್ಲಿ 8 ಸಾವು, 33 ಗಾಯ, ಏಪ್ರಿಲ್ ನ 31 ಪ್ರಕರಣಗಳಲ್ಲಿ 4 ಸಾವು, 40 ಗಾಯ ಹಾಗೂ ಮೇ ತಿಂಗಳಲ್ಲಿ ಸಂಭವಿಸಿದ 25 ಅಪಘಾತಗಳಲ್ಲಿ 3 ಮಂದಿ ಸಾವನ್ನಪ್ಪಿದರೆ, 34 ಮಂದಿ ಗಾಯಗೊಂಡಿದ್ದಾರೆ.--------------------------...ಕೋಟ್ ...ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅತಿ ವೇಗ ಮತ್ತು ವಿಚಲಿತ ಚಾಲನೆಯೇ ರಸ್ತೆ ಅಪಘಾತಗಳಿಗೆ ಕಾರಣ‍ವಾಗಿದೆ. ಆದ್ದರಿಂದ ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ವಾಹನ ಚಾಲಕರು ಪ್ರಯಾಣದ ಸಮಯವನ್ನು 15 ನಿಮಿಷಗಳಷ್ಟು ಹೆಚ್ಚಿಸುವುದು ಒಳಿತು.- ಅಲೋಕ್ ಕುಮಾರ್ , ಎಡಿಜಿಪಿ, ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವರ್ತಮಾನದೆಡೆಗೆ ಸಂಶೋಧನಾಸಕ್ತಿ ಕೇಂದ್ರಿತವಾಗಲಿ: ಡಾ. ಗಿರೀಶ ಕುಮಾರ
ಆಹಾರ ಸುರಕ್ಷತೆ: 9 ಪ್ರಕರಣಗಳಲ್ಲಿ ₹1.30 ಲಕ್ಷ ದಂಡ