ಕನ್ನಡಪ್ರಭ ವಾರ್ತೆ, ಬೆಂಗಳೂರು
ರಾಜ್ಯಾದ್ಯಂತ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಡಿ ಅ.7ರವರೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹೊರತುಪಡಿಸಿ ಶೇ. 83.22 ರಷ್ಟು ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ.ಅ. 7ರಂದು ಸಮೀಕ್ಷೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದ್ದರೂ ಅನೇಕ ಜಿಲ್ಲೆಗಳಲ್ಲಿ ಸಮೀಕ್ಷೆಯ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸಮೀಕ್ಷೆಯ ಅವಧಿಯನ್ನು ಅ.18ರವರೆಗೂ ವಿಸ್ತರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.
ಅ.7 ರಂದು ಮಂಗಳವಾರ ಸಂಜೆ ವೇಳೆಗೆ 3,57,197 ಕುಟುಂಬಗಳ ಸಮೀಕ್ಷೆ ನಡೆದಿದೆ. ಒಟ್ಟು 1,19,65,700 ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದ್ದು, ಶೇ.83.22 ರಷ್ಟು ಪ್ರಗತಿ ಸಾಧಿಸಲಾಗಿದೆ.ಒಟ್ಟು ಒಟ್ಟು 1,43,77,978 ಕುಟುಂಬಗಳ ಸಮೀಕ್ಷೆಯ ಗುರಿ ನಿಗದಿ ಪಡಿಸಲಾಗಿತ್ತು. ಸೋಮವಾರದವರೆಗೆ 1,16,08,503 (ಶೇ.80.39 ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿತ್ತು. ಮಂಗಳವಾರ 3,57,197 ಕುಟುಂಬಗಳ ಸಮೀಕ್ಷೆ ನಡೆಸಿದ್ದು, ಈವರೆಗೆ ಒಟ್ಟು 4,47,34,261 ಜನಸಂಖ್ಯೆಯ ಸಮೀಕ್ಷೆ ಪೂರ್ಣಗೊಂಡಿದೆ.
ಅ.4ರಿಂದ ಜಿಬಿಎ (ಬೆಂಗಳೂರು) ವ್ಯಾಪ್ತಿಯಲ್ಲಿ ಸಮೀಕ್ಷೆ ಶುರು ಮಾಡಿದ್ದು, 39,82,335 ಕುಟುಂಬಗಳ ಸಮೀಕ್ಷೆ ಗುರಿ ನಿಗದಿಪಡಿಸಲಾಗಿದೆ. ಮಂಗಳವಾರ 1,37,714 ಕುಟುಂಬಗಳ ಸಮೀಕ್ಷೆ ನಡೆಸಿದ್ದು, ಈವರೆಗೆ 4,12,004 ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸಮೀಕ್ಷೆ ಬಳಿಕ ಮಕ್ಳಳಿಗೆ ವಿಶೇಷ ತರಗತಿ: ಡಿಕೆಶಿರಜೆ ವಿಸ್ತರಣೆಯಿಂದ ವಿದ್ಯಾರ್ಥಿಗಳ ಕಲಿಕೆಗೆ ಸಮಸ್ಯೆಯಾಗಬಾರದು. ಹೀಗಾಗಿ ಸಮೀಕ್ಷೆ ಬಳಿಕ ಹೆಚ್ಚುವರಿ ವಿಶೇಷ ತರಗತಿಗಳ ಮೂಲಕ ಪಠ್ಯ ಬೋಧನೆ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.ಸಮೀಕ್ಷೆ ಮಾಡುವಾಗ ಮೂರ್ಛೆ ತಪ್ಪಿದ ಶಿಕ್ಷಕಿ:
ರಾಜ್ಯ ಸರ್ಕಾರದ ಆರ್ಥಿಕ ಹಾಗೂ ಶೈಕ್ಷಣಿಕ ಗಣತಿ ನಡೆಸಲು ಮನೆಗಳ ಹುಡುಕಾಟ ಮಾಡುವ ವೇಳೆ ಕಡಿಮೆ ರಕ್ತದೊತ್ತಡದಿಂದ ಅಸ್ವಸ್ಥಗೊಂಡು ಶಿಕ್ಷಕಿ ಕುಸಿದು ಬಿದ್ದ ಘಟನೆ ಯಾದಗಿರಿ ಜಿಲ್ಲೆಯ ಸೈದಾಪುರದಲ್ಲಿ ಮಂಗಳವಾರ ನಡೆದಿದೆ. ಬಂದಳ್ಳಿ ಗ್ರಾಮದ ಪ್ರಾಥಮಿಕ ಶಾಲೆ ಶಿಕ್ಷಕಿ ಸುನೀತಾ ಗೌಡ್ ಅಳಳ್ಳಿ ಎಂಬುವವರು ಮೂರ್ಛೆ ತಪ್ಪಿದ ಶಿಕ್ಷಕಿ. ಅವರನ್ನು ತಕ್ಷಣವೇ ಸ್ಥಳೀಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಅವರ ಆರೋಗ್ಯವು ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.ಜಾತಿ ಜನಗಣತಿಯ ವೇಳೆ ಶಿಕ್ಷಕನಿಗೆ ಹೃದಯಾಘಾತ:ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಕೈಗೊಂಡಿರುವ ಜಾತಿ ಜನಗಣತಿ ಕರ್ತವ್ಯದಲ್ಲಿದ್ದ ವೇಳೆ ಶಿಕ್ಷಕನಿಗೆ ಹೃದಯಾಘಾತ ಆಗಿರುವ ಘಟನೆ ದಾವಣಗೆರೆ ತಾಲೂಕಿನ ಹಳೇ ಕಡ್ಲೆಬಾಳು ಗ್ರಾಮದಲ್ಲಿ ನಡೆದಿದೆ. ಹಳೇ ಕಡ್ಲೆಬಾಳು ಗ್ರಾಮದ ಸರ್ಕಾರಿ ಶಾಲೆ ಸಹಶಿಕ್ಷಕ ಶಿವಪ್ರಕಾಶ ನಾಯ್ಕ (44) ಹೃದಯಾಘಾತಕ್ಕೆ ಒಳಗಾದವರು. ಕುಸಿದುಬಿದ್ದ ಅವರನ್ನು ತಕ್ಷಣವೇ ಗ್ರಾಮಸ್ಥರು, ಸ್ಥಳೀಯರು ದಾವಣಗೆರೆ ಎಸ್.ಎಸ್.ಹೈಟೆಕ್ ಆಸ್ಪತ್ರೆಗೆ ಕರೆ ತಂದು, ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಅನಂತರ ಹೃದ್ರೋಗ ತಜ್ಞರು ಶಿವಪ್ರಕಾಶ ನಾಯ್ಕ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿ, ಸ್ಟಂಟ್ ಹಾಕಿದರು. ಶಿಕ್ಷಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.