ಕ್ರೈಸ್ತರಿಂದ ಸಂಭ್ರಮದ ಕ್ರಿಸ್‌ಮಸ್ ಆಚರಣೆ

KannadaprabhaNewsNetwork |  
Published : Dec 26, 2023, 01:30 AM ISTUpdated : Dec 26, 2023, 01:31 AM IST
೨೫ಕೆಎಂಎನ್‌ಡಿ-೧ಮಂಡ್ಯದ ಸಂತ ಜೋಸೆಫರ ಚರ್ಚ್‌ನಲ್ಲಿ ಕ್ರಿಸ್‌ಮಸ್ ಪ್ರಯುಕ್ತ ನಿರ್ಮಿಸಿರುವ ಆಕರ್ಷಣೀಯ ಗೋದಲಿ. | Kannada Prabha

ಸಾರಾಂಶ

ಕ್ರಿಸ್‌ಮಸ್‌ ನಿಮಿತ್ತ ಮಂಡ್ಯ ಜಿಲ್ಲಾದ್ಯಂತ ಚರ್ಚ್‌ಗಳಲ್ಲಿ ಆಕರ್ಷಕ ಗೋದಲಿ ನಿರ್ಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಕೆ, ಶಾಂತಿ, ಸಹಬಾಳ್ವೆ ನೆಲೆಸುವಂತೆ ಪಾದ್ರಿಗಳಿಂದ ಆಶೀರ್ವಚನ. ವಿವಿಧ ತಿಂಡಿ-ತಿನಿಸು ತಯಾರಿಸಿ, ಕ್ರಿಸ್‌ಮಸ್ ಕೇಕ್ ಕತ್ತರಿಸಿ, ವಿವಿಧ ಭಕ್ಷ್ಯ-ಭೋಜನ ತಯಾರಿಸಿ ಸ್ನೇಹಿತರು, ಬಂಧು-ಬಳಗದವರೊಂದಿಗೆ ಶುಭಾಶಯ ವಿನಿಮಯ.

ಕನ್ನಡಪ್ರಭ ವಾರ್ತೆ ಮಂಡ್ಯ ಕ್ರೈಸ್ತರು ಪವಿತ್ರ ಹಬ್ಬವಾದ ಕ್ರಿಸ್‌ಮಸ್‌ನ್ನು ಸಂಭ್ರಮ- ಸಡಗರದಿಂದ ಸೋಮವಾರ ಆಚರಿಸಿದರು.

ನಗರದ ಸಂತ ಜೋಸೆಫರ ಚರ್ಚ್ ಹಾಗೂ ಸಾಡೆ ಸ್ಮಾರಕ ದೇವಾಲಯ ಸೇರಿದಂತೆ ನಗರದ ವಿವಿಧ ಚರ್ಚ್‌ಗಳಲ್ಲಿ ಕ್ರಿಶ್ಚಿಯನ್ನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಶುಭಾಶಯ ವಿನಿಯಮ ಮಾಡಿಕೊಂಡರು.

ಕ್ರಿಸ್‌ಮಸ್ ಮುನ್ನಾ ದಿನವಾದ ಭಾನುವಾರ ಮಧ್ಯರಾತ್ರಿ ೧೨ ಗಂಟೆವರೆಗೆ ಕ್ರೈಸ್ತರು ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಯೇಸುವಿನ ಕುರಿತ ಭಕ್ತಿಗೀತೆಗಳನ್ನು ಹಾಡುವುದರೊಂದಿಗೆ ಪ್ರಾರ್ಥಿಸಿದರು. ಸೋಮವಾರ ಬೆಳಗ್ಗೆ ೮ ಗಂಟೆಯಿಂದಲೇ ಚರ್ಚ್‌ಗಳಲ್ಲಿ ಪ್ರಾರ್ಥನಾ ಕಾರ್ಯಕ್ರಮ ಆರಂಭವಾಗಿ ೧೦-೩೦ರವರೆವಿಗೂ ವಿಶೇಷ ಪ್ರಾರ್ಥನೆ ನಡೆಯಿತು.

ಪಾದ್ರಿಗಳಿಂದ ಆಶೀರ್ವಚನ:

ಸೆಂಟ್‌ಜೋಸೆಫ್ ಚರ್ಚ್‌ನ ಪಾದ್ರಿ ಲೂರ್ದ್‌ಪ್ರಸಾದ್ ಅವರು ಕ್ರಿಸ್‌ಮಸ್ ಸಂದೇಶ ಬೋಧಿಸಿದರು. ಜಗತ್ತಿನ ಎಲ್ಲ ಜನರೂ ಸಂಯಮ, ಸುಖ-ಸಮೃದ್ಧಿಯಿಂದ ಬದುಕುವಂತಾಲಿ. ಜನರು ಆರೋಗ್ಯವಂತರಾಗಿ ಶಾಂತಿ, ಸಹಬಾಳ್ವೆಯಿಂದ ಇರುವಂತಾಗಲಿ ಎಂದು ಶುಭ ಸಂದೇಶ ನೀಡಿದರು.

ಗೋದಲಿ ನಿರ್ಮಾಣ:

ರಾಜ್ಯದಲ್ಲೇ ಎರಡನೇ ದೊಡ್ಡ ಚರ್ಚ್ ಎನಿಸಿರುವ ಸಂತ ಜೋಸೆಫರ ದೇವಾಲಯದಲ್ಲಿ ಯೇಸು ಸ್ವಾಮಿಯ ‘ಬೆತ್ಲೇಯೇಮ್ ಗೋದಲಿ (ಧರ್ಮ ಕೊಟ್ಟಿಗೆ)ಯನ್ನು ಗುಡಿಸಲಿನ ಆಕಾರದಲ್ಲಿ ಅತ್ಯಾಕರ್ಷಕ ವಿದ್ಯುತ್ ದೀಪಗಳಿಂದ ನಿರ್ಮಿಸಲಾಗಿತ್ತು. ಅದರೊಳಗೆ ಬಾಲ ಯೇಸುವನ್ನುವ ಪ್ರತಿಷ್ಠಾಪಿಸಿ ಹೂವುಗಳಿಂದ ಅಲಂಕರಿಸಲಾಗಿತ್ತು.

ಯೇಸು ಹುಟ್ಟಿದ ಸಂದೇಶ ಮೊದಲು ಕುರುಬರಿಗೆ ರವಾನೆಯಾಗುತ್ತದೆ. ಅದನ್ನು ಕೇಳಿ ಧೂತರು ಗ್ಲೋರಿಗಳನ್ನು ಹಾಡುವ ರೀತಿಯಲ್ಲಿ ‘ಬೆತ್ಲೇಯೇಮ್ ಗೋದಲಿಯನ್ನು ನಿರ್ಮಿಸಿ ಅಲ್ಲಲ್ಲಿ ಕುರಿಗಳು, ಹುಲ್ಲಿನ ಮೈದಾನವನ್ನು ನಿರ್ಮಿಸಲಾಗಿತ್ತು.

‘ಬೆತ್ಲೇಯೇಮ್ ಗೋದಲಿಯ ಗುಡಿಸಲಿಗೆ ಸ್ಟಾರ್‌ಗಳನ್ನು ಕಟ್ಟಿ ಅದಕ್ಕೆ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಪುಟ್ಟ ಪುಟ್ಟ ವಿದ್ಯುತ್ ದೀಪಗಳಲ್ಲಿ ಮಿನುಗುತ್ತಿದ್ದ ಗೋದಲಿ ವಿಶೇಷ ಆಕರ್ಷಣೆಯಾಗಿತ್ತು.

ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಚರ್ಚ್ ಹಾಗೂ ಚರ್ಚ್‌ನ ಆವರಣವನ್ನು ಅಲಂಕಾರಿಕ ದೀಪಗಳು ಮತ್ತು ಆಕರ್ಷಕ ಬಟ್ಟೆಗಳಿಂದ ಸಿಂಗರಿಸಲಾಗಿತ್ತು. ಕ್ರಿಸ್‌ಮಸ್ ಟ್ರೀಗೂ ದೀಪಾಲಂಕಾರ ಮಾಡಲಾಗಿತ್ತು.

ಸಾಡೆ ಸ್ಮಾರಕ ದೇವಾಲಯದಲ್ಲೂ ವಿಶೇಷ ಪೂಜೆ:

ನಗರದ ಕ್ರಿಶ್ಚಿಯನ್ ಕಾಲೋನಿಯಲ್ಲಿರುವ ಸಾಡೇ ಸ್ಮಾರಕ ದೇವಾಲಯದಲ್ಲೂ ಕ್ರಿಸ್‌ಮಸ್ ಪ್ರಯುಕ್ತ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ರೆವರೆಂಡ್ ಆ್ಯಂಡ್ರೋಸ್ ಅವರು ಕ್ರಿಸ್‌ಮಸ್ ಸಂದೇಶ ಬೋಧಿಸಿದರು. ಯೇಸು ಸ್ವಾಮಿ ಎಲ್ಲರಿಗೂ ಸಮಾಧಾನ, ಶಾಂತಿಯನ್ನು ಕೊಡಲಿ. ಎಲ್ಲರಿಗೂ ಆರೋಗ್ಯ ಭಾಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

ನೂರಾರು ಸಂಖ್ಯೆಯಲ್ಲಿ ಕ್ರೈಸ್ತ ಸಮುದಾಯದವರು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಚರ್ಚ್ ಆವರಣವನ್ನು ವಿಶೇಷ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಬೃಹತ್ ವಿದ್ಯುತ್ ದೀಪಗಳನ್ನು ಅಳವಡಿಸಿದ್ದ ನಕ್ಷತ್ರವನ್ನು ಅಳವಡಿಸಿ ಅದರಲ್ಲಿ ಏಸುವಿನ ಸಂದೇಶಗಳನ್ನು ಚಿತ್ರಿಸಲಾಗಿತ್ತು.

ನಗರದ ಕ್ರಿಶ್ಚಿಯನ್ ಕಾಲೋನಿ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿತ್ತು. ಬಹುತೇಕ ಕ್ರಿಶ್ಚಿಯನ್ ಮನೆಗಳ ಎದುರು ಕ್ರಿಸ್‌ಮಸ್ ಶುಭಾಶಯ ಕೋರುವ ಸ್ಟಾರ್‌ಗಳನ್ನು ಕಟ್ಟಿ ಅದಕ್ಕೆ ವಿದ್ಯುತ್ ದೀಪ ಅಳವಡಿಸಿ ಬಣ್ಣದ ರಂಗು ತುಂಬಿದ್ದರು.

ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಕಳೆದ ಮೂರ್ನಾಲ್ಕು ದಿನಗಳಿಂದಲೂ ಮನೆ ಮನೆಗೆ ತೆರಳಿ ಏಸು ಕ್ರಿಸ್ತನ ಭಕ್ತಿಗೀತೆಗಳನ್ನು ಹಾಡುವುದರೊಂದಿಗೆ ಎಲ್ಲರೂ ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಪ್ರೇರೇಪಿಸುತ್ತಿದ್ದುದು ಕಂಡುಬಂದಿತ್ತು. ಒಟ್ಟಾರೆ ಈ ಬಾರಿ ಕ್ರಿಸ್‌ಮಸ್ ಹಬ್ಬ ಕಳೆಕಟ್ಟಿತ್ತು.

ಕ್ರಿಸ್‌ಮಸ್ ಪ್ರಯುಕ್ತ ಕ್ರಿಶ್ಚಿಯನ್ನರು ವಿವಿಧ ತಿಂಡಿ-ತಿನಿಸುಗಳನ್ನು ತಯಾರಿಸಿ, ಕ್ರಿಸ್‌ಮಸ್ ಕೇಕ್ ಕತ್ತರಿಸಿ, ವಿವಿಧ ಭಕ್ಷ್ಯ-ಭೋಜನಗಳನ್ನು ತಯಾರಿಸಿ ಸ್ನೇಹಿತರು, ಬಂಧು-ಬಳಗದವರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ