ಶಿರಸಿ: ಇಲ್ಲಿನ ನಗರ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು, ಮಹಿಳೆಯರು, ಮಕ್ಕಳು ಹಾಗೂ ಸಾರ್ವಜನಿಕರ ಸುರಕ್ಷತಾ ಹಿತದೃಷ್ಟಿಯಿಂದ ನಗರದ ಪ್ರಮುಖ ಆಯಕಟ್ಟಿನ 11 ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ದಾನಿಗಳ ಸಹಾಯದಿಂದ ಅಳವಡಿಸಲಾಗಿದೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ, ಡಿಎಸ್ಪಿ ಗಣೇಶ ಕೆ.ಎಲ್., ವೃತ್ತ ನಿರೀಕ್ಷಕ ಶಶಿಕಾಂತ ವರ್ಮಾ ಮಾರ್ಗದರ್ಶನದಲ್ಲಿ ನಗರ ಠಾಣೆಯ ಪಿಎಸ್ಐ ನಾಗಪ್ಪ ಬಿ. ನೇತೃತ್ವದಲ್ಲಿ ಸಿಬ್ಬಂದಿಗಳಾದ ವಿಶ್ವನಾಥ ಭಂಡಾರಿ, ಹನುಮಂತ ಕಬಾಡಿ, ಅರುಣ ಲಮಾಣಿ, ಸದ್ದಾಂ ಹುಸೇನ ಅವರು ಸಿಸಿ ಕ್ಯಾಮೆರಾ ಅಳವಡಿಸುವ ಕಾರ್ಯದಲ್ಲಿ ಭಾಗವಹಿಸಿದ್ದರು.ನಗರ ಠಾಣೆ ಪೊಲೀಸರ ಸಾರ್ವಜನಿಕ ಸೇವಾ ಕಾರ್ಯಕ್ಕೆ ಪ್ರಮುಖರಾದ ರಾಘು ಗೌಳಿ, ಗಜಾನನ ಸಕಲಾತಿ, ವಾಮನ ಮಾಡಗೇರಿ, ಅನಿಲ ನಾಯ್ಕ ಕೈಜೋಡಿಸಿದ್ದಾರೆ.
ಗೋಕರ್ಣ: ಇಲ್ಲಿನ ಕೋಟಿತೀರ್ಥ ಕಟ್ಟೆಯಲ್ಲಿರುವ ಕಾಲಭೈರವ ದೇವಾಲಯದ ಅಷ್ಟಬಂಧ ಪ್ರತಿಷ್ಠಾ ಸುವರ್ಣ ಮಹೋತ್ಸವ(ವರ್ಧಂತಿ ಉತ್ಸವ) ಬುಧವಾರದಿಂದ 3 ದಿನಗಳ ಕಾಲ ನಡೆಯಿತು.ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಮೊದಲನೇ ದಿನ ಗಣೇಶ ಪೂಜೆ ಧ್ವಜಾರೋಹಣ, ಶುದ್ಧಿ ಪುಣ್ಯಾಹ, ಬ್ರಹ್ಮಕೂರ್ಚ ಹವನ ಸೇರಿದಂತೆ ವಿವಿಧ ದೈವಿಕ ಕಾರ್ಯಕ್ರಮಗಳು ಜರುಗಿತು. ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.ಸಂಜೆ ಅಳವಿ ಆಂಜನೇಯ ಭಜನಾ ಮಂಡಳಿಯಿಂದ ಭಜನೆ, ಬಂಗ್ಲೆಗುಡ್ಡದ ಪುಟ್ಟ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ನಡೆಯಿತು. ಕೋಟಿತೀರ್ಥಕ್ಕೆ ಸಾಗುವ ಮಾರ್ಗ, ಕೋಟಿತೀರ್ಥ ಕಟ್ಟೆ, ಕಾಲಭೈರವ ಮಂದಿರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಗುರುವಾರ ಮುಂಜಾನೆ ಮೂಲಮಂತ್ರದ ಹವನ, ಗಂಗಾಪೂಜೆ, ಕುಂಭಾಭಿಷೇಕ ನಡೆಯಿತು. ಸಂಜೆ ಶ್ರೀದೇವರ ಪಲ್ಲಕ್ಕಿ ಉತ್ಸವ ವೆಂಕಟ್ರಮಣ ದೇವಾಲಯದಿಂದ ಭದ್ರಕಾಳಿ ಮಂದಿರದ ವರೆಗೆ ಸಾಗಿ ಮರಳಿತು. ಕಾಲಭೈರವ ಸೇವಾ ಸಮಿತಿಯವರು ಅಚ್ಚುಕಟ್ಟಿನ ವ್ಯವಸ್ಥೆ ಕಲ್ಪಿಸಿದ್ದರು.