ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
೬೦ ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಅವನತಿಯತ್ತ ಸಾಗಿದೆ. ಇದೀಗ ೨೭೬ ಸ್ಥಾನಗಳಷ್ಟೂ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಕೇವಲ ೨೧೭ ಕ್ಷೇತ್ರಗಳಿಗೆ ಸೀಮಿತಗೊಂಡಿದೆ. ಇಂತಹ ಪಕ್ಷದವರು ಪ್ರಧಾನಿಯಾಗಲು ಸಾಧ್ಯವೇ ಎಂದು ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.ಶುಕ್ರವಾರ ರಾತ್ರಿ ಬನಹಟ್ಟಿಯ ಈಶ್ವರಲಿಂಗ ಮೈದಾನದಲ್ಲಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಹುದ್ದೆಗೆ ಒಂದೆಡೆ ಸ್ಟಾಲಿನ್, ಮಮತಾ ಬ್ಯಾನರ್ಜಿಯಂತವರು ಬೆನ್ನು ಬಿದ್ದಿದ್ದರೆ, ರಾಜ್ಯದ ಸಿಎಂ ಸಿದ್ದರಾಮಯ್ಯನವರು ನಾನೂ ಪ್ರಧಾನಿಯಾಗುವೆ ಎಂದು ಹೊರಟಿದ್ದಾರೆ. ರಾಜ್ಯಭಾರವನ್ನೇ ನೀಗಿಸದ ಇಂಥವರಿಂದ ದೇಶಭಾರ ಸಾಧ್ಯವೇ? ಕಾಂಗ್ರೆಸ್ ಕೇವಲ ಅಲ್ಪಸಂಖ್ಯಾತರ ಓಲೈಕೆಗಾಗಿ ರಾಜಕೀಯ ಮಾಡುತ್ತಿದೆ ಹೊರತು ಅಭಿವೃದ್ಧಿ ಶೂನ್ಯವಾಗಿದೆ ಎಂದರು.
ದೇಶದ ರಕ್ಷಣೆ, ಸುರಕ್ಷತೆಗಾಗಿ ಮೋದಿಯನ್ನು ಪ್ರಧಾನಿಯನ್ನಾಗಿಸಬೇಕಿದೆ. ಕಳೆದ ೧೦ ವರ್ಷಗಳಿಂದ ಜನಹಿತ, ಬಡವರ ಪರ ಹಾಗು ದೇಶದ ಅಭಿವೃದ್ಧಿ ನಡೆದಿದೆ. ಮುಂದೆಯೂ ಸುಭದ್ರ ಸರ್ಕಾರಕ್ಕೆ ಬಿಜೆಪಿ ಅನಿವಾರ್ಯವಾಗಿದೆ ಎಂದರು.ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ಪ್ರಕರಣದ ನೈಜ ಕಾರಣಗಳ ಮುಚ್ಚಿಹಾಕಲು ರಾಜ್ಯ ಸರ್ಕಾರ ಹುನ್ನಾರ ನಡೆಸಿದೆ. ಮುಸ್ಲಿಂ ಯುವಕ ಕೊಲೆಯಾದ ನೇಹಾಳನ್ನು ಮತಾಂತರಕ್ಕೆ ಒತ್ತಾಯಿಸಿದ್ದು, ಇದಕ್ಕೆ ಒಪ್ಪದ್ದಕ್ಕೆ ಕೊಲೆ ಮಾಡಿದ್ದಾನೆ. ಇಂತಹ ಕ್ರೂರಿಯ ರಕ್ಷಣೆಗೆ ರಾಜ್ಯ ಸರ್ಕಾರ ನಿಂತಿರುವುದು ತಲೆ ತಗ್ಗಿಸುವ ವಿಚಾರ ಎಂದು ಆರೋಪ ಮಾಡಿದರು.
ಶಾಸಕ ಸಿದ್ದು ಸವದಿ ಮಾತನಾಡಿ, ಗ್ಯಾರಂಟಿ ಹೆಸರಲ್ಲಿ ಖಜಾನೆ ಲೂಟಿಯಾಗ್ತಿದೆ. ಅಭಿವೃದ್ಧಿ ಹಣವನ್ನು ದುರ್ಬಳಕೆ ಮಾಡಿಕೊಂಡು ಪಂಚ ಗ್ಯಾರಂಟಿ ಹೆಸರಲ್ಲಿ ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆಯೆಂದರು. ಸುಮಾರು ಒಂದುವರೆ ಕಿ.ಮೀ.ನಷ್ಟು ಉದ್ದ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.ವೇದಿಕೆ ಮೇಲೆ ಸವಿತಾ ಹೊಸೂರ, ವೈಷ್ಣವಿ ಬಗೇವಾಡಿ, ಪವಿತ್ರಾ ತುಕ್ಕಣ್ಣವರ, ರತ್ನಾ ಕೊಳಕಿ, ಮಾಲಾ ಬಾವಲತ್ತಿ, ಶಾಂತಾ ಸೊರಗಾಂವಿ, ಗೌರಿ ಮಿಳ್ಳಿ, ಮೀನಾಕ್ಷಿ ಹಿರೇಮಠ, ದುರ್ಗವ್ವ ಹರಿಜನ, ಸಾವಿತ್ರಿ ಆಸಂಗಿ, ಶ್ರೀಶೈಲ ಬೀಳಗಿ, ಧರೆಪ್ಪ ಉಳ್ಳಾಗಡ್ಡಿ, ಪ್ರಭು ಮೊಳೇದ ಸೇರಿದಂತೆ ಅನೇಕರಿದ್ದರು.