ಧಾರವಾಡ:
ಇನ್ನೇನು ದಸರಾ ಮುಗಿಯಿತು ಎನ್ನುವಷ್ಟರಲ್ಲಿ ಬಂದ ದೀಪಾವಳಿಯನ್ನು ಅಷ್ಟೇ ಸಂಭ್ರಮದಿಂದ ಬರಮಾಡಿಕೊಂಡ ಧಾರವಾಡಿಗರು, ಕಳೆದ ಸೋಮವಾರ ನರಕ ಚತುದರ್ಶಿ, ಮಂಗಳವಾರ ಅಮವಾಸ್ಯೆ ಹಾಗೂ ಬುಧವಾರ ಪಾಡ್ಯೆ ಹಬ್ಬದಲ್ಲಿ ವರ್ಷದ ಸಂಭ್ರಮ ಕಂಡರು.
ಮಲೆನಾಡಿನಲ್ಲಿ ವಿಶೇಷ...ಲಕ್ಷ್ಮೀ ಪೂಜೆ, ಅಂಗಡಿ-ಮುಂಗಟ್ಟುಗಳ ಪೂಜೆ, ವಾಹನ ಪೂಜೆ ದೀಪಾವಳಿ ಸಮಯದಲ್ಲಿ ಸಾಮಾನ್ಯವಾಗಿ ಮಾಡಲಾಗುತ್ತದೆ. ಅಂತೆಯೇ, ಧಾರವಾಡದ ಮಲೆನಾಡು ಪ್ರದೇಶದ ಗ್ರಾಮಗಳಲ್ಲಿ ಈ ಹಬ್ಬವನ್ನು ವಿಶೇಷವಾಗಿ ಎತ್ತು-ದನಕರುಗಳಿಗೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಗುತ್ತದೆ. ನಿಗದಿ, ದೇವರ ಹುಬ್ಬಳ್ಳಿ, ಮುಗದ, ಕಲಕೇರಿ, ಮನಸೂರು, ಮನಗುಂಡಿ, ಬೆಳ್ಳಿಗಟ್ಟಿ ಅಂತಹ ಊರುಗಳಲ್ಲಿ ಪಾಡ್ಯೆ ದಿನ ಬುಧವಾರ ಎತ್ತುಗಳನ್ನು ತೊಳೆದು, ಅವುಗಳ ಕೊಂಬುಗಳಿಗೆ ಬಣ್ಣ ಹಚ್ಚಿ, ಹೂವು, ಬಲೂನ್, ರಿಬ್ಬನ್ ಕಟ್ಟಿ ಊರಿನಲ್ಲಿ ಮೆರವಣಿಗೆ ಮಾಡಲಾಯಿತು. ಜೊತೆಗೆ ದನಕರುಗಳ ಕಾದಾಟವೂ ನೋಡುವಂತಿತ್ತು. ಈ ಆಚರಣೆಗೆ ಊರಿನ ಎಲ್ಲರೂ ಪಾಲ್ಗೊಂಡು ಸಂಭ್ರಮಿಸಿದರು.
ವ್ಯಾಪಾರಸ್ಥರು ಖುಷ್:
ಹಬ್ಬದ ಅಂಗವಾಗಿ ಕಳೆದೊಂದು ವಾರದಿಂದ ಮಾರುಕಟ್ಟೆ ಗಿಜಿಗುಡುತ್ತಿದೆ. ಹಬ್ಬ ಮುಗಿದ ಗುರುವಾರವೂ ಮಾರುಕಟ್ಟೆ ಜನರಿಂದ ತುಂಬಿತ್ತು. ಬಟ್ಟೆ ಅಂಗಡಿ, ಹೂ-ಹಣ್ಣು, ಸಿಹಿ ತಿಂಡಿಗಳ ಅಂಗಡಿ, ಪಟಾಕಿ ವ್ಯಾಪಾರಸ್ಥರು ಅತ್ಯಧಿಕ ಲಾಭ ಪಡೆದರು. ನಗರದ ಸುಭಾಷ ರಸ್ತೆ, ಸೂಪರ್ ಮಾರುಕಟ್ಟೆ, ಟಿಕಾರೆ ರಸ್ತೆ, ಅಕ್ಕಿ ಪೇಟೆ ಸೇರಿ ಎಲ್ಲ ಮಾರುಕಟ್ಟೆಗಳನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ದೀಪಾವಳಿ ಎಂದಾಕ್ಷಣ ಬೆಳಕಿನ ಹಣತೆ ಮಾತ್ರವಲ್ಲದೇ ಮಕ್ಕಳಾದಿಯಾಗಿ ಎಲ್ಲರೂ ಮೂರು ದಿನ ನಿರಂತರವಾಗಿ ಪಟಾಕಿ ಹೊಡೆದು ಸಂತಸ ಪಟ್ಟರು. ತವರಿಗೆ ಬಂದ ಜನರವರ್ಷದಲ್ಲಿ ಹಲವು ಹಬ್ಬಗಳಿದ್ದರೂ ದೀಪಾವಳಿ ಮಾತ್ರ ಹಿಂದೂಗಳಿಗೆ ವಿಶೇಷ. ಹೀಗಾಗಿ ದೇಶ-ಹೊರದೇಶದಲ್ಲಿದ್ದರೂ ಈ ಹಬ್ಬಕ್ಕೆ ತವರೂರಿಗೆ ಬರುವುದು ವಾಡಿಕೆ. ಅಂತೆಯೇ, ಉದ್ಯೋಗ, ಶಿಕ್ಷಣ ಸೇರಿದಂತೆ ಹಲವು ಕಾರ್ಯಗಳಿಗಾಗಿ ಬೆಂಗಳೂರು, ಪೂನೆ, ದೆಹಲಿ, ಆಂಧ್ರ ಸೇರಿದಂತೆ ಬೇರೆ ಬೇರೆ ಊರುಗಳಲ್ಲಿದ್ದವರು ಧಾರವಾಡಕ್ಕೆ ಆಗಮಿಸಿ ಕುಟುಂಬದ ಜೊತೆಗೆ ಹಬ್ಬವನ್ನು ಸಂಭ್ರಮಿಸಿದರು. ಸಾಫ್ಟ್ವೇರ್ ಸೇರಿದಂತೆ ವಿವಿಧ ನೌಕರಿಯಲ್ಲಿರುವರು ಹಬ್ಬಕ್ಕೆ ಮೂರು ದಿನ ರಜೆ ಇದ್ದರೂ ಹಿಂದಿನ ಶನಿವಾರ ಹಾಗೂ ಭಾನುವಾರ ಸಹ ಸೇರ್ಪಡೆಯಾಗಿ ಐದು ದಿನಗಳ ಕಾಲ ಹಬ್ಬದ ರಜೆ ಅನುಭವಿಸಿದರು.