ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರಕ್ಕೆ ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಕಡೂರು
ಮನುಷ್ಯನ ಜೀವ ಉಳಿಸುವ ರಕ್ತದ ಪ್ರತಿ ಹನಿಯೂ ಅಮೂಲ್ಯವಾಗಿದ್ದು ಯುವ ಸಮೂಹವು ರಕ್ತದಾನ ಮಾಡುವ ಮೂಲಕ ಜೀವ ಉಳಿಸಲು ಅಗತ್ಯ ಇರುವವರಿಗೆ ನೆರವಾಗಬೇಕು ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಕರೆ ನೀಡದರು.ಮಂಗಳವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕು ಕುರುಬ ಸಮಾಜದಿಂದ 537ನೇ ಕನಕ ಜಯಂತ್ಯುತ್ಸವ ಸಮಿತಿ, ಜೀವಿತಾ ಫೌಂಡೇಷನ್, ಟಿಡಿಆರ್ಸಿ, ಜಿಲ್ಲಾ ರಕ್ತನಿಧಿ ಹಾಗೂ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ತುರ್ತು ಸಂದರ್ಭಗಳಲ್ಲಿ ರಕ್ತದಾನ ಮಾಡಲು ಯುವ ಜನತೆ ಮುಂದೆ ಬರಬೇಕು. ಒಬ್ಬರ ರಕ್ತದಾನದಿಂದ ಅಮೂಲ್ಯ ಜೀವ ಉಳಿಸಲು ಸಾಧ್ಯವಾಗುವುದರ ಜೊತೆಗೆ ರಕ್ತ ನೀಡಿದ ವ್ಯಕ್ತಿಯ ದೇಹದಲ್ಲಿ ಹೊಸ ರಕ್ತವು ಉತ್ಪತ್ತಿಯಾಗಿ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ತಾಲೂಕು ಕುರುಬ ಸಮಾಜವು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ಶಿಬಿರಗಳನ್ನು ಆಯೋಜನೆಗೊಂಡಿರುವುದು ಶ್ಲಾಘನೀಯ. ಇಂತಹ ಕಾರ್ಯಗಳು ಬೇರೆಯವರಿಗೆ ಮಾದರಿಯಾಗಬೇಕು ಎಂದರು.ತಾಲೂಕು ಕುರುಬ ಸಮಾಜದ ಅಧ್ಯಕ್ಷ ಹೋಚಿಹಳ್ಳಿ ಭೋಗಪ್ಪ ಮಾತನಾಡಿ, ತಾಲೂಕು ಮಟ್ಟದ ಕನಕ ಜಯಂತಿ ಮಹೋತ್ಸವದ ಅಂಗವಾಗಿ ಸಮಾಜಮುಖಿ ಕಾರ್ಯಗಳೊಂದಿಗೆ ಶಿಬಿರ ಆಯೋಜಿಸಲಾಗಿದೆ. ಮನುಷ್ಯನ ಜೀವನ ಸಾರ್ಥಕವಾಗಲು ಸಮಾಜಕ್ಕೆ ಒಂದಿಷ್ಟು ಕೊಡುಗೆ ನೀಡುವ ಚಿಂತನೆ ಮಾಡಬೇಕು. ಈ ನಿಟ್ಟಿನಲ್ಲಿ ತಾಲೂಕು ಕುರುಬ ಸಮಾಜದ ವತಿಯಿಂದ ಜನೋಪಯೋಗಿ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ 537ನೇ ಕನಕ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ದೊಣ್ಣೆಕೋರನಹಳ್ಳಿ ಡಿ.ಎಸ್. ಉಮೇಶ್, ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ, ಪುರಸಭಾ ಸದಸ್ಯ ಮರುಗುದ್ದಿ ಮನು, ಸ್ವಾಗತ ಸಮಿತಿ ಅಧ್ಯಕ್ಷ ಯಗಟಿ ಗೋವಿಂದಪ್ಪ, ತಾಲೂಕು ವಕ್ತಾರ ಕೆ.ಜಿ.ಲೋಕೇಶ್ವರ್, ಜೀವಿತಾ ಫೌಂಡೇಷನ್ ಅಧ್ಯಕ್ಷ ಕೆ.ಪ್ರಕಾಶ್, ಡಾ.ಉಮೇಶ್, ಡಾ.ಮುರುಳಿ, ಚಂದ್ರೇಗೌಡ, ಡಾ.ಕಿರಣ್, ಕೆ.ಆರ್.ಸುರೇಶ್ ಲ್ಯಾಬ್ , ಎನ್.ಎಚ್.ನಂಜುಂಡಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹರೀಶ್, ಎನ್.ಎಚ್. ಚಂದ್ರಪ್ಪ, ಸಿಗೇಹಡ್ಲು ಶಿವಕುಮಾರ್, ನಿರಂಜನ್ ದಳವಾಯಿ, ರಂಗನಾಥ್, ಕಿರಣ್ ಮತ್ತಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.