ಕುಶಾಲನಗರಕ್ಕೆ ಕಾವೇರಿ ಕುಡಿಯುವ ನೀರು ಯೋಜನೆಗೆ ಅನುಮೋದನೆ

KannadaprabhaNewsNetwork |  
Published : Oct 17, 2024, 12:01 AM IST
ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ | Kannada Prabha

ಸಾರಾಂಶ

ಜಿಲ್ಲೆಯ ಅತಿ ಶೀಘ್ರ ಬೆಳವಣಿಗೆ ಕಂಡ ವಾಣಿಜ್ಯ ನಗರ ಕುಶಾಲನಗರ ಪಟ್ಟಣಕ್ಕೆ ಅಮೃತ್ 2.0 ಯೋಜನೆಯಡಿ ರು.44 ಕೋಟಿ ವೆಚ್ಚದಲ್ಲಿ ಕಾವೇರಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಜಿಲ್ಲೆಯ ಅತಿ ಶೀಘ್ರ ಬೆಳವಣಿಗೆ ಕಂಡ ವಾಣಿಜ್ಯ ನಗರ ಕುಶಾಲನಗರ ಪಟ್ಟಣಕ್ಕೆ ಅಮೃತ್ 2.0 ಯೋಜನೆಯಡಿ ರು.44 ಕೋಟಿ ವೆಚ್ಚದಲ್ಲಿ ಕಾವೇರಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಪಂಚಾಯಿತಿ ಕಚೇರಿ ಆವರಣದ ಸಭಾಂಗಣದಲ್ಲಿ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಟ್ಟಣದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಮೃತ್ 2.0 ಯೋಜನೆಯಡಿ ಕಾವೇರಿ ಕುಡಿಯುವ ನೀರಿನ ಪೂರೈಕೆ ಮಾಡುವ‌ ಬಗ್ಗೆ ಚರ್ಚೆ ನಡೆಯಿತು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಉಮೇಶ್ ಚಂದ್ರ ಮಾತನಾಡಿ, ಪಟ್ಟಣದ 20 ಕಿಲೋಮೀಟರ್ ವ್ಯಾಪ್ತಿಯ ಎರಡು ಸಾವಿರಕ್ಕೂ ಹೆಚ್ಚಿನ ಮನೆಗಳಿಗೆ ನೀರು ಪೂರೈಸಲು ಉದ್ದೇಶಿಸಿಸಲಾಗಿದೆ.ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ದಿಂಡಿಗಾಡು ಬಳಿ ಕಾವೇರಿ ನದಿಯಲ್ಲಿ ಜ್ಯಾಕ್ ವೆಲ್ ನಿರ್ಮಿಸಲು ಜಾಗ ಪರಿಶೀಲನೆ ನಡೆಸಲಾಗಿದೆ.ಈ ಯೋಜನೆ ಮುಂದಿನ‌ ಎರಡು ವರ್ಷಗಳಲ್ಲಿ ಪೂರ್ಣಗೊಳಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಶೇ.50, ರಾಜ್ಯ ಸರ್ಕಾರ ಶೇ.40 ಹಾಗೂ ಸ್ಥಳೀಯ ಸಂಸ್ಥೆ ಶೇ.10 ರಷ್ಟು ಪಾಲು ಹಣ ಭರಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.

ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಬಿ. ಅಮೃತ್‌ರಾಜ್, ನಾವು ಪಟ್ಟಣ ಪಂಚಾಯಿತಿ ಸದಸ್ಯರೋ ಅಥವಾ ಪುರಸಭೆ ಸದಸ್ಯರೋ ? ಎಂಬ ಗೊಂದಲದಿಂದ ಇರುವುದಾಗಿ ತಿಳಿಸಿದರು.

ಈಗ 2ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸಂದರ್ಭ ಸರ್ಕಾರ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಎಂದು ಅಧಿಸೂಚನೆ ಹೊರಡಿಸಿ ಅದರಂತೆಯೇ ಚುನಾವಣೆಯನ್ನೂ ನಡೆಸಲಾಗಿದೆ. ಹಾಗಾಗಿ ಈಗ ನಡೆಯುತ್ತಿರುವುದು ಪುರಸಭೆ ಸಾಮಾನ್ಯ ಸಭೆಯೋ ಅಥವಾ ಪ.ಪಂ. ಸಾಮಾನ್ಯ ಸಭೆಯೋ ಎನ್ನುವ ಗೊಂದಲ ಇದೆ. ಈ ಸಭೆಯ ಸಿಂಧುತ್ವದ ಬಗ್ಗೆಯೂ ಅನುಮಾನವಿದೆ ಎಂದು ಹೇಳಿದರು.

ಬಿಜೆಪಿಯ ಡಿ.ಕೆ. ತಿಮ್ಮಪ್ಪ, ಜಯವರ್ಧನ್, ಜೆಡಿಎಸ್‌ನ ಜಗದೀಶ್ ಬಿ.ಎಲ್. ಧ್ವನಿಗೂಡಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ನ ಪ್ರಮೋದ್ ಮುತ್ತಪ್ಪ ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ಇಲ್ಲಿ ಈಗ ಈ ಪ್ರಸ್ತಾಪ ಸರಿಯಲ್ಲ ಎಂದರು.

ಸದಸ್ಯರ ಗೊಂದಲಗಳಿಗೆ ಉತ್ತರ ನೀಡಿದ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಕುಶಾಲನಗರ ಪುರಸಭೆಯಾಗಿ ಮೇಲ್ದರ್ಜೆಗೆ ಏರಿದೆ. ಈ ಸಂಬಂಧ ಸರ್ಕಾರ ಅಧಿಸೂಚನೆಯನ್ನೂ ಹೊರಡಿಸಿದೆ. ನ್ಯಾಯಾಲಯದ ನಿರ್ದೇಶನದಂತೆ ಪಟ್ಟಣ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣಾ ಪ್ರಕ್ರಿಯೆ ನಡೆಸಲಾಗಿದೆ. ಈಗ ಪುರಸಭೆ ಸಾಮಾನ್ಯ ಸಭೆ ನಡೆಯುತ್ತಿದ್ದು, ಈ ಸಭೆಗೆ ಸಿಂಧುತ್ವ ಇದೆ ಎಂದು ಉತ್ತರಿಸಿದರು.

ಯುಜಿಡಿ ಕಾಮಗಾರಿಯ ವಿಷಯ ಈ ಸಭೆಯಲ್ಲೂ ಪ್ರತಿಧ್ವನಿಸಿತು. ಇನ್ನು ಒಂದು ತಿಂಗಳ ಒಳಗಾಗಿ ಕಾಮಗಾರಿ ಮುಗಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಸದಸ್ಯ ಡಿ.ಕೆ. ತಿಮ್ಮಪ್ಪ ಎಚ್ಚರಿಸಿದರು.

ಕಾವೇರಿ ನದಿ ಸೇರುತ್ತಿರುವ ತ್ಯಾಜ್ಯಕ್ಕೆ ಮೊದಲು ತಡೆ ನೀಡಬೇಕು. ಹಾಗಾಗಿ ಕೂಡಲೇ ಚಾಲನೆ ನೀಡಬೇಕು, ಎಂದು ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಯುಜಿಡಿ ಅಧಿಕಾರಿಗಳಿಗೆ ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಉಮೇಶ್ ಚಂದ್ರ, ವಿದ್ಯುತ್ ಸಂಪರ್ಕ ಕಲ್ಪಿಸಿದ ಕೂಡಲೇ ಯುಜಿಡಿ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದರು.

ವಾಹನ ಪಾರ್ಕಿಂಗ್‌ ಸಮಸ್ಯೆ:

ಪಟ್ಟಣದಲ್ಲಿ ವಾಹನಗಳ ಪಾರ್ಕಿಂಗ್ ಸಮಸ್ಯೆ ಆಗುತ್ತಿರುವ ಬಗ್ಗೆ ಜೆಡಿಎಸ್‌ನ ಸುರಯ್ಯಾಭಾನು ವಿಷಯ ಪ್ರಸ್ತಾಪಿಸಿದರು. ಸರ್ಕಾರಿ ಆಸ್ಪತ್ರೆ ಬಳಿ ಆರಂಭವಾಗಿರುವ ಮಾಲ್‌ನಿಂದಾಗಿ ಈ ಭಾಗದಲ್ಲಿ ವಾಹನ ದಟ್ಟಣೆ, ಪಾರ್ಕಿಂಗ್ ಸಮಸ್ಯೆ ಆಗುತ್ತಿದ್ದು, ಈ ಮಾಲ್ ಮುಚ್ಚಿಸಿ ಎಂದು ಕೆಲವು ಸದಸ್ಯರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಆ ಮಾಲ್‌ಗೆ ಕಚೇರಿಯಿಂದ ಎನ್‌ಒಸಿ ನೀಡಿಲ್ಲ. ಪರವಾನಗಿಯೂ ಇಲ್ಲ ಎಂದು ಮಾಹಿತಿ ಒದಗಿಸಿದರು.

ಹಾಗಾದರೆ ಆ ಮಾಲ್ ತೆರೆಯಲು ಹೇಗೆ ಅವಕಾಶ ಕೊಟ್ಟಿದ್ದೀರಿ ? ಕೂಡಲೇ ಮುಚ್ಚಿಸಿ,’ ಎಂದು ಬಹುತೇಕ ಸದಸ್ಯರು ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಡಿ.ಕೆ. ತಿಮ್ಮಪ್ಪ, ‘ತಪ್ಪು ಮಾಡಿದವರಿಗೆ ತಿದ್ದಿಕೊಳ್ಳಲು ಒಮ್ಮೆ ಅವಕಾಶ ಕೊಡಿ, ನಂತರ ಕ್ರಮ ತೆಗೆದುಕೊಳ್ಳಿ’ ಎಂದು ಸಲಹೆ ನೀಡಿದರು.

ಪಟ್ಟಣದಲ್ಲಿ ಫುಟ್‌ಪಾತ್ ಅತಿಕ್ರಮಣ ತೆರವು ಮಾಡುವಂತೆ ಸದಸ್ಯ ಶೇಖ್ ಕಲೀಮುಲ್ಲಾ ಒತ್ತಾಯಿಸಿದರು. ಇದಕ್ಕೆ ಕೆ.ಆರ್.ರೇಣುಕಾ, ವಿ.ಎಸ್. ಆನಂದಕುಮಾರ್ ಧ್ವನಿಗೂಡಿಸಿದರು.

ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್ ನಿಂದ ಪಾದಚಾರಿಗಳು ನಡೆದಾಡಲು ಸಮಸ್ಯೆ ಉಂಟಾಗಿದೆ. ಯಾವುದೇ ತಾರತಮ್ಯ ಮಾಡದೆ ನಿರ್ದಾಕ್ಷಿಣ್ಯವಾಗಿ ಫುಟ್ಬಾತ್‌ ಒತ್ತುವರಿ ತೆರವು ಆಗಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಡೆಲ್ಟಾ ಯೋಜನೆ ಅಡಿಯಲ್ಲಿ ಬಿಎಂ ರಸ್ತೆ ಬದಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಸಂದರ್ಭ ಎಂಜಿನಿಯರಿಂಗ್ ಕಾಲೇಜಿನಿಂದ ಕೊಪ್ಪ ಗೇಟ್ ತನಕ ಫುಟ್‌ಪಾತ್ ನಿರ್ಮಿಸಲಾಗುವುದು. ಹೆದ್ದಾರಿ ಬದಿಯ ಒತ್ತುವರಿ ತೆರವು ಮಾಡಲಾಗುವುದು ಎಂದರು.

ಉಪಾಧ್ಯಕ್ಷೆ ಪುಟ್ಟ ಲಕ್ಷ್ಮಿ, ಸದಸ್ಯರು ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ