ಕನ್ನಡಪ್ರಭ ವಾರ್ತೆ ಹೊಸಪೇಟೆ
ನಗರಸಭೆ ಅಧ್ಯಕ್ಷೆ ಲತಾ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಸದಸ್ಯ ಹುಲುಗಪ್ಪ ಮಾತನಾಡಿ, ನಗರದಲ್ಲಿ ಬಡವರು ಹೆಚ್ಚಿದ್ದಾರೆ. ಹಾಗಾಗಿ ಬಡವರ ಅನುಕೂಲಕ್ಕಾಗಿ ಆಶ್ರಯ ಮನೆಗಳನ್ನು ನಿರ್ಮಿಸಿಕೊಡಬೇಕು. ಇದರಿಂದ ಬಡವರಿಗೆ ಅನುಕೂಲವಾಗಲಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದವರಿಗೆ ಆಶ್ರಯ ಮನೆಗಳನ್ನು ನಿರ್ಮಿಸಿಕೊಟ್ಟರೆ ಅವರು ಈ ದುಬಾರಿ ಜಮಾನಾದಲ್ಲಿ ಬದುಕು ಕಟ್ಟಿಕೊಳ್ಳುತ್ತಾರೆ ಎಂದರು.
ಈ ವೇಳೆ ಪೌರಾಯುಕ್ತ ಬುಡ್ಡಪ್ಪ ಬಂಡಿವಡ್ಡರ್ ಪ್ರತಿಕ್ರಿಯಿಸಿ, ರಾಜೀವ್ ಗಾಂಧಿ ವಸತಿ ನಿಗಮದಿಂದ 600 ಮನೆಗಳು ನಗರಸಭೆಗೆ ಮಂಜೂರಾಗಿದ್ದು, ಈಗ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 145 ಮನೆಗಳು ಮಂಜೂರಾಗಿವೆ. ಈಗಾಗಲೇ 76 ಅರ್ಜಿಗಳು ಬಂದಿವೆ. ಉಳಿದ ಅರ್ಜಿಗಳನ್ನು ಕ್ರೋಡೀಕರಿಸಿ ಆಶ್ರಯ ಸಮಿತಿ ಅಧ್ಯಕ್ಷರಾದ ಶಾಸಕ ಎಚ್.ಆರ್. ಗವಿಯಪ್ಪ ಅವರಿಂದ ಮಂಜೂರಾತಿ ಪಡೆದು ಸರ್ಕಾರಿ ಜಾಗ ಗುರುತಿಸಿ ಆಶ್ರಯ ಮನೆಗಳನ್ನು ನಿರ್ಮಿಸಲಾಗುವುದು ಎಂದು ಉತ್ತರಿಸಿದರು.ಸದಸ್ಯರ ತರಾಟೆ:
ನಗರಸಭೆಯ ಸಿಬ್ಬಂದಿ ಈರಣ್ಣ ಮಾತನಾಡಿ, ನಾವು ಈಗಾಗಲೇ ಪರಿಶಿಷ್ಟ ಜಾತಿ, ಪ.ಪಂಗಡದ ಫಲಾನುಭವಿಗಳಿಗೆ ಮಂಜೂರಾಗಿರುವ 145 ಮನೆಗಳಿಗೆ ಅರ್ಜಿ ಸ್ವೀಕಾರ ಆರಂಭಿಸಿದ್ದೇವೆ. ಈಗ ಎಸ್ಸಿ, ಎಸ್ಟಿ ಮನೆಗಳಿಗೆ ಮಂಜೂರಾತಿ ದೊರೆತಿದ್ದು, ಉಳಿದ ಮನೆಗಳ ನಿರ್ಮಾಣಕ್ಕೂ ಆದೇಶ ಬರುವ ನಿರೀಕ್ಷೆ ಇದೆ. ನಗರಸಭೆ ಸದಸ್ಯರು ಕೆಲ ಅರ್ಜಿಗಳನ್ನು ನೀಡಿದ್ದಾರೆ. ಉಳಿದಂತೆ ಸಾರ್ವಜನಿಕರೇ ಖುದ್ದಾಗಿ ಬಂದು ಅರ್ಜಿ ನೀಡಿದ್ದಾರೆ ಎಂದು ಉತ್ತರಿಸಿದರು.
ಶಾಸಕರು ನಗರಸಭೆಗೆ ಬರಲಿ:
ಸದಸ್ಯ ಅಬ್ದುಲ್ ಖದೀರ್ ಮಾತನಾಡಿ, ನಗರಸಭೆಯಲ್ಲಿ ನಡೆಯುವ ಕಾಮಗಾರಿಗಳಿಗೆ ಮಂಜೂರಾತಿ ನೀಡುವ ಮುನ್ನ ನಿಯಮಾನುಸಾರ ಕ್ರಮವಹಿಸಬೇಕು. ನಗರಸಭೆ ಎಇಇ ಸತೀಶ್ ಸರಿಯಾಗಿ ಪರಿಶೀಲಿಸಿ ಜಿಲ್ಲಾಧಿಕಾರಿಯವರ ಅನುಮೋದನೆಗೆ ಕಳುಹಿಸಬೇಕು. ಈಗ ಜಿಲ್ಲಾಧಿಕಾರಿಯವರು ಕೆಲ ಕಾಮಗಾರಿಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ವಾಪಸ್ ಕಳುಹಿಸಿದ್ದಾರೆ ಎಂದು ಸದಸ್ಯರು ಪೌರಾಯುಕ್ತರಿಗೆ ದೂರಿದರು.
ಸ್ಮಶಾನ ಜಾಗ ಸ್ಥಳಾಂತರಕ್ಕಾಗಿ ಸದಸ್ಯರ ನಡುವೆ ಜಟಾಪಟಿ
ಈ ವೇಳೆ ಸದಸ್ಯ ರಮೇಶ್ ಗುಪ್ತಾ ಮಾತನಾಡಿ, ಇದು 1910ರಿಂದ ಇರುವ ಸ್ಮಶಾನವಾಗಿದೆ. ಇದರಿಂದ ಜನರಿಗೆ ತೊಂದರೆಯಾಗುತ್ತಿಲ್ಲ. ಇದರಲ್ಲಿ ರಾಜಕೀಯ ಬೆರೆತಿದೆ. ಆರ್ಯ ಸಮಾಜದವರ ಆಸ್ತಿಯಾಗಿದೆ. ಇದಕ್ಕೆ ದಾಖಲೆಗಳಿವೆ. ಸ್ಥಳಾಂತರ ಮಾಡಿದರೆ ನಮಗೆ ಐದು ಎಕರೆ ಜಾಗ ಸೂಕ್ತ ಸ್ಥಳದಲ್ಲಿ ನೀಡಲಿ ಎಂದರು.
ಸದಸ್ಯ ರಮೇಶ್ ಗುಪ್ತಾ ಮಾತನಾಡಿ, ನಮ್ಮ ಸಮಾಜ ಯಾರಿಗೂ ಅನ್ಯಾಯ ಮಾಡಿಲ್ಲ. ಸ್ಮಶಾನ ನಮ್ಮ ಸಮಾಜದ ಆಸ್ತಿ ಎನ್ನುತ್ತಲೇ, ಸದಸ್ಯ ಗುಜ್ಜಲ ರಾಘವೇಂದ್ರ ಪ್ರತಿಕ್ರಿಯಿಸಿ, ನಮ್ಮ ಸಮಾಜ ಯಾರಿಗೆ ತೊಂದರೆ ಮಾಡಿದೆ. ಇಲ್ಲಿ ಆ ಸಮಾಜ, ಈ ಸಮಾಜ ಬರುವುದಿಲ್ಲ. ಜನರಿಗೆ ತೊಂದರೆಯಾಗುತ್ತಿರುವುದನ್ನು ಚರ್ಚಿಸಿದ್ದೇವೆ ಎಂದರು. ಈ ವೇಳೆ ಸದಸ್ಯರ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಚರ್ಚೆ ತಲುಪಿತ್ತು. ಆಗ ಉಳಿದ ಸದಸ್ಯರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಈ ವೇಳೆ ಸದಸ್ಯೆ ರೋಹಿಣಿ ವೆಂಕಟೇಶ್ ಮಾತನಾಡಿ, ನಗರಸಭೆಯ ಸಾಮಾನ್ಯ ಸಭೆಯೋ ಫಿಶ್ ಮಾರ್ಕೆಟ್ ನಾ? ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರು ಸಭೆ ತಿಳಿಗೊಳಿಸಬೇಕು. ಒಬ್ಬರು ಸದಸ್ಯರು ಮಾತನಾಡುವಾಗ, ಇನ್ನೋರ್ವ ಸದಸ್ಯರು ಮಾತನಾಡಬಾರದು. ಎಲ್ಲರೂ ಮಾತನಾಡಿದರೇ ಈ ರೀತಿ ಗೊಂದಲ ಏರ್ಪಡುತ್ತದೆ ಎಂದು ಖಾರವಾಗಿಯೇ ಹೇಳಿದರು.ಪೌರಾಯುಕ್ತರು, ಸ್ಮಶಾಸನ ಪರಿಶೀಲನೆ ಮಾಡಿ ಸೂಕ್ತ ಕ್ರಮ ವಹಿಸುವವರೆಗೆ ಈ ವಿಷಯದ ಬಗ್ಗೆ ಯಾರೂ ಚರ್ಚಿಸಬೇಡಿ. ನಗರಸಭೆಯಿಂದ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.