ಕನ್ನಡಪ್ರಭ ವಾರ್ತೆ, ತುಮಕೂರು ವಿಶೇಷ ಮತತೀರ್ವ ಪರಿಷ್ಕಕರಣೆ (ಎಸ್ಐಆರ್) ವಿರೋಧಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ನಗರದ ಟೌನ್ಹಾಲ್ನ ಅಂಬೇಡ್ಕರ್ರವರ ಪ್ರತಿಮೆ ಹತ್ತಿರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.ಪ್ರತಿಭಟನೆಯನ್ನು ಉದ್ದೇಶಿಸಿ ಸ್ಲಂಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ರವರು ಮಾತನಾಡಿ ನಾವು ವಿಶೇಷ ಮತ ತೀವ್ರ ಪರಿಷ್ಕರಣೆಯನ್ನು ವಿರೋಧಿಸುತ್ತೇವೆ. ಏಕೆಂದರೇ ಸಂವಿಧಾನ ವಿರೋಧಿಯಾಗಿರುವ ಈ ನಡೆ ಕೇಂದ್ರ ಸರ್ಕಾರ ಭಾರತದ ಚುನಾವಣಾ ಆಯೋಗದ ಮುಖಾಂತರ ಪೌರತ್ವ ಖಾತ್ರಿಯನ್ನು ದಾಖಲಾತಿಗಳ ಮೂಲಕ ಮಾಡಲು ಹೊರಟಿರುವುದು ದೇಶದ ಅನಕ್ಷರಸ್ತರಿಗೆ, ಬಡವರಿಗೆ, ಮಹಿಳೆಯರಿಗೆ, ದಲಿತರು, ಮತ್ತುಅಲ್ಪಸಂಖ್ಯಾತರು ಹಾಗೂ ಅಲೆಮಾರಿಗಳಿಗೆ ಮತದ ಹಕ್ಕನ್ನು ಕಸಿಯುವ ಹುನ್ನಾರವಾಗಿದೆ ಎಂದರು.ಈಗಾಗಲೇ 10 ರಾಜ್ಯಗಳಲ್ಲಿ ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್ಐಆರ್ ಜಾರಿಗೊಳಿಸಿದ್ದು ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನದ ಹಕ್ಕಿನ ಮೇಲೆ ದಾಳಿ ನಡೆಸಿದ್ದು ಪ್ರಜಾಪ್ರಭುತ್ವದ ಬುನಾಧಿಯನ್ನೇ ಅಲುಗಾಡಿಸಿದೆ ಎಂದರು.ಪ್ರತಿಭಟನೆ ಬೆಂಬಲಿಸಿ ಮಾತಾನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಎಸ್ಐಆರ್ ಎಂಬುದು ಕೇವಲ ಅಲ್ಪಸಂಖ್ಯಾತರಿಗೆ ಸಮಸ್ಯೆಯಲ್ಲ ಇಡೀ ದೇಶದ ಎಲ್ಲಾ ಸಮುದಾಯದ ಜನರಿಗೂ ಸಮಸ್ಯೆಯೇ .ಕೇಂದ್ರದ ಗಾಳವಾಗಿ ಚುನಾವಣಾ ಆಯೋಗ ಎಸ್ಐಆರ್ ವಿಶೇಷ ಮತಪರಿಷ್ಕರಣೆ ವಿಷಯದಲ್ಲಿ ಕಾರ್ಯನಿರ್ವಹಿಸಲು ಮುಂದಾಗಿದೆ. ಆಯೋಗದ ಜವಾಬ್ದಾರಿಗಳನ್ನು ಗಾಳಿಗೆ ತೂರಿ ಮತದಾರರ ಹಕ್ಕು ಕಸಿಯಲು ಮುಂದಾಗಿದೆ ಎಂದರು.ಸಹಾಬಾಳ್ವೆ ಸಂಘದ ಅಧ್ಯಕ್ಷರಾದ ದೀಪಿಕಾ ಮಾತನಾಡಿ, ರಾಜ್ಯದಲ್ಲಿ 30 ಸಾವಿರಕ್ಕೂ ಅಧಿಕ ಟ್ರಾನ್ಸ್ಜೆಂಡರ್ ಸಮುದಾಯದವರಿದ್ದೇವೆ, ಸ್ವಾತಂತ್ರ್ಯ ಬಂದಾಗಿನಿಂದ ಇರದ ಎಸ್ಐಆರ್ ಈಗ್ಯಾಕೆ ಎಂದ ಅವರು ಕೇಂದ್ರದ ಬಿಜೆಪಿ ಸರ್ಕಾರ ಚುನಾವಣಾ ಆಯೋಗವನ್ನು ಬಳಸಿಕೊಂಡು ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯ ಮೇಲೆ ದಾಳಿ ನಡೆಸಲು ಮುಧಾಗಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ ಎಂದರು. ಎಪಿಸಿಆರ್ನ ಜಿಲ್ಲಾಧ್ಯಕ್ಷ ತಾಜುದ್ದಿನ್, ಔಷಧಿ ವ್ಯಾಪಾರಿಗಳ ಸಂಘದ ಮುಖಂಡ ಜವಾಹರ್ ಮಾತನಾಡಿದರು.