ವೇಮನರ ತತ್ವ ಸಿದ್ಧಾಂತಗಳಿಂದ ಜಾಗೃತ ಸಮಾಜ ನಿರ್ಮಾಣ

KannadaprabhaNewsNetwork |  
Published : Jan 20, 2025, 01:32 AM IST
ಕಾರ್ಯಕ್ರಮವನ್ನು ಉದ್ದೇಶಿಸಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಮಾತನಾಡಿದರು.  | Kannada Prabha

ಸಾರಾಂಶ

ವೇಮನರ ಜಯಂತಿಯನ್ನು ಕರ್ನಾಟಕ ತುಂಬೆಲ್ಲ ಆಚರಣೆ ಮಾಡಬೇಕು ಎಂದು ವಿಶೇಷ ಪ್ರೇರಣೆ ನೀಡಿದವರಲ್ಲಿ ಗದಗ ಜಿಲ್ಲೆಯವರ ಪಾತ್ರ ಅಪಾರ

ಗದಗ: ಮಹಾಯೋಗಿ ವೇಮನ ಮತ್ತು ಶಿವಶರಣೆ ಹೇಮರಡ್ಡಿ ಮಲ್ಲಮ್ಮ ತತ್ವ ಸಿದ್ಧಾಂತ ಜೀವನದಲ್ಲಿ ಅಳವಡಿಸಿಕೊಂಡು ಜಾಗೃತ ಸಮಾಜ ನಿರ್ಮಾಣವಾಗಬೇಕು ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.

ಅವರು ಭಾನುವಾರ ಸಂಜೆ ಗದಗ ನಗರದ ಶಿವಾನಂದ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಗದಗ ಜಿಲ್ಲಾ ರೆಡ್ಡಿ ಸಮಾಜ ಸಂಘಗಳ ಸಹಯೋಗದಲ್ಲಿ ಜರುಗಿದ ಮಹಾಯೋಗಿ ವೇಮನರ 613 ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು.

ವೇಮನರ ಜಯಂತಿಯನ್ನು ಕರ್ನಾಟಕ ತುಂಬೆಲ್ಲ ಆಚರಣೆ ಮಾಡಬೇಕು ಎಂದು ವಿಶೇಷ ಪ್ರೇರಣೆ ನೀಡಿದವರಲ್ಲಿ ಗದಗ ಜಿಲ್ಲೆಯವರ ಪಾತ್ರ ಅಪಾರವಿದೆ, ವೇಮನ ಸಾಹಿತ್ಯ ಹಾಗು ಅವರ ಇತಿಹಾಸ ದಕ್ಷಿಣ ಕರ್ನಾಟಕದ ಭಾಗದವರಿಗೆ ಪರಿಚಯವೇ ಇಲ್ಲದಂತ ಸಂದರ್ಭದಲ್ಲಿ ಸಹಕಾರಿ ಭೀಷ್ಮ ಕೆ.ಎಚ್. ಪಾಟೀಲ ಹಾಗು ಹಲವಾರು ಅನೇಕ ಹಿರಿಯರು ಇತಿಹಾಸ ಹೆಕ್ಕಿ ತೆಗೆದು ವೇಮನ ಇತಿಹಾಸ ಸಾಹಿತ್ಯ ಪರಿಚಯಿಸಿ ಜ.19 ನ್ನು ವೇಮನ ಜಯಂತಿ ಆಚರಣೆ ಮಾಡಿ ಕರ್ನಾಟಕ ತುಂಬಾ ಅವರ ಸಿದ್ಧಾಂತ ತಲುಪಿಸಬೇಕು ಎಂದು ನಿರ್ಣಯ ಮಾಡಿದ್ದರು.

ರೆಡ್ಡಿ ಸಮಾಜದವರು ಎಲ್ಲ ಪಕ್ಷಗಳಲ್ಲಿದ್ದು, ಜಾತಿ ಆಧಾರದ ಮೇಲೆ ರಾಜಕೀಯ ಮಾಡದೇ ಯೋಗ್ಯತೆ ಸೇವೆ ಸಾಮರ್ಥ್ಯ ತಕ್ಕಂತೆ ಗೌರವ ಪಡೆದು ಎಲ್ಲ ಸಮಾಜದವರನ್ನು ಅಪ್ಪುಕೊಳ್ಳುವ ಮನಸ್ಥಿತಿ ಹೊಂದಿ, ಶೋಷಣೆ ವಿರುದ್ಧ ನ್ಯಾಯಕ್ಕಾಗಿ ಹೋರಾಟ ಮಾಡುವ ಮನಸ್ಸನ್ನು ಹೊಂದಿದವರಾಗಿದ್ದಾರೆ.ವೇಮನರು ಕೃಷಿಕರ ಮತ್ತು ಗೇಣುದಾರರ ಪರವಾಗಿ ಹೋರಾಟ ಮಾಡಿದ್ದಾರೆ ಎಂದರು.

ವಿಪ ಶಾಸಕ ಎಸ್.ವಿ. ಸಂಕನೂರ ಮಾತನಾಡಿ, ಸಮಾಜ ಮನುಕುಲದ ಉದ್ಧಾರಕ್ಕಾಗಿ ಜೀವನ ತ್ಯಾಗ ಮಾಡಿದ್ದಕ್ಕಾಗಿ ಮಹಾಯೋಗಿ ವೇಮನರ ಜಯಂತಿ ಆಚರಣೆ ಮಾಡಲಾಗುತ್ತಿದೆ. ವೇಮನರು 15ನೇ ಶತಮಾನದಲ್ಲಿ ಕವಿತೆ ರಚಿಸಿದರು. ಅವುಗಳಲ್ಲಿ ಅಪಾರ ಪ್ರಮಾಣದಲ್ಲಿ ನಶಿಸಿ ಹೋಗಿವೆ. ಒಬ್ಬ ಬ್ರಿಟೀಷ್ ಅಧಿಕಾರಿ ತಾಳೆಗರಿಯಲ್ಲಿ ಬರೆದ ಕವಿತೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದರು ಎಂದರು.

ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ ಸತ್ಕರಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ರೋಣ ಶಾಸಕ ಜಿ.ಎಸ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್‌ ಬಬರ್ಚಿ, ಮಾಜಿ ಸಚಿವ ಬಿ.ಆರ್. ಯಾವಗಲ್ಲ, ಕೆ.ವಿ. ಹಂಚಿನಾಳ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಎಸ್ಪಿ ಬಿ.ಎಸ್. ನೇಮಗೌಡ, ಎಡಿಸಿ ಅನ್ನಪೂರ್ಣ ಎಂ, ಎಸಿ ಗಂಗಪ್ಪ ಮುಂತಾದವರು ಹಾಜರಿದ್ದರು. ಶಿವನಗೌಡರ ಸ್ವಾಗತಿಸಿದರು, ಬಾಹುಬಲಿ ಜೈನ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ