ಕನ್ನಡಪ್ರಭ ವಾರ್ತೆ ಮಡಿಕೇರಿ
ನಿಗದಿತ ಸಮಯ ಮುಟ್ಟಲು ಕಾರುಗಳು ಶರವೇಗದಲ್ಲಿ ಸಂಚರಿಸಿ ರಸ್ತೆಯುದ್ದಕ್ಕೂ ಧೂಳೆಬ್ಬಿಸಿತು. ಕರ್ನಾಟಕ, ತಮಿಳುನಾಡು, ಆಂಧ್ರ, ಕೇರಳ, ಮಹಾರಾಷ್ಟ್ರ, ಪಾಂಡಿ, ಗೋವಾ, ಪೂನಾ, ಚಂಡೀಗಢ, ಕೋಲ್ಕತ್ತಾ ಸೇರಿದಂತೆ ವಿವಿಧ ರಾಜ್ಯಗಳಿಂದ 58 ಸ್ಪರ್ಧಿಗಳು ಪಾಲ್ಗೊಂಡಿದ್ದರು.
ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ಶಿಪ್ನ ಮೂರನೇ ಸುತ್ತಿನ ಸ್ಪರ್ಧೆ ಟಾಟಾ ಕಾಫಿ ಸಂಸ್ಥೆಯ ಕಾಫಿ ಎಸ್ಟೇಟ್ನಲ್ಲಿ ನಡೆಯಿತು. ಕೊಡಗಿನಲ್ಲಿ ಸತತ ಮೂರನೇ ಭಾರಿಗೆ ಆಯೋಜಿಸಲ್ಪಟ್ಟಿರುವ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ಶಿಪ್ನ ಜವಾಬ್ದಾರಿಯನ್ನು ತಿಮ್ಮಣ್ಣ, ಮಾಚಯ್ಯ ಮ್ಯಾಕ್ಸ್, ಸೋಮಣ್ಣ ಸೇರಿದಂತೆ ಮತ್ತಿತರರು ವಹಿಸಿಕೊಂಡು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು, ಅಚ್ಚುಕಟ್ಟಾಗಿ ನಿಭಾಯಿಸಿದರು.ಟಾಟಾ ಕಾಫಿ ಸಂಸ್ಥೆಗೆ ಸೇರಿದ ಕಾಫಿ ತೋಟಗಳಲ್ಲಿ ಸಂಚರಿಸುವ ಕಾರು ಹಾಗೂ ರ್ಯಾಲಿ ಪಟುಗಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿತ್ತು.
ಮೊದಲನೇ ದಿನದಲ್ಲಿ ಮಟ್ಟಪರಂಬು ಎಮ್ಮೆಗುಂಡಿ, ಆನಂದಪುರ ಮಾರ್ಗವಾಗಿ ಸಂಚರಿಸಿದ 58 ಕಾರುಗಳ ಪೈಕಿ 10ಕ್ಕೂ ಹೆಚ್ಚು ಕಾರುಗಳು ತಾಂತ್ರಿಕ ದೋಷ ಕಂಡ ಹಿನ್ನೆಲೆ ಎರಡನೇ ದಿನದ ಸಂಚಾರದಲ್ಲಿ ಅಲ್ಪ ಕಾರುಗಳು ಮಾತ್ರ ಸಂಚರಿಸಿದವು.ಜಿಲ್ಲೆಯ ಸುತ್ತಮುತ್ತಲ ಸಾರ್ವಜನಿಕರು, ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ತೋಟದ ಮಾರ್ಗಮಧ್ಯೆ ಬೆಳಗಿನಿಂದ ಸಂಜೆ ವರೆಗೆ ಕಾದು ಕುಳಿತು ರ್ಯಾಲಿಪಟುಗಳಿಗೆ ಹುರಿದುಂಬಿಸಿದರು.