ಕಾವೇರಿ ನದಿ ಪ್ರವಾಹಕ್ಕೆ ತಂಬಾಕು ಬೆಳೆಗೆ ಹಾನಿ

KannadaprabhaNewsNetwork |  
Published : Aug 03, 2025, 01:30 AM IST
ಅರಕಲಗೂಡು ತಾಲೂಕಿನಲ್ಲಿ ಕಾವೇರಿ ನದಿ ಪ್ರವಾಹ ತಂಬಾಕು ಬೆಳೆ ಜಮೀನು ಆವರಿಸಿ ಹಾನಿಗೀಡಾಗಿರುವುದು.  ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಹೋಬಳಿಯಲ್ಲಿ ಅತಿವೃಷ್ಟಿ ಹೊಡೆತಕ್ಕೆ ಸಿಲುಕಿ ಕಾಫಿ ಕಾಳು ಉದುರಿ ಇಳುವರಿ ನಷ್ಟವಾಗಿದೆ. | Kannada Prabha

ಸಾರಾಂಶ

ಅರಕಲಗೂಡು ತಾಲೂಕಿನಲ್ಲಿ ಅತಿವೃಷ್ಟಿ ಹಾಗೂ ಕಾವೇರಿ ಪ್ರವಾಹ ಬಂದೆರಗಿದ ಪರಿಣಾಮ ತಂಬಾಕು, ಶುಂಠಿ, ಮುಸುಕಿನ ಜೋಳ ಮತ್ತು ಕಾಫಿ ಬೆಳೆಗೆ ಹಾನಿಯಾಗಿ ಅನ್ನದಾತರು ಆರ್ಥಿಕವಾಗಿ ನಷ್ಟ ಅನುಭವಿಸುವಂತಾಗಿದೆ. ಕಳೆದ ಬಾರಿ ತಂಬಾಕಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆತ ಖುಷಿಯಲ್ಲಿ ರೈತರು ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಸಸಿಮಡಿ ಬೆಳೆಸಿ ನಾಟಿ ಮಾಡಿದ್ದರು. ನಾಟಿ ಸಮಯದಲ್ಲಿ ಉತ್ತಮವಾಗಿ ಬಿದ್ದ ಮಳೆಯಿಂದ ಬೆಳೆ ಬೆಳವಣಿಗೆ ಕಾಣಬೇಕೆನ್ನುವಷ್ಟರಲ್ಲಿ ಅತಿವೃಷ್ಟಿ ಹೊಡೆತಕ್ಕೆ ಸಿಲುಕಿ ಅಪಾರ ಪ್ರಮಾಣದಲ್ಲಿ ಇಳುವರಿ ಕುಂಠಿತಗೊಂಡಿದೆ.

ಕನ್ನಡಪ್ರಭ ವಾರ್ತೆ ಅರಕಲಗೂಡು

ತಾಲೂಕಿನಲ್ಲಿ ಅತಿವೃಷ್ಟಿ ಹಾಗೂ ಕಾವೇರಿ ಪ್ರವಾಹ ಬಂದೆರಗಿದ ಪರಿಣಾಮ ತಂಬಾಕು, ಶುಂಠಿ, ಮುಸುಕಿನ ಜೋಳ ಮತ್ತು ಕಾಫಿ ಬೆಳೆಗೆ ಹಾನಿಯಾಗಿ ಅನ್ನದಾತರು ಆರ್ಥಿಕವಾಗಿ ನಷ್ಟ ಅನುಭವಿಸುವಂತಾಗಿದೆ.

ಈ ಬಾರಿ ಮುಂಗಾರು ಪೂರ್ವದಿಂದಲೂ ಸುರಿದ ಭಾರೀ ಮಳೆಯಿಂದಾಗಿ ತಂಬಾಕು ಬೆಳೆಗೆ ಹೆಚ್ಚು ಹಾನಿ ಉಂಟಾಗಿದೆ. ಇದೀಗ ಬಿದ್ದ ಮುಂಗಾರು ಮಳೆ ಅಬ್ಬರಕ್ಕೆ ಎರಡನೇ ಬಾರಿಗೆ ಕಾವೇರಿ ನದಿ ಉಕ್ಕಿ ತಗ್ಗು ಪ್ರದೇಶದಲ್ಲಿ ಬೆಳೆ ಮುಳುಗಡೆಯಾಗಿ ರೈತರ ಬದುಕು ಮೂರಾಬಟ್ಟೆಯಾಗಿದೆ.

ಹಾರಂಗಿ ಹಾಗೂ ಹೇಮಾವತಿ ಜಲಾಶಯ ಭರ್ತಿಯಾಗಿದ್ದು ನಿತ್ಯ ಹೆಚ್ಚುವರಿಯಾಗಿ ನೀರು ಹರಿಸಿದ್ದರಿಂದ ನದಿ ಉಕ್ಕಿ ಹರಿಯಲು ಕಾರಣವಾಗಿದೆ. ಪರಿಣಾಮವಾಗಿ ತಗ್ಗು ಪ್ರದೇಶದತ್ತ ನೀರು ನುಗ್ಗಿ ವಾರಗಟ್ಟಲೇ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಮಳೆ ಅಬ್ಬರಕ್ಕೆ ಸಿಲುಕಿ ತಂಬಾಕು, ಶುಂಠಿ, ದ್ವಿದಳ ಧಾನ್ಯ ಹಾಗೂ ತೋಟದ ಬೆಳೆಗಳು ಹಾನಿಗೊಳಗಾಗಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಕೊಣನೂರು ಹಾಗೂ ರಾಮನಾಥಪುರ ಹೋಬಳಿ ಭಾಗದ ತಗ್ಗು ಪ್ರದೇಶದಲ್ಲಿ ಹೊಗೆಸೊಪ್ಪು ಗಿಡಗಳು ಕಾವೇರಿ ನದಿ ಪ್ರವಾಹಕ್ಕೆ ಸಿಲುಕಿ ನಾಶವಾಗಿವೆ.

ಕಳೆದ ಬಾರಿ ತಂಬಾಕಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆತ ಖುಷಿಯಲ್ಲಿ ರೈತರು ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಸಸಿಮಡಿ ಬೆಳೆಸಿ ನಾಟಿ ಮಾಡಿದ್ದರು. ನಾಟಿ ಸಮಯದಲ್ಲಿ ಉತ್ತಮವಾಗಿ ಬಿದ್ದ ಮಳೆಯಿಂದ ಬೆಳೆ ಬೆಳವಣಿಗೆ ಕಾಣಬೇಕೆನ್ನುವಷ್ಟರಲ್ಲಿ ಅತಿವೃಷ್ಟಿ ಹೊಡೆತಕ್ಕೆ ಸಿಲುಕಿ ಅಪಾರ ಪ್ರಮಾಣದಲ್ಲಿ ಇಳುವರಿ ಕುಂಠಿತಗೊಂಡಿದೆ. ತಂಬಾಕು ನಾಟಿ ಮಾಡಿದ ಆರಂಭದ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಕೃಷಿ ಇಲಾಖೆ ಮಾಹಿತಿ ಪ್ರಕಾರ 51.4 ಮಿ.ಮೀ. ಮತ್ತು 96.1 ಮಿ.ಮೀ. ವಾಡಿಕೆ ಮಳೆ ಬದಲಿಗೆ 68.3 ಮಿಮೀ ಹಾಗೂ 256.4 ಮಿಮೀ ಮಳೆಯಾಗಿದೆ. ಮೇ ತಿಂಗಳಲ್ಲಿ ವಾಡಿಕೆಗಿಂತ 167 ಮಿಮೀ ಅಧಿಕ ಮಳೆಯಾಗಿದ್ದರಿಂದ ನಾಟಿ ಮಾಡಿದ ಗಿಡಗಳು ಮೇಲೇಳದಂತಾಗಿವೆ.

ಕೊಣನೂರು ರಾಮನಾಥಪುರ ಹೋಬಳಿ ಭಾಗದ ರೈತರು, ಈ ಸಲ ಹೆಚ್ಚಿನದಾಗಿ ತಂಬಾಕು ಬೆಳೆಯತ್ತ ಒಲವು ತೋರಿದ್ದರು. ಕಳೆದ ವರ್ಷ ಮಾರುಕಟ್ಟೆಯಲ್ಲಿ ಹೊಗೆಸೊಪ್ಪಿಗೆ ಮೇಲ್ದರ್ಜೆ ಮತ್ತು ಕೆಳದರ್ಜೆಗೂ ಉತ್ತಮ ಬೆಲೆ ದೊರೆತ ಖುಷಿಯಲ್ಲಿ ಹೆಚ್ಚಿನ ರೈತರು ಬೆಳೆ ಬೆಳೆದಿದ್ದರು. ಹೀಗಾಗಿ ತಂಬಾಕು ಬೆಳೆ ವಿಸ್ತೀರ್ಣ ಹೆಚ್ಚಿತ್ತು. ಬೆಳೆಗಾಗಿ ನೀರಿನಂತೆ ಹಣ ಖರ್ಚು ಮಾಡಿದ್ದರು. ದುರಾದೃಷ್ಟವಶಾತ್ ಭಾರೀ ಮಳೆಯಿಂದಾಗಿ ಜಮೀನಿನಲ್ಲಿ ನೀರು ನಿಂತು ಇಳುವರಿ ಕುಂಠಿತಗೊಂಡಿದೆ. ತಂಬಾಕು ಬೆಳೆ ಬೆಳವಣಿಗೆ ಹಂತದಲ್ಲಿತ್ತು. ಬೆಳೆಗಾಗಿ ರಸಗೊಬ್ಬರ ನೀಡಿ ಸಾಕಷ್ಟು ಖರ್ಚು ಮಾಡಿಕೊಂಡಿದ್ದೇವೆ ಎಂದು ಬೆಳೆಗಾರರು ತಮ್ಮ ಸಂಕಷ್ಟ ತೋಡಿಕೊಳ್ಳುತ್ತಾರೆ.

ಬಿಳಿಸುಳಿಗೆ ಮುಸುಕಿನ ಜೋಳ ಬಲಿ:

ತಾಲೂಕಿನಲ್ಲಿ 19, 700 ಹೆಕ್ಟೇರ್ ಗುರಿ ಹೊಂದಲಾಗಿದ್ದು 20,500 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ಬೆಳೆಯಲಾಗಿದೆ. ಬೆಳೆ ಬೆಳವಣಿಗೆ ಸಮಯದಲ್ಲಿ ಬಿಳಿಸುಳಿ ರೋಗಬಾಧೆಗೆ ಸಿಲುಕಿದ್ದರಿಂದ ರೈತರಿಗೆ ಅಪಾರ ನಷ್ಟ ಉಂಟಾಗಿದೆ. ರೋಗ ಬಾಧೆಗೆ ತುತ್ತಾಗಲು ಕಳಪೆ ಬಿತ್ತನೆ ಬೀಜ ಕಾರಣವಾಗಿದೆ ಎಂದು ರೈತ ಸಂಘದವರು ಪ್ರತಿಭಟನೆ ನಡೆಸಿದ್ದರಿಂದ ಇದೀಗ ಜಿಲ್ಲಾಡಳಿತ ಎಚ್ಚೆತ್ತು, ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಕೃಷಿ, ತೋಟಗಾರಿಕೆ, ರೈತ ಪ್ರತಿನಿಧಿಗಳು, ಹೋಬಳಿ ಕೃಷಿ ಅಧಿಕಾರಿಗಳನ್ನು ಒಳಗೊಂಡ ಜಂಟಿ ಸಮೀಕ್ಷಾ ತಂಡ ರಚನೆಯಾಗಿತ್ತು. 5 ಹೋಬಳಿಗಳಲ್ಲಿ ಹೋಬಳಿ ಮಟ್ಟದ ತಂಡಗಳನ್ನು ರಚನೆ ಮಾಡಿದ್ದು, ಸಮೀಕ್ಷಾ ಕಾರ್ಯವನ್ನು ಕೈಗೊಳ್ಳಲಾಗಿದೆ. ತಾಲೂಕಿನಾದ್ಯಂತ ಸುಮಾರು 20 ಗ್ರಾಮಗಳ ರೋಗಪೀಡಿತ ಬೆಳೆ ತಾಕುಗಳಿಗೆ ಭೇಟಿ ನೀಡಿ ಸಮೀಕ್ಷಾ ಕಾರ್ಯ ಕೈಗೊಳ್ಳಲಾಗಿದೆ.

-------------

ಬಾಕ್ಸ್..........

ಅರೆಮಲೆನಾಡು ಪ್ರದೇಶವಾದ ಮಲ್ಲಿಪಟ್ಟಣ ಹೋಬಳಿ ಭಾಗದಲ್ಲಿ ಸತತ ಮಳೆ ಸುರಿಯುತ್ತಿರುವ ಪರಿಣಾಮ ಕಾಫಿ ಬೆಳೆ ಹಾನಿಯಾಗಿದೆ. ಕಾಳು ಮೆಣಸು ಕೊಳೆತು ಹಾನಿಗೀಡಾಗಿದೆ. ಗಿಡಗಳಲ್ಲಿ ಕಾಫಿ ಕಾಯಿಗಳು ಕೊಳೆತು ನೆಲಕ್ಕುದುರಿದ್ದು ಶೇ. 30ರಷ್ಟು ಫಸಲು ನಾಶವಾಗಿದೆ.

------

-ದೇವರಾಜೇಗೌಡ, ಕಾಫಿ ಬೆಳೆಗಾರ.

ಭಾರೀ ಮಳೆಯಿಂದಾಗಿ ನದಿ ಪಾತ್ರದ ತಗ್ಗು ಪ್ರದೇಶದಲ್ಲಿ ಬೆಳೆದ ಅಡಿಕೆ ಬೆಳೆಗಳು ಪ್ರವಾಹಕ್ಕೆ ಸಿಲುಕಿ ನೀರು ಆವರಿಸಿಕೊಂಡಿದೆ. ಬೆಳೆಗಳನ್ನು ಕಳೆದುಕೊಂಡು ಅತಿವೃಷ್ಟಿ ಸಂಕಷ್ಟಕ್ಕೆ ಸಿಲುಕಿದ್ದೇವೆ.

- ರೈತ, ರಂಗೇಗೌಡ,

--------

ಮಳೆಯಿಂದಾಗಿ ತಂಬಾಕು ಬೆಳೆಗೆ ಹೆಚ್ಚು ಹಾನಿ ಉಂಟಾಗಿದೆ. ಕಾವೇರಿ ನದಿ ವ್ಯಾಪ್ತಿಯ ತಗ್ಗು ಪ್ರದೇಶದಲ್ಲಿ ಬೆಳೆ ಮುಳುಗಿದ್ದು, ಇಳುವರಿ ಕುಂಠಿತಗೊಂಡಿದೆ. ಮುಸುಕಿನ ಜೋಳಕ್ಕೆ ಬಿಳಿಸುಳಿ ರೋಗ ಕಾಣಿಸಿಕೊಂಡಿರುವ ಕುರಿತು ಸಮೀಕ್ಷಾ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.

- ಕೆ.ಜೆ. ಕವಿತಾ, ತಾಲೂಕು ಸಹಾಯಕ ಕೃಷಿ ನಿರ್ದೇಶಕಿ, ಅರಕಲಗೂಡು.

-------

ಅರಕಲಗೂಡು ತಾಲೂಕಿನಲ್ಲಿ ಮಳೆಯಿಂದಾಗಿ ಶುಂಠಿ ಬೆಳೆಗೆ ಹೆಚ್ಚಾಗಿ ಕೊಳೆ ರೋಗ ಬಾಧಿಸಿ ಹಾನಿಯಾಗಿದೆ. 750 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದ ಆಲೂಗಡ್ಡೆ ಹುಲುಸಾಗಿ ಬೆಳೆದಿದೆ.

-ರಾಜೇಶ್, ತೋಟಗಾರಿಕೆ ಇಲಾಖೆ ನಿರ್ದೇಶಕ, ಅರಕಲಗೂಡು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದು 2028ರವರೆಗೂ ಸಿಎಂ, ಇಳಿಸಲು ಆಗೋಲ್ಲ: ಜಮೀರ್‌
ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ