ಕನ್ನಡಪ್ರಭ ವಾರ್ತೆ ಕೋಲಾರಕೋಲಾರದ ಕ್ಲಾಕ್ ಟವರ್ ವೃತ್ತದಲ್ಲಿರುವ ಗಡಿಯಾರ ಗೋಪುರ ೮೬ ವರ್ಷಗಳ ಹಿಂದೆ ಕೋಲಾರ ನಗರದ ಪ್ರಮುಖ ದ್ವಾರ ಬಾಗಿಲು ಆಗಿತ್ತು. ಹಳೇ ಬಸ್ ನಿಲ್ದಾಣದಲ್ಲೂ ೬೮ ವರ್ಷದ ಹಿಂದೆ ಮತ್ತೊಂದು ಗಡಿಯಾರ ಗೋಪುರ ನಿರ್ಮಾಣವಾಗಿತ್ತು. ಆದರೆ ಈ ಎರಡು ಗಡಿಯಾರಗಳು ಮೂಲೆಗುಂಪಾಗಿದ್ದು, ಕ್ಲಾಕ್ ಟವರ್ ವೃತ್ತದಲ್ಲಿರುವ ಗೋಪುರದಲ್ಲಿ ಒಂದು ಗಡಿಯಾರ ಮಾತ್ರ ಕೆಲಸ ನಿರ್ವಹಿಸುತ್ತಿದೆ. ಕ್ಲಾಕ್ ಟವರ್ ವೃತ್ತದಲ್ಲಿ ವರ್ಷದ ಎಲ್ಲ ದಿನಗಳಲ್ಲೂ ಇಲ್ಲಿ ಪೊಲೀಸ್ ಭದ್ರತೆ ಇದ್ದೇ ಇರುತ್ತದೆ. ಒಂದು ಕೋಮಿನ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ವಾಸವಿದ್ದು, ಈ ಹಿಂದೆ ಹಲವು ಬಾರಿ ಇಲ್ಲಿ ಗಲಾಟೆಗಳಾಗಿದ್ದವು. ಇದು ಕೋಲಾರ ನಗರದ ವಿವಾದಿತ ಪ್ರದೇಶ ಎಂದೇ ಗುರ್ತಿಸಲ್ಪಟ್ಟಿದೆ.
ಕೆಲ ವರ್ಷಗಳ ಹಿಂದೆ, ಈ ಕ್ಲಾಕ್ ಟವರ್ ವೃತ್ತದಲ್ಲಿರುವ ಗಡಿಯಾರ ಗೋಪುರಕ್ಕೆ ಸುಣ್ಣ ಬಣ್ಣ ಬಳಿಯಲಾಗಿದೆ. ನಾಲ್ಕು ದಿಕ್ಕುಗಳಲ್ಲಿದ್ದ ಗಡಿಯಾರಗಳಲ್ಲಿ ೩ ಗಡಿಯಾರಗಳು ಕಾಣದಂತೆ ಅಲ್ಯೂಮಿನಿಯಂ ಶೀಟ್ನ್ನು ಮುಚ್ಚಿದ್ದು, ಒಂದು ಗಡಿಯಾರ ಮಾತ್ರ ಕೆಲಸ ನಿರ್ವಹಿಸುತ್ತಿದೆ.
ಇದೇ ರೀತಿ ಹಳೇ ಬಸ್ಸ್ಟಾಂಡ್ ನಿಲ್ದಾಣದಲ್ಲಿ ಇರುವ ಗೋಪುರದಲ್ಲಿಯೂ ಗಡಿಯಾರಗಳು ಕೆಟ್ಟು ನಿಂತಿವೆ. ಇದರ ಸುತ್ತಲೂ ವ್ಯಾಪಾರಸ್ಥರು ಪೆಟ್ಟಿಗೆ ಅಂಗಡಿಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಮೇಲ್ಭಾಗ ಕಾಣುವ ಗೋಪುರಕ್ಕೆ ಬಣ್ಣ ಬಳಿಯಲಾಗಿದೆ. ಕೆಟ್ಟು ನಿಂತಿರುವ ಗಡಿಯಾರಗಳು ಮಾತ್ರ ದುಸ್ಥಿತಿಯಲ್ಲಿವೆ. ಕೆಳಭಾಗದಲ್ಲಿ ಕಸದ ತೊಟ್ಟಿ ನಿರ್ಮಾಣವಾಗಿದೆ. ಧ್ವಜಾರೋಹಣಕ್ಕೆ ಸೀಮಿತಈ ಗೋಪುರಗಳಿಗೆ ಕಳೆದ ೩ ವರ್ಷಗಳ ಹಿಂದೆ ಮಾಜಿ ಸಂಸದ ಎಸ್.ಮುನಿಸ್ವಾಮಿ ಕ್ಲಾಕ್ಟವರ್ನಲ್ಲಿರುವ ಗೋಪುರದ ಮೇಲೆ ಸ್ವಾತಂತ್ರ್ಯ ದಿನಾಚರಣೆ ದಿನದಂದು ರಾಷ್ಟ್ರ ಧ್ವಜ ಹಾರಿಸಲು ಒಂದು ಕೋಮಿನವರು ಕಟ್ಟಿದ್ದ ಬ್ಯಾನರ್ಗಳನ್ನು ತೆರವುಗೊಳಿಸಿ ಸುಣ್ಣ ಬಣ್ಣ ಬಳಸಿ ಬಿಗಿ ಬಂದೋಬಸ್ತ್ ನಡುವೆ ರಾಷ್ಟ್ರಧ್ವಜವನ್ನು ಹಾರಿಸಲಾಯಿತು. ಆದರೆ ಗಡಿಯಾರಗಳನ್ನು ರಿಪೇರಿ ಮಾಡಲಿಲ್ಲ. ಈಗಲೂ ಗಡಿಯಾರಗಳು ದುರಸ್ತಿಗೊಂಡಿಲ್ಲ.ಕೋಲಾರ ನಗರದ ಐತಿಹಾಸಿಕ ಕಟ್ಟಡಗಳಲ್ಲಿ ಒಂದಾಗಿರುವ ಕ್ಲಾಕ್ ಟವರ್ ವೃತ್ತದಲ್ಲಿರುವ ಹಾಗೂ ಹಳೆ ಬಸ್ ನಿಲ್ದಾಣದಲ್ಲಿರುವ ಗಡಿಯಾರ ಗೋಪುರಗಳು ಮಹಾರಾಜರ ಕಾಲದಲ್ಲಿ ಉದ್ಘಾಟನೆಗೊಂಡಿರುವುದು ಐತಿಹಾಸಿಕವುಳ್ಳ ಗೋಪುರ ಗಡಿಯಾರಗಳನ್ನು ಚಾಲನೆ ನೀಡಬೇಕು. ಸುತ್ತಲೂ ಸ್ವಚ್ಛಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೋಲಾರ ನಗರ ನಿವಾಸಿ ಹಾಜಿ ಮೊಹಮ್ಮದ್ ಮುಸ್ತಾಪ ಸಾಹೇಬ್ ೧೯೩೮ ರಲ್ಲಿ ನಿರ್ಮಾಣ ಮಾಡಿದ್ದ ಈ ಗಡಿಯಾರದ ಗೋಪುರವನ್ನು ಕಂಠೀರವ ನರಸಿಂಹರಾಜ್ ಒಡೆಯರ್ ಬಹುದ್ದೂರು ಉದ್ಘಾಟನೆ ಮಾಡಿದ್ದರು, ಅಂದು ಇದೇ ಕ್ಲಾಕ್ ಟವರ್ ವೃತ್ತ ಕೋಲಾರದ ಮುಖ್ಯ ದ್ವಾರ ಆಗಿದ್ದ ಕಾರಣ, ಸಾರ್ವಜನಿಕರಿಗೆ ಎತ್ತರದಲ್ಲಿ ಕಾಣುವ ಹಾಗೆ, ಸಮಯ ತಿಳಿಯುವ ಉದ್ದೇಶದಿಂದ, ಗೋಪುರ ಗಡಿಯಾರ ನಿರ್ಮಾಣ ಮಾಡಲಾಗಿತ್ತು.
ನಗರಸಭೆ ಕ್ರಮ ಕೈಗೊಳ್ಳಲಿ
ಕೋಟ್ಹಳೇ ಬಸ್ನಿಲ್ದಾಣದಲ್ಲಿರುವ ಗಡಿಯಾರ ಗೋಪುರದ ಕೆಳಗಡೆ ಇರುವ ಕಸದ ರಾಶಿ ತೆರವುಗೊಳಿಸಲಾಗುವುದು. ಗಡಿಯಾರ ರಿಪೇರಿ ಮಾಡುವ ತಜ್ಞರನ್ನು ಹುಡುಕಲಾಗುತ್ತಿದೆ. ತಜ್ಞರು ಸಿಕ್ಕಿದ ತಕ್ಷಣ ಎರಡೂ ಗೋಪುರಗಳ ಗಡಿಯಾರಗಳನ್ನು ರಿಪೇರಿ ಮಾಡಿಸಲಾಗುವುದು.-ಲಕ್ಷ್ಮೀದೇವಮ್ಮ, ನಗರಸಭಾ ಅಧ್ಯಕ್ಷೆ.