ಮಹರ್ಷಿ ಜಯಂತಿ ಕಾರ್ಯಕ್ರಮದ ನಿಮಿತ್ತ ನಡೆದ ಮಹರ್ಷಿಗಳ ಭಾವಚಿತ್ರ ಮೆರವಣಿಗೆ
ವಾಲ್ಮೀಕಿ ಮಹರ್ಷಿ ರಚಿಸಿದ ರಾಮಾಯಣ ಗ್ರಂಥದಲ್ಲಿ ನ್ಯಾಯ, ನೀತಿ, ಧರ್ಮದಿಂದ ಬದುಕು ಸಾಗಿಸುವ ಮಾರ್ಗ ಅಡಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಜೀವನದಲ್ಲಿ ಮಾನವೀಯ ಮೌಲ್ಯ ಅಳವಡಿಸಿಕೊಂಡು ಉತ್ತಮವಾದ ಬದುಕು ರೂಪಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.
ತಾಲೂಕಿನ ಹಿರೇಮನ್ನಾಪುರ ಗ್ರಾಮದಲ್ಲಿ ವಾಲ್ಮೀಕಿ ಸಮಾಜದ ವತಿಯಿಂದ ನಡೆದ ವಾಲ್ಮೀಕಿ ಮಹರ್ಷಿ ಜಯಂತಿ ಕಾರ್ಯಕ್ರಮದ ನಿಮಿತ್ತ ನಡೆದ ಮಹರ್ಷಿಗಳ ಭಾವಚಿತ್ರ ಮೆರವಣಿಗೆಯಲ್ಲಿ ಅವರು ಮಾತನಾಡಿದರು. ಮಹಾನ್ ತಪಸ್ವಿ ಮಹರ್ಷಿ ವಾಲ್ಮೀಕಿ ರಾಮಾಯಣ ಮಹಾಗ್ರಂಥ ರಚಿಸಿ ಲೋಕ ಕಲ್ಯಾಣಕ್ಕಾಗಿ ಅರ್ಪಿಸಿದ್ದು ಈ ಮಹಾನ್ ಗ್ರಂಥವನ್ನು ಅರ್ಥೈಸಿಕೊಳ್ಳುವ ಕಾರ್ಯವಾಗಬೇಕಿದೆ ಎಂದರು.ರಾಮಾಯಣ ಗ್ರಂಥವೂ ನೀತಿಯ ಪಾಠ ಅಳವಡಿಸಿಕೊಂಡು ಬದುಕು ರೂಪಿಸಲು ಸಹಕಾರಿಯಾಗಿದೆ. ಬಡತನ ಸಾಧನೆಗೆ ಅಡ್ಡಿಯಾಗಲಾರದು. ಸಮಾಜದಲ್ಲಿ ಅನೇಕರು ಬಡತನದಲ್ಲಿ ಜನಿಸಿ ಮಹಾನ್ ಸಾಧಕರಾದ ಉದಾಹರಣೆಗಳಿವೆ. ಉನ್ನತ ಮಟ್ಟದಲ್ಲಿ ಆಲೋಚಿಸಿ ಸಾಧನೆ ಮಾಡಲು ಮುಂದಾಗಬೇಕು. ವಾಲ್ಮೀಕಿ ಸಮಾಜ ಬಾಂಧವರು ಉನ್ನತ ಹುದ್ದೆ ಅಲಂಕರಿಸಿ ಸಮಾಜಕ್ಕೆ ತಮ್ಮದೆ ಕೊಡುಗೆ ನೀಡಬೇಕು ಎಂದರು.
ಈ ಸಂದರ್ಭ ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಮಾನಪ್ಪ ತಳವಾರ, ಗ್ರಾಮದ ಮುಖಂಡರಾದ ದೊಡ್ಡಯ್ಯ ಗದ್ದಡಕಿ, ದೇವಪ್ಪ ಗಂಗನಾಳ, ಭೀಮಣ್ಣ ತಲೇಖಾನ, ದೇವಣ್ಣ ಸುಭೆದಾರ, ಪುಂಡಲೀಕಪ್ಪ ಬುಡಕುಂಟಿ, ಇಮಾಮಸಾಬ ಗರಡಿಮನಿ, ಪರಸಪ್ಪ ಅಳ್ಳೊಳ್ಳಿ, ಮಂಜುನಾಥ ಕಜ್ಜಿ, ಹನುಮೇಶ ಲೈನದ, ಶಿವಾನಂದ ಹಿರೇಮಠ, ಸಂಗಪ್ಪ ಡೊಳ್ಳಿನ, ನಾಗರಾಜ ಹಜಾಳದ, ಸಂಗಪ್ಪ ಬಿಜಕಲ್, ಹನಮಂತ ಗುಡದೂರ, ಹನಮಂತ ಅಳ್ಳೊಳ್ಳಿ, ನಿಂಗರಾಜ ಸಾಹುಕಾರ, ಪೂರ್ವಿಕಾ ಕನ್ನಾಳ, ಅನಿತಾ ತಲೆಖಾನ, ಚೈತ್ರಾ ಹುಣಸಗೇರಿ, ಭಾಗ್ಯ ಹಾದಿಮನಿ, ಪ್ರತಿಭಾ ಲೈನದ ಸೇರಿದಂತೆ ಅನೇಕರು ಇದ್ದರು.