ಉಡುಪಿ: ರಾಜ್ಯದಲ್ಲಿ ಸಾಧುಸಂತರಿಗೆ, ಹಿಂದುಗಳಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ವಿರುದ್ಧ ಮಾತನಾಡುವವರ ಮೇಲೆ ಸರ್ಕಾರವೇ ಸುಮೋಟೋ ಮೊಕದ್ದಮೆ ದಾಖಲಿಸುತ್ತಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಆರೋಪಿಸಿದ್ದಾರೆ. ಉಡುಪಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರಶೇಖರ ಸ್ವಾಮೀಜಿ ಅವರು ಮಾಡಿದ ಭಾಷಣದ ತುಣುಕೊಂದನ್ನು ಹಿಡಿದುಕೊಂಡು ಸರ್ಕಾರ ಅವರ ಮೇಲೆ ಕೇಸು ಹಾಕಿದೆ. ಪತ್ರಿಕಾ ಹೇಳಿಕೆ ನೀಡುವ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ಸುಮೋಟೋ ಕೇಸು ಹಾಕಿದ್ದಾರೆ. ಆದರೆ ನಕ್ಸಲರ ಪರವಾಗಿ ಮಾತನಾಡುವವರು, ನಕ್ಸಲ್ ಎನ್ಕೌಂಟರ್ ಮಾಡಿದ್ದೇ ತಪ್ಪು ಎನ್ನುವವರ ಬಗ್ಗೆ ಈ ಸರ್ಕಾರ ಮೃದುಧೋರಣೆ ಹೊಂದಿದೆ ಎಂದವರು ಅಸಮಾಧಾನ ವ್ಯಕ್ತಪಡಿಸಿದರು.
ಬಾಂಗ್ಲಾದಲ್ಲಿ ಇಸ್ಕಾನ್ ಪ್ರಮುಖರ ಬಂಧನ ಮತ್ತು ಅಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ವಿರೋಧಿಸಿ ಡಿ. 4ರಂದು ಉಡುಪಿಯಲ್ಲಿ ಮತ್ತು 5ರಂದು ರಾಜ್ಯ ಮಟ್ಟದಲ್ಲಿ ಬೃಹತ್ ಪ್ರತಿಭಟನೆಗೆ ಬಿಜೆಪಿ ನಿರ್ಧರಿಸಿದೆ ಎಂದವರು ಹೇಳಿದರು.