ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ತಮಿಳುನಾಡು ನೋಂದಣಿ ಹೊಂದಿದ ಖಾಸಗಿ ಬಸ್ಸೊಂದು ಚಿಕ್ಕಮಗಳೂರು ನಗರಕ್ಕೆ ಆಗಮಿಸಿತ್ತು. ಈ ಬಸ್ಸಿನ ಮೇಲೆ ಮುಂಬೈ ಸರಣಿ ಸ್ಫೋಟದ ಸಂಚುಕೋರ, ಭೂಗತ ಲೋಕದ ಕುಖ್ಯಾತ ಅಪರಾಧಿ ದಾವೂದ್ ಇಬ್ರಾಹಿಂನ ಫೋಟೋ ಹಾಗೂ ಆತನನ್ನು ಹೊಗಳುವಂತಹ ಬರಹ ಇದ್ದವು. ಇದನ್ನು ಗಮನಿಸಿದ ಸ್ಥಳೀಯ ಹಿಂದೂ ಸಂಘಟನೆ ಕಾರ್ಯಕರ್ತರು ನಗರದ ಎನ್.ಎಂ.ಸಿ ಸರ್ಕಲ್ ಬಳಿ ಬಸ್ಸನ್ನು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಬಸ್ಸಿನ ಸುತ್ತಲೂ ಕಾನೂನು ಬಾಹಿರ ಚಟುವಟಿಕೆ ಪ್ರೇರೇಪಿಸುವಂತಹ ಮತ್ತು ಅಪರಾಧ ಲೋಕವನ್ನು ವೈಭವೀಕರಿಸು ವಂತಹ ಸ್ಟಿಕ್ಕರ್ಗಳನ್ನು ಅಂಟಿಸಲಾಗಿತ್ತು. ‘ಲೈವ್ ಬೈ ಎ ಗನ್, ಡೈ ಬೈ ಎ ಗನ್” ಎಂಬ ಪ್ರಚೋದನಾಕಾರಿ ಬರಹ ಪ್ರದರ್ಶಿಸಲಾಗಿದೆ.ಬಸ್ಸಿನ ಮೇಲೆ ‘ಕ್ರೈಮ್ ಲಾರ್ಡ್ ಕ್ರಾನಿಕಲ್ಸ್’ ಮತ್ತು ‘ದಾವೂದ್ ದಿ ರಿಯಲ್ ಡಾನ್, ‘ಡಿ ಗ್ಯಾಂಗ್ ಆಫ್ ಮುಂಬೈ’ ಎಂದು ಬರೆಸಲಾಗಿತ್ತು. ಅಲ್ಲದೆ, ದಾವೂದ್ ಇಬ್ರಾಹಿಂನ ಫೋಟೋಗಳನ್ನು ಹಾಕಿ ಆತನನ್ನು ಒಬ್ಬ ಹೀರೋನಂತೆ ಬರೆಯಲಾಗಿತ್ತು .
ಪ್ರಸ್ತುತ ಬಸ್ಸನ್ನು ನಗರದ ಬಸವನಹಳ್ಳಿ ಪೊಲೀಸ್ ಠಾಣೆ ಆವರಣಕ್ಕೆ ಕೊಂಡೊಯ್ಯಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳ ಲಾಗಿದೆ. ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾದ ವ್ಯಕ್ತಿಯನ್ನು ವೈಭವೀಕರಿಸುವುದರ ಹಿಂದಿನ ಉದ್ದೇಶವೇನು ಎಂಬ ಬಗ್ಗೆ ಪೊಲೀಸರು ಚಾಲಕ ಮತ್ತು ಮಾಲೀಕರಿಂದ ಮಾಹಿತಿ ಪಡೆಯುತ್ತಿದ್ದಾರೆ.