ಬಿಪಿಎಲ್ ಕಾರ್ಡ್ ರದ್ದು: ಬಡ ವರ್ಗದವರು ಬೀದಿಪಾಲು

KannadaprabhaNewsNetwork |  
Published : Feb 28, 2026, 01:45 AM IST
ಬಿಪಿಎಲ್ ಕಾರ್ಡ್ ರದ್ದು ಪಡಿಸಿರುವುದನ್ನು ವಿರೋಧಿಸಿ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಶುಕ್ರವಾರ ಬಿಜೆಪಿ ಪಕ್ಷದ ನಗರ ಮತ್ತು ಗ್ರಾಮಾಂತರ ಮಂಡಲ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ರಾಜ್ಯ ಸರ್ಕಾರ ಬಡವರ ಪರವಾಗಿ ಕೆಲಸ ಮಾಡುತ್ತಿಲ್ಲ. ಬಡ ವರ್ಗದವರನ್ನು ಬೀದಿಗೆ ತಳ್ಳುವ ಕೆಲಸ ಮಾಡುತ್ತಿದೆ. ಬಡವರು ತಿನ್ನುವ ಅನ್ನವನ್ನು ಕಸಿಯುತ್ತಿದೆ ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಭದ್ರಾವತಿ

ರಾಜ್ಯ ಸರ್ಕಾರ ಬಡವರ ಪರವಾಗಿ ಕೆಲಸ ಮಾಡುತ್ತಿಲ್ಲ. ಬಡ ವರ್ಗದವರನ್ನು ಬೀದಿಗೆ ತಳ್ಳುವ ಕೆಲಸ ಮಾಡುತ್ತಿದೆ. ಬಡವರು ತಿನ್ನುವ ಅನ್ನವನ್ನು ಕಸಿಯುತ್ತಿದೆ ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್ ಆರೋಪಿಸಿದರು.

ತಾಲೂಕಿನಲ್ಲಿ ಶುಕ್ರವಾರ ಬಿಪಿಎಲ್ ಕಾರ್ಡ್ ರದ್ದು ಪಡಿಸಿರುವುದನ್ನು ವಿರೋಧಿಸಿ ತಾಲೂಕು ಕಚೇರಿ ಮುಂಭಾಗ ಪಕ್ಷದ ನಗರ ಮತ್ತು ಗ್ರಾಮಾಂತರ ಮಂಡಲ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನೆ ನೇತೃತ್ವವಹಿಸಿ ಮಾತನಾಡಿದರು.

ಬಡ ವರ್ಗದವರಿಗೆ ರಾಜ್ಯ ಸರ್ಕಾರ ವಿನಾಕಾರಣ ಕಿರುಕುಳ ನೀಡುತ್ತಿದ್ದು, ಅಸಂಬದ್ಧ, ಅವೈಜ್ಞಾನಿಕ ಮಾನದಂಡದ ಮೂಲಕ ಬಿಪಿಎಲ್ ಕಾರ್ಡ್ ರದ್ದುಪಡಿಸುತ್ತಿರುವುದು ಖಂಡನೀಯ. ಬಡ ವರ್ಗದವರಿಗೆ ಪ್ರತಿಯೊಂದಕ್ಕೂ ಬಿಪಿಎಲ್ ಕಾರ್ಡ್ ಅತಿ ಅವಶ್ಯಕವಾಗಿದೆ. ಏಕಾಏಕಿ ಕಾರ್ಡ್‌ಗಳನ್ನು ರದ್ದುಪಡಿಸಿರುವುದರಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಕ್ಷಣ ಅಸಂಬದ್ಧ, ಅವೈಜ್ಞಾನಿಕ ಮಾನದಂಡಗಳನ್ನು ಕೈಬಿಟ್ಟು ನಿಜವಾದ ಫಲಾನುಭವಿಗಳನ್ನು ಗುರುತಿಸಿ ಬಿಪಿಎಲ್ ಕಾರ್ಡ್‌ಗಳನ್ನು ನೀಡಬೇಕೆಂದು ಆಗ್ರಹಿಸಿದರು.

ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಎಚ್.ತೀರ್ಥಯ್ಯ ಮಾತನಾಡಿ, ಅಂತ್ಯೋದಯ, ಬಿಪಿಎಲ್, ಎಪಿಎಲ್ ಕಾರ್ಡ್ ಪ್ರತಿಯೊಬ್ಬ ನಾಗರಿಕನ ಅಸ್ತಿತ್ವದ ಗುರುತುಗಳಾಗಿವೆ. ಇಂದು ಅಂತ್ಯೋದಯ, ಬಿಪಿಎಲ್ ಕಾರ್ಡ್ ಕೇವಲ ನ್ಯಾಯಬೆಲೆ ಅಂಗಡಿಯಲ್ಲಿ ದೊರಕುವ ಅಕ್ಕಿ, ಗೋಧಿ, ಸಕ್ಕರೆ ಇತ್ಯಾದಿ ದಿನಸಿ ಸಾಮಾನುಗಳ ಖರೀದಿಗೆ ಮಾತ್ರವಲ್ಲದೆ, ಇಂದಿನ ದುಬಾರಿ ಆರೋಗ್ಯ ವೆಚ್ಚದ ಸಂದರ್ಭದಲ್ಲಿ, ಆಸ್ಪತ್ರೆಗಾಗಿಯೂ ಕೂಡ ಬಿಪಿಎಲ್ ಕಾರ್ಡ್ ಅತ್ಯಂತ ಅಗತ್ಯ ದಾಖಲೆಯಾಗಿದೆ. ಆದರೆ ಇಂದು ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ್ದಾರೆ, ನೈಜವಾಗಿ ಬಿಪಿಎಲ್ ಕಾರ್ಡ್ ಹೊಂದಬೇಕಾಗಿರುವ ನೈಜ ಫಲಾನುಭವಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.

ರಘುರಾವ್, ಶಕುಂತಲ, ಎಂ. ಮಂಜುನಾಥ್, ಅನ್ನಪೂರ್ಣ ಮಾತನಾಡಿ, ಸರ್ಕಾರ ಈಗಾಗಲೇ ಬಿಪಿಎಲ್ ಕಾರ್ಡಿನಲ್ಲಿ ಏನಾದರೂ ದೋಷಗಳಿದ್ದಲ್ಲಿ ನೈಜ ಫಲಾನುಭವಿಗಳಿಗೆ ಅವಕಾಶ ನೀಡಿ ಸರಿಪಡಿಸಿಕೊಳ್ಳಲು ತಕ್ಷಣ ಅವಕಾಶ ಮಾಡಿಕೊಡಬೇಕು. ಯಾವುದೋ ಕಾರಣಕ್ಕೆ ಟಿಡಿಎಸ್ ರಿಫಂಡ್ ಅಥವಾ ಮನೆ ಕಟ್ಟಿಕೊಳ್ಳಲು ಲೋನ್ ಉದ್ದೇಶಕ್ಕೆ ಐಟಿ ರಿಟರ್ನ್ ಫೈಲ್ ಮಾಡಿರುವ ನಿಜವಾದ ಬಡವನ ಬಿಪಿಎಲ್ ಕಾರ್ಡ್ ರದ್ದುಪಡಿಸಬಾರದು ಎಂದು ಆಗ್ರಹಿಸಿದರು.

ನಗರದಲ್ಲಿ 2018ರ ಮೇ ೨೮ರಂದು ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ (ಸರ್ವರಿಗೂ ಸೂರು ಯೋಜನೆ) ೫೦೦ ಫಲಾನುಭವಿಗಳಿಗೆ ಮನೆಗಳು ಮಂಜೂರಾಗಿದ್ದು, ಆದರೆ ಇದುವರೆಗೂ ಸುಮಾರು ೧೦೭ ಮನೆಗಳನ್ನು ಮಾತ್ರ ಪೂರ್ಣವಾಗಿ ನಿರ್ಮಾಣಗೊಳಿಸಲಾಗಿದ್ದು, ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಬಡವರಿಗೆ ಸೂರು ದೊರಕದಂತಾಗಿದೆ ಎಂದು ದೂರಿದರು.

ಚನ್ನೇಶ್, ಮೊಸರಹಳ್ಳಿ ಅಣ್ಣಪ್ಪ, ಹನುಮಂತನಾಯ್ಕ, ಸರಸ್ವತಿ, ಎಸ್. ರಾಜಶೇಖರ ಉಪ್ಪಾರ, ಸುಬ್ರಮಣ್ಯ, ಧನುಷ್ ಬೋಸ್ಲೆ, ಪ್ರಸನ್ನ, ಎಂ.ಎಸ್ ಸುರೇಶಪ್ಪ, ನಾಗವೇಣಿ, ನಿರಂಜನ, ಆಶಾ ಪುಟ್ಟಸ್ವಾಮಿ, ಭರತ್ ಕುಮಾರ್, ಪ್ರಜ್ವಲ್ ಇತರರು ಪಾಲ್ಗೊಂಡಿದ್ದರು.

ಪ್ರತಿಭಟನೆಗೂ ಮೊದಲು ಹಾಲಪ್ಪ ವೃತ್ತದಿಂದ ತಾಲೂಕು ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಹಾಕಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಲ್ಯವಿವಾಹ ತಡೆಗೆ ಇಲಾಖೆಗಳ ಮಧ್ಯೆ ಸಮನ್ವಯ ಅಗತ್ಯ
ನೌಕರಿ ಮೇಳ: 1290ರಲ್ಲಿ 190 ಮಂದಿಗೆ ಉದ್ಯೋಗ