ಕಸ ಹಾಕುವವರ ಮೇಲೆ ಸೀಸಿ ಕ್ಯಾಮೆರಾ ಕಣ್ಗಾವಲು..!

KannadaprabhaNewsNetwork |  
Published : May 27, 2026, 01:45 AM IST
೨೬ಕೆಎಂಎನ್‌ಡಿ-೧ಕ್ಯಾತುಂಗೆರೆ ರಸ್ತೆಯಿಂದ ಅನ್ನಪೂರ್ಣೇಶ್ವರಿ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಪಕ್ಕದಲ್ಲಿ ಸೀಸಿ ಕ್ಯಾಮೆರಾ ಅಳವಡಿಸಿರುವುದು. | Kannada Prabha

ಸಾರಾಂಶ

ಕಸ ಬಿಸಾಡುವವರ ಮೇಲೆ ಹದ್ದಿನ ಕಣ್ಣಿಡಲು ಸೀಸಿ ಕ್ಯಾಮೆರಾ ಅಳವಡಿಸಲಾಗಿದೆ. ಕಸ ಬಿಸಾಡಲು ಬಂದವರನ್ನು ಕಂಡರೆ ಸಾಕು ಸೈರನ್ ಮೊಳಗುತ್ತದೆ. ಫೋಟೋ ಸೆರೆಹಿಡಿಯುತ್ತದೆ. ನಂತರ ಕೇಸ್ ಬೀಳುತ್ತೆ. ಈಗ ಸೀಸಿ ಕ್ಯಾಮೆರಾಗೆ ಹೆದರಿ ಕಸ ಬೀಳುವುದೇ ದೂರವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಸ ಬಿಸಾಡುವವರ ಮೇಲೆ ಹದ್ದಿನ ಕಣ್ಣಿಡಲು ಸೀಸಿ ಕ್ಯಾಮೆರಾ ಅಳವಡಿಸಲಾಗಿದೆ. ಕಸ ಬಿಸಾಡಲು ಬಂದವರನ್ನು ಕಂಡರೆ ಸಾಕು ಸೈರನ್ ಮೊಳಗುತ್ತದೆ. ಫೋಟೋ ಸೆರೆಹಿಡಿಯುತ್ತದೆ. ನಂತರ ಕೇಸ್ ಬೀಳುತ್ತೆ. ಈಗ ಸೀಸಿ ಕ್ಯಾಮೆರಾಗೆ ಹೆದರಿ ಕಸ ಬೀಳುವುದೇ ದೂರವಾಗಿದೆ.

ಇದು ಬೇವಿನಹಳ್ಳಿ ಗ್ರಾಮ ಪಂಚಾಯ್ತಿಯವರು ನಗರಕ್ಕೆ ಹೊಂದಿಕೊಂಡಂತಿರುವ ಕ್ಯಾತುಂಗೆರೆ ರಸ್ತೆಯಿಂದ ಅನ್ನಪೂರ್ಣೇಶ್ವರಿ ನಗರ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಬದಿ, ಅನ್ನಪೂರ್ಣೇಶ್ವರಿ ಬಡಾವಣೆಯ ಎರಡನೇ ತಿರುವು ಹಾಗೂ ಅದೇ ಬಡಾವಣೆಯ ಎಂಟನೇ ತಿರುವು ಸೇರಿ ಎರಡು ಕಡೆ ಕಸ ಬೀಳುತ್ತಿದ್ದ ಸ್ಥಳಗಳಲ್ಲಿ ಸೀಸಿ ಟೀವಿ ಕ್ಯಾಮೆರಾ ಅಳವಡಿಸಿದ್ದಾರೆ. ಈ ಪ್ರಯೋಗ ಯಶಸ್ವಿಯಾಗಿದೆ. ಹಿಂದೆ ಈ ಸ್ಥಳಗಳಲ್ಲಿ ಎಷ್ಟೇ ಬಾರಿ ಸ್ವಚ್ಛಗೊಳಿಸಿದರೂ ಮತ್ತೆ ಮರುದಿನ ಅಷ್ಟೇ ಪ್ರಮಾಣದ ಕಸ ಬಂದು ಬೀಳುತ್ತಿತ್ತು. ಇದರಿಂದ ಪಂಚಾಯ್ತಿಯವರೂ ರೋಸಿಹೋಗಿದ್ದರು.

ಗ್ರಾಮ ಪಂಚಾಯ್ತಿ ಆಡಳಿತಾಧಿಕಾರಿಯಾಗಿ ಆಗಮಿಸಿದ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಲೋಕೇಶ್ ಅವರು ೧೦ ಸಾವಿರ ರು. ವೆಚ್ಚದಲ್ಲಿ ಎರಡೂ ಕಡೆ ಸೀಸಿ ಕ್ಯಾಮೆರಾ ಅಳವಡಿಸಿದ್ದಾರೆ. ಈ ಸೀಸಿ ಕ್ಯಾಮೆರಾಗಳ ವಿಶೇಷವೆಂದರೆ ಆ ಸ್ಥಳದಲ್ಲಿ ಕಸ ಹಾಕುವವರು ಬಂದರೆ ಸಾಕು ಸೈರನ್ ಮೊಳಗಿಸುತ್ತದೆ. ಫೋಟೋ ಸೆರೆಹಿಡಿದು ಬೇವಿನಹಳ್ಳಿ ಗ್ರಾಪಂ ಕಚೇರಿಗೆ ರವಾನಿಸುತ್ತದೆ. ವಿಶಿಷ್ಟ ರೀತಿಯಲ್ಲಿರುವ ಈ ಕ್ಯಾಮೆರಾ ಅಳವಡಿಸಿದಾಗಿನಿಂದ ಆ ಎರಡೂ ಸ್ಥಳಗಳಲ್ಲಿ ಕಸ ಹಾಕುವವರೇ ಇಲ್ಲವಾಗಿದ್ದಾರೆ.

ಕಸ ಹಾಕುವ ವಾಹನಗಳ ಮೂಲಕ ಎಲ್ಲೆಂದರಲ್ಲಿ ಕಸ ಸುರಿಯದಂತೆ ಎಷ್ಟೇ ಜಾಗೃತಿ ಮೂಡಿಸಿದ್ದರೂ ಜನರು ಲೆಕ್ಕಿಸುತ್ತಿರಲಿಲ್ಲ. ನಿತ್ಯವೂ ಅದೇ ಜಾಗಗಳಲ್ಲಿ ಕಸವನ್ನು ತಂದು ಸುರಿಯುತ್ತಿದ್ದರು. ಕೆಲವೊಂದು ಹೋಟೆಲ್‌ಗಳ ತ್ಯಾಜ್ಯವೂ ಅಲ್ಲಿಯೇ ಬೀಳುತ್ತಿತ್ತು. ಕೊನೆಗೆ ಲೋಕೇಶ್ ಅವರು ಸೀಸಿ ಕ್ಯಾಮೆರಾ ಅಳವಡಿಸಿ ಇಲ್ಲಿ ಕಸ ಸುರಿಯುವವರಿಗೆ ೨ ಸಾವಿರ ರು. ದಂಡ ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ನಾಮಫಲಕ ಹಾಕಿಸಿದರು.

ಸೀಸಿ ಕ್ಯಾಮೆರಾ ಮತ್ತು ದಂಡಕ್ಕೆ ಹೆದರಿದ ಜನರು ಆ ಸ್ಥಳಗಳಲ್ಲಿ ಕಸ ಹಾಕುವುದನ್ನು ನಿಲ್ಲಿಸಿದ್ದಾರೆ. ಸೀಸಿ ಕ್ಯಾಮೆರಾ ಪ್ರಯೋಗ ಯಶಸ್ವಿಯಾಗಿರುವುದು ಉಳಿದ ಪಂಚಾಯ್ತಿಗಳಿಗೂ ಮಾದರಿಯಾಗಿದೆ. ಗ್ರಾಪಂ ಆಡಳಿತಾಧಿಕಾರಿಯಾಗಿ ಸ್ವಚ್ಛತೆಯನ್ನು ಗುರಿಯಾಗಿಸಿಕೊಂಡು ಕೆಲಸ ಮಾಡುತ್ತಿರುವ ಲೋಕೇಶ್ ಕಾರ್ಯವೈಖರಿಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ಬೇವಿನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಎರಡು ಕಸ ಸಂಗ್ರಹ ವಾಹನಗಳಿವೆ. ಅನ್ನಪೂರ್ಣೇಶ್ವರಿ ಬಡಾವಣೆ, ಮಹಾಲಕ್ಷ್ಮೀ ಬಡಾವಣೆ, ಸಿದ್ದೇಶ್ವರ ಲೇಔಟ್, ವಿಕಸನ ಲೇಔಟ್‌ಗಳಲ್ಲಿ ಎರಡು ದಿನಗಳಿಗೊಮ್ಮೆ ಕಸ ಸಂಗ್ರಹಿಸಲಾಗುತ್ತಿದೆ. ಆದರೂ ಕಸ ಬೀಳುತ್ತಿದ್ದ ಜಾಗಗಳನ್ನು ಗುರುತಿಸಿ ಸೀಸಿ ಕ್ಯಾಮೆರಾ ಅಳವಡಿಸಲಾಗಿದೆ. ಇದೀಗ ಸೀಸಿ ಕ್ಯಾಮರಾಗಳಿಗೆ ಹೆದರಿ ಜನರು ಕಸ ಹಾಕುವುದನ್ನು ನಿಲ್ಲಿಸಿದ್ದಾರೆ. ಇನ್ನಾದರೂ ಐಸಾರ್ವಜನಿಕರಲ್ಲಿ ಸ್ವಯಂಪ್ರೇರಿತವಾಗಿ ಸ್ವಚ್ಛತೆಯ ಜಾಗೃತಿ ಮೂಡಬೇಕಿದೆ.

ಸ್ವಚ್ಛತೆಯ ಬಗ್ಗೆ ಜನರು ಸ್ವಯಂ ಜಾಗೃತಗೊಳ್ಳಬೇಕು. ಇಲ್ಲದಿದ್ದರೆ ಸ್ವಚ್ಛತೆ ಕಾಪಾಡಲಾಗದು. ಜನರಿಗೆ ಕಾನೂನಿನ ಭಯ ಮೂಡಿಸುವ ಸಲುವಾಗಿ ಸೀಸಿ ಕ್ಯಾಮೆರಾ ಅಳವಡಿಸಲಾಗಿದೆ. ಒಂದೆರಡು ಸಲ ಕಸ ಹಾಕಿದವರಿಗೆ ಎಚ್ಚರಿಕೆ ನೀಡಲಾಗುತ್ತದೆ. ಪದೇ ಪದೇ ಕಸ ಹಾಕುತ್ತಿದ್ದರೆ ದಂಡ ಮತ್ತು ಪ್ರಕರಣ ದಾಖಲಿಸಲಾಗುವುದು.

- ಲೋಕೇಶ್, ಆಡಳಿತಾಧಿಕಾರಿ, ಬೇವಿನಹಳ್ಳಿ ಗ್ರಾಪಂಎಷ್ಟೇ ಬಾರಿ ಸ್ವಚ್ಛಗೊಳಿಸಿದರೂ ಮೂರು ಸ್ಥಳಗಳಲ್ಲಿ ಮರುದಿನಕ್ಕೆ ಕಸ ಬೀಳುತ್ತಲೇ ಇತ್ತು. ಇದನ್ನು ತಪ್ಪಿಸಲು ಸೀಸಿ ಕ್ಯಾಮೆರಾ ಅಳವಡಿಸಲಾಗಿದೆ. ಕಸ ಎಸೆಯುವವರ ಫೋಟೋ, ವಾಹನ ಸಂಖ್ಯೆಯನ್ನು ಸೆರೆಹಿಡಿದು ಕಳುಹಿಸುತ್ತೆ. ಜೊತೆಗೆ ಸೈರನ್ ಕೂಡ ಮೊಳಗಿಸುತ್ತೆ. ಕ್ಯಾಮೆರಾ ಅಳವಡಿಸಿದ ಬಳಿಕ ಕಸ ಹಾಕುವವರು ಇಲ್ಲವಾಗಿದ್ದಾರೆ.

- ಚಾಮರಾಜು, ಪಿಡಿಒ, ಬೇವಿನಹಳ್ಳಿ ಗ್ರಾಪಂ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಕ್ರೀದ್ ವೇಳೆ ಅಕ್ರಮ ಗೋಸಾಗಾಟ ತಡೆಗೆ ಒತ್ತಾಯ
ಸಿಎಂ ಬದಲಾವಣೆ ಚರ್ಚೆ ಅಪ್ರಸ್ತುತ ಎಂದ ಸಚಿವ ಈಶ್ವರ್ ಖಂಡ್ರೆ