ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಬಿಎಸ್ಸಿ ಕೋರ್ಸ್‌ ಶುರು: ಡಾ. ಕೆ.ವಿ. ಪ್ರಜ್ಞಾ

KannadaprabhaNewsNetwork | Published : Apr 27, 2025 1:53 AM

ಬಳ್ಳಾರಿ ನಗರದ ರೇಡಿಯೋ ಪಾರ್ಕ್‌ನ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ವರ್ಷದಿಂದ ಬಿಎಸ್‌ಸಿ ಕೋರ್ಸ್‌ ಆರಂಭಿಸಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ವಿ. ಪ್ರಜ್ಞಾ ಮನವಿ ಮಾಡಿದರು.

ಬಳ್ಳಾರಿ: ನುರಿತ ಬೋಧಕ ಸಿಬ್ಬಂದಿ ಹೊಂದಿರುವ ನಗರದ ರೇಡಿಯೋ ಪಾರ್ಕ್‌ನ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು, ಪದವಿ ವಿದ್ಯಾರ್ಥಿನಿಯರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ವಿ. ಪ್ರಜ್ಞಾ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದಡಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸದ್ಯ ಬಿಎ, ಬಿಕಾಂ ಕೋರ್ಸ್‌ಗಳಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಹೊಸದಾಗಿ ಬಿಎಸ್‌ಸಿ ಕೋರ್ಸ್ ಆರಂಭಿಸುತ್ತಿದ್ದೇವೆ. ಬಿಎ ವಿಭಾಗದಲ್ಲಿ ಎಚ್‌ಇಪಿ, ಎಚ್‌ಪಿಎಸ್, ಎಚ್‌ಇಕೆ, ಎಚ್‌ಪಿಇ, ಎಸ್‌ಎಸ್‌ಕೆ, ಎಚ್‌ಎಸ್‌ಜೆ ವಿಷಯಗಳ ಆಯ್ಕೆ ಇರುತ್ತವೆ. ಜನರಲ್ ಬಿಕಾಂ ಇದ್ದು, ಬಿಎಸ್‌ಸಿಯಲ್ಲಿ ಪಿಸಿಎಂ ಹಾಗೂ ಪಿಎಂಸಿಎಸ್‌ ವಿಷಯ ಆಯ್ಕೆಗಳಿವೆ ಎಂದರು. ವರ್ಷದಿಂದ ವರ್ಷಕ್ಕೆ ಕಾಲೇಜು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಫಲಿತಾಂಶದಲ್ಲಿ ಗಮನಾರ್ಹ ಏರಿಕೆ ಕಂಡಿದೆ ಎಂದು ವಿವರಿಸಿದರು.

ಕಳೆದ 2014ರಲ್ಲಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಆರಂಭಗೊಂಡಿದ್ದು, ಮೊದಲಿಗೆ 38 ವಿದ್ಯಾರ್ಥಿಗಳು ದಾಖಲಾಗಿದ್ದರು. ಈಗ ಬಿಎ ಮತ್ತು ಬಿಕಾಂ ವಿಭಾಗದಲ್ಲಿ 351 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ನಗರ ಹಾಗೂ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ವಿದ್ಯಾಭ್ಯಾಸಕ್ಕೆಂದು ಬರುತ್ತಿದ್ದಾರೆ. ಕಾಲೇಜಿನ ಕಟ್ಟಡ ಹಳೆಯದು ಎಂಬುದು ಹೊರತುಪಡಿಸಿದರೆ ಉಳಿದ ಸೌಕರ್ಯಗಳಿಗೆ ಯಾವುದೇ ಬರವಿಲ್ಲದಂತೆ ನೋಡಿಕೊಳ್ಳಲಾಗುತ್ತಿದೆ. ಕಾಲೇಜಿಗೆ ಒಟ್ಟು 8 ಉಪನ್ಯಾಸಕರ ಹುದ್ದೆಗಳು ಮಂಜೂರಾಗಿದ್ದು, ಸದ್ಯ 5 ಕಾಯಂ ಉಪನ್ಯಾಸಕರು ಹಾಗೂ 16 ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಕಾಲೇಜಿನಲ್ಲಿ ಶುದ್ಧ ಕುಡಿಯುವ ನೀರು, ಸ್ಮಾರ್ಟ್ ತರಗತಿಗಳು, ಎನ್‌ಎಸ್ಎಸ್‌ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆ, ಹಾಸ್ಟೆಲ್ ಸೌಲಭ್ಯ, ಪರೀಕ್ಷಾಧಾರಿತ ಅಧ್ಯಯನ ಸಾಮಗ್ರಿಗಳು, ವಿದ್ಯಾರ್ಥಿನಿಯರ ಆಪ್ತ ಸಮಾಲೋಚನಾ ಘಟಕ, ಆಂತರಿಕ ದೂರು ಸಮಿತಿ, ಗ್ರಂಥಾಲಯ ಸೌಲಭ್ಯ, ಕಂಪ್ಯೂಟರ್ ಲ್ಯಾಬ್, ಮಹಿಳಾ ಸಬಲೀಕರಣ ಘಟಕ ಸೇರಿದಂತೆ ವಿವಿಧ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗಿದೆ ಎಂದು ತಿಳಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣ ಬಳಿ ಕಾಲೇಜು ಕಟ್ಟಡ ನಿರ್ಮಾಣಕ್ಕೆಂದು 2.88 ಎಕರೆ ಜಾಗ ಮೀಸರಿಸಲಾಗಿದೆ. ಮುಂದಿನ ದಿನಗಳಲ್ಲಿ ನಿರ್ದಿಷ್ಟ ಜಾಗದಲ್ಲಿ ಸುಸಜ್ಜಿತ ಕಾಲೇಜು ಕಟ್ಟಡ ನಿರ್ಮಾಣವಾಗಲಿದೆ ಎಂದು ಹೇಳಿದರು.