ಕನ್ನಡಪ್ರಭ ವಾರ್ತೆ ರಾಯಚೂರು
ಪ್ರಸಕ್ತ ನಗರ ಸ್ಥಳೀಯ ಸಂಸ್ಥೆಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ರಾಯಚೂರು ನಗರಸಭೆ, ಸಿಂಧನೂರು ನಗರಸಭೆ, ಹಾಗೂ ದೇವದುರ್ಗ ಪುರಸಭೆ ಉಪಚುನಾವಣೆಯ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಜರುಗಿದ್ದು, ರಾಯಚೂರು ಶೇ.56.87, ಸಿಂಧನೂರು ಶೇ.67.48ರಷ್ಟು, ದೇವದುರ್ಗ ಶೇ.74.81 ರಷ್ಟು ಮತದಾನವಾಗಿದೆ.ರಾಯಚೂರು ನಗರದ ವಾರ್ಡ್ ನಂ.12 ರ ವ್ಯಾಪ್ತಿಯಲ್ಲಿ ಸ್ಥಾಪಿಸಿದ ಮತಗಟ್ಟೆಗೆ ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್ ದುರುಗೇಶ ಅವರು ಭೇಟಿ ನೀಡಿ, ಮತದಾನ ಪ್ರಕ್ರಿಯೆಯನ್ನು ಪರಿಶೀಲಿಸಿದರು. ಯಾವುದೇ ಅಹಿತಕರ ಘಟನೆಗಳು ಮತ್ತು ಯಾವುದೇ ಲೋಪದೋಷಗಳಾಗದಂತೆ ಮತದಾನ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮತ್ತು ಅಚ್ಚುಕಟ್ಟಾಗಿ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ರಾಯಚೂರು ನಗರಸಭೆ ವ್ಯಾಪ್ತಿಯ ವಾರ್ಡ್ ನಂ.12ರಲ್ಲಿ ಒಟ್ಟು 5 ಮತಗಟ್ಟೆಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಒಟ್ಟು 5528 ಮತದಾರರಿದ್ದು, ಇದರಲ್ಲಿ ಪುರುಷ ಮತದಾರರು 1633 ಹಾಗೂ ಮಹಿಳಾ ಮತದಾರರು 1511 ಸೇರಿ ಒಟ್ಟು 3144 ಮತದಾರರು ಮತದಾನ ಮಾಡಿದರು. ಶೇ.56.87ರಷ್ಟು ಮತದಾನವಾಗಿದೆ.ಸಿಂಧನೂರು ನಗರಸಭೆ ವ್ಯಾಪ್ತಿಯ ವಾರ್ಡ್ ನಂ.22ರ 22 ಹಾಗೂ 22(ಎ) ಒಟ್ಟು 2 ಮತಗಟ್ಟೆಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಒಟ್ಟು 1704 ಮತದಾರರಿದ್ದು, ಇದರಲ್ಲಿ 576 ಪುರುಷ ಮತದಾರರು ಹಾಗೂ 574 ಮಹಿಳಾ ಮತದಾರರು ಸೇರಿ ಒಟ್ಟು 1150 ಮತದಾರರು ಮತದಾನ ಮಾಡಿದರು. ಶೇ.67.48ರಷ್ಟು ಮತದಾನವಾಗಿದೆ.
ದೇವದುರ್ಗ ಪುರಸಭೆ ವ್ಯಾಪ್ತಿಯ ವಾರ್ಡ್ ನಂ.5 ರ ಉಪಚುನಾವಣೆಯಲ್ಲಿ ಒಟ್ಟು 1048 ಮತದಾರರಿದ್ದು, ಇದರಲ್ಲಿ 398 ಪುರುಷ ಮತದಾರರು ಹಾಗೂ 386 ಮಹಿಳಾ ಮತದಾರರು ಸೇರಿ ಒಟ್ಟು 784 ಮತದಾರರು ಮತದಾನ ಮಾಡಿದರು ಶೇ. 74.81ರಷ್ಟು ಮತದಾನವಾಗಿದೆ.ರಾಯಚೂರು ನಗರಸಭೆ ವ್ಯಾಪ್ತಿಯ ವಾರ್ಡ್ ನಂ.12ರಲ್ಲಿ 3 ಮಂದಿ ನಡುವೆ ಪೈಪೋಟಿ: ಸ್ಥಳೀಯ ನಗರಸಭೆ ವ್ಯಾಪ್ತಿಯ ವಾರ್ಡ್ ನಂ.12ರಲ್ಲಿ ನಡೆದ ಉಪಚುನಾವಣೆಯಲ್ಲಿ 3 ಜನರ ನಡುವೆ ಪೈಪೋಟಿ ಎದುರಾಗಿದೆ.ಕಣದಲ್ಲಿರುವ ಕಾಂಗ್ರೆಸ್ನಿಂದ ಎಂ.ಪವನಕುಮಾರ, ಜೆಡಿಎಸ್ನಿಂದ ಮೀರ್ ಅಬ್ದುಲ್ ರಹೀಮ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ನೂರ್ ಪಾಷಾ ಅವರು ಭವಿಷ್ಯದ ಮೇಲೆ ಮತದಾರರು ಮುದ್ರೆಯನ್ನು ಹಾಕಿದ್ದಾರೆ. ಈ ಹಿಂದೆ ನಡೆದ ಚುನಾವಣೆಯಲ್ಲಿ ಕಾಂಗ್ರೆನಿಂದ ಇ..ವಿನಯ ಕುಮಾರ ಗೆದ್ದು ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ನಗರಸಭೆ ಆಡಳಿತ ಮಂಡಳಿಯು ಬಿಜೆಪಿ ಪಾಲಾಯಿತು. ಅಧ್ಯಕ್ಷ ಸ್ಥಾನವನ್ನು ಕಳೆದುಕೊಂಡ ಇ.ವಿನಯ ಕುಮಾರ ಕೆಲವೇ ದಿನಗಳಲ್ಲಿ ನಗರಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿ. ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ರಾಯಚೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ನಿಂದ ಟಿಕೆಟ್ ಪಡೆದು ಸ್ಪರ್ಧೆ ಮಾಡಿ ಹೀನಾಯವಾಗಿ ಸೋತಿದ್ದರು. ಇವರ ರಾಜೀನಾಮೆಯಿಂದಾಗಿ ತೆರವಾಗಿದ್ದ ಸ್ಥಾನಕ್ಕೆಇದೀಗ ಉಪಚುನಾವಣೆಯಾಗಿ ಮತದಾನವಾಗಿದ್ದು ಇದೇ ಡಿ.30ರಂದು ಮತ ಏಣಿಕೆ ಕಾರ್ಯವು ಜರುಗಲಿದೆ.ಬಿಗಿ ಭದ್ರತೆಯ ನಡುವೆ ಬಿರುಸಿನ ಮತದಾನ: ಬಿಗಿ ಪೊಲೀಸ್ ಭದ್ರತೆ ನಡುವೆ ರಾಯಚೂರು ನಗರಸಭೆಯ ವಾರ್ಡ್. 12ರ ಉಪ ಚುನಾವಣೆ ವ್ಯಾಪ್ತಿಯ ಮಂಗಳವಾರ ಪೇಟೆ ಹಾಗೂ ಪರಕೋಟಾ ಬಡಾವಣೆಯಲ್ಲಿ ಶಾಂತಿಯುತವಾಗಿ ಬಿರುಸಿನ ಮತದಾನ ಜರುಗಿತು.
ಸ್ಥಳೀಯ ಎಂ.ಈರಣ್ಣ ವೃತ್ತದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಮೊಕ್ಕಾಂ ಹೂಡಿ ಮತದಾನದ ಕಾರ್ಯಗಳನ್ನು ವೀಕ್ಷಿಸಿದರು.ನಗರದ ಮಂಗಳವಾರಪೇಟೆ ಉನ್ನತಿಕರಿಸಿದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 3 ಬೂತ್ ಹಾಗೂ ಪರಕೋಟ ಬಡಾವಣೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ 2 ಬೂತ್ ಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗಾಗಿ ವ್ಹೀಲ್ ಚೇರ್ ವ್ಯವಸ್ಥೆ ಮಾಡಲಾಗಿತ್ತು.