ಬಂಟರ ಕಾಯಕ ನಿಷ್ಠೆ ಇತರರಿಗೆ ಮಾದರಿ: ಅರವಿಂದ ಬೆಲ್ಲದ

KannadaprabhaNewsNetwork |  
Published : Mar 30, 2026, 01:00 AM IST
ಹುಬ್ಬಳ್ಳಿ ಖಾಸಗಿ ಹೊಟೇಲ್‌ ಸಭಾಭವನದಲ್ಲಿ ಭಾನುವಾರ ನಡೆದ ಹು-ಧಾ ಬಂಟರ ಸಂಘದ ಸುವರ್ಣ ಮಹೋತ್ಸವ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಬಂಟರ ಸಮಾಜ ಕಾಯಕದಿಂದಲೇ ಬದುಕು ಕಟ್ಟಿಕೊಂಡವರು. ಜಗಜ್ಯೋತಿ ಬಸವೇಶ್ವರರ ಕಾಯಕವೇ ಕೈಲಾಸ ಎಂಬ ತತ್ವವನ್ನು ಜೀವನದಲ್ಲಿ ಪಾಲಿಸಿಕೊಂಡು ಬಂದವರು. ಇತರ ಸಮಾಜ ಬಾಂಧವರು ಇವರನ್ನು ನೋಡಿ ಕಲಿಯಬೇಕಿದೆ ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

ಹುಬ್ಬಳ್ಳಿ: ಬಂಟರ ಸಮಾಜ ಕಾಯಕದಿಂದಲೇ ಬದುಕು ಕಟ್ಟಿಕೊಂಡವರು. ಜಗಜ್ಯೋತಿ ಬಸವೇಶ್ವರರ ಕಾಯಕವೇ ಕೈಲಾಸ ಎಂಬ ತತ್ವವನ್ನು ಜೀವನದಲ್ಲಿ ಪಾಲಿಸಿಕೊಂಡು ಬಂದವರು. ಇತರ ಸಮಾಜ ಬಾಂಧವರು ಇವರನ್ನು ನೋಡಿ ಕಲಿಯಬೇಕಿದೆ ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

ಇಲ್ಲಿನ ಉಣಕಲ್ಲ ಬಳಿಯ ಖಾಸಗಿ ಹೊಟೇಲ್‌ನಲ್ಲಿ ಭಾನುವಾರ ನಡೆದ ಹು-ಧಾ ಬಂಟರ ಸಂಘದ ಸುವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. 1974ರಲ್ಲಿ ಆರಂಭವಾದ ಹು-ಧಾ ಬಂಟರ ಸಂಘ ಇಂದು ಹೆಮ್ಮರವಾಗಿ ಬೆಳೆದಿದೆ. ಆಡು ಮುಟ್ಟದ ಸೊಪ್ಪಿಲ್ಲ, ಬಂಟರ ಸಮಾಜದವರು ಮಾಡದಿರುವ ಉದ್ಯೋಗವಿಲ್ಲ ಎಂಬಂತಾಗಿದೆ. ಹೋಟೆಲ್‌ ಉದ್ಯಮ, ಎಂಜಿನಿಯರ್‌, ವೈದ್ಯರು ಸೇರಿದಂತೆ ಎಲ್ಲ ಕ್ಷೇತ್ರದಲ್ಲಿಯೂ ಬಂಟರ ಸಮುದಾಯವರು ಮಾದರಿ ಎಂಬಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ವಿವಿಧ ಊರುಗಳಿಂದ ಉದ್ಯೋಗ ಅರಸಿ ಹು-ಧಾ ಅವಳಿ ನಗರಕ್ಕೆ ಆಗಮಿಸಿದ ಬಂಟರ ಸಮುದಾಯದವರು, ತಾವಷ್ಟೇ ಬೆಳೆಯದೇ, ತಮ್ಮವರನ್ನೆಲ್ಲ ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಕಾಯಕದ ಜತೆಗೆ ತಮ್ಮ ಸಂಸ್ಕೃತಿ ಹಾಗೂ ಧಾರ್ಮಿಕ ಆಚರಣೆಗೂ ಬಂಟರ ಸಮಾಜ ಆದ್ಯತೆ ನೀಡುತ್ತಿರುವುದು ಅಭಿನಂದನಾರ್ಹ ಎಂದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಮೂಲತಃ ಕರ್ನಾಟಕದ ಕರಾವಳಿ ಪ್ರದೇಶದವರಾದ ಬಂಟರ ಸಮಾಜದವರು ಇಂದು ದೇಶ-ವಿದೇಶ ಸೇರಿದಂತೆ ಎಲ್ಲೆಡೆ ತಮ್ಮ ಉದ್ಯಮದ ಛಾಪನ್ನು ಮೂಡಿಸಿದ್ದಾರೆ. ಶ್ರೀಕೃಷ್ಣ ದೇವರಾಯನ ಆಡಳಿತದ ಕಾಲದಲ್ಲಿಯೂ ಈ ಬಂಟರ ಸಮಾಜ ಭೂ ಒಡೆಯರು, ಕೃಷಿಕರು ಹಾಗೂ ರಕ್ಷಕರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ ಎಂದು ಶ್ಲಾಘಿಸಿದರು.

ಹು-ಧಾ ಬಂಟರ ಸಂಘದವರು ಎಲ್ಲರೂ ಒಟ್ಟಾಗಿ ಸುವರ್ಣ ಮಹೋತ್ಸವ ಸಮಾರಂಭವನ್ನು ಆಯೋಜಿಸಿದ್ದು ಹೆಮ್ಮೆಯ ಸಂಗತಿ. ಸಮಾಜದ ಏಳ್ಗೆಗೆ ಏಕತೆ ಅತಿ ಅವಶ್ಯಕ ಎಂಬುದು ಬಂಟರ ಸಮಾಜದ ಗುಟ್ಟಾಗಿದೆ. ಬಂಟರ ಸಮಾಜದಲ್ಲಿ ಪುರುಷರಷ್ಟೇ ಸರಿಸಮಾನವಾಗಿ ಮಹಿಳೆಯರಿಗೂ ಸ್ವಾತಂತ್ರ್ಯ ನೀಡಿದ ಮಾದರಿ ಸಮಾಜವಾಗಿದೆ ಎಂದರು.

ವಿಪ ಸದಸ್ಯ ಪ್ರದೀಪ ಶೆಟ್ಟರ್‌ ಮಾತನಾಡಿದರು. ಕಾರ್ಯಕ್ರಮವನ್ನು ಎಂ.ಆರ್‌.ಜಿ. ಚೇರ್‌ಮನ್‌ ಡಾ. ಕೆ. ಪ್ರಕಾಶ ಶೆಟ್ಟಿ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಹು-ಧಾ ಬಂಟರ ಸಂಘದ ಅಧ್ಯಕ್ಷ ವಿಜಯಾನಂದ ಶೆಟ್ಟಿ ಹಾಗೂ ಸಂಘದ ಸದಸ್ಯ ಸುಭಾಸಚಂದ್ರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಈ ವೇಳೆ ಕೀರ್ತಿಶೇಷ ಕಟ್ಕೆರೆ ಶಂಕರ ಶೆಟ್ಟಿ ಸ್ಮರಣಾರ್ಥ ವಿವಿಧ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ 164 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಮಾಡಲಾಯಿತು. ಆನಂತರ ಸಂಘದ ಸ್ಥಾಪಕ ಸದಸ್ಯರು, ಸಮಾಜದ ಗಣ್ಯರು ಹಾಗೂ ಹಿರಿಯರನ್ನು ಸನ್ಮಾನಿಸಲಾಯಿತು.

ಉದ್ಯಮಿ ಪ್ರಸನ್ನ ಶಂಕರ ಶೆಟ್ಟಿ, ಹು-ಧಾ ಬಂಟರ ಸಂಘದ ಉಪಾಧ್ಯಕ್ಷ ಕೆ. ಸುರೇಶ ಶೆಟ್ಟಿ, ರಾಜೇಂದ್ರ ವಿ. ಶೆಟ್ಟಿ, ಪ್ರದೀಪ ಟಿ. ಪಕ್ಕಳ, ಹರ್ಷಕುಮಾರ ಶೆಟ್ಟಿ, ರತ್ನಾಕರ ಎಂ. ಶೆಟ್ಟಿ, ಉಪೇಂದ್ರ ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ, ಮಹೇಶ ಶೆಟ್ಟಿ ಸೇರಿದಂತೆ ಅನೇಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಏಣಗಿ ಬಾಳಪ್ಪ, ಸಕ್ಕರಿ ಬಾಳಾಚಾರ್ಯ ರಂಗ ಸೇವೆ ಸ್ಮರಣೀಯ: ಡಾ.ವೀರಣ್ಣ ರಾಜೂರ
ಕಲೆಯಿಂದ ಮನುಷ್ಯನಲ್ಲಿ ಉತ್ಸಾಹ ಹೆಚ್ಚಳ