ಬ್ರಹ್ಮಾನಂದ ಆಶ್ರಮ ಜ್ಞಾನ ದಾಸೋಹದ ಕೇಂದ್ರ: ಚನ್ನಮಲ್ಲಿಕಾರ್ಜುನ ಶ್ರೀ

KannadaprabhaNewsNetwork | Published : Jan 15, 2025 12:46 AM

ಮೊದಲು ಆರೋಗ್ಯ, ಆರ್ಥಿಕ ಸಂಪತ್ತು ಜೊತೆಗೆ ಒಂದಿಷ್ಟು ಗುರುವಿನ ಮಾರ್ಗದಲ್ಲಿ ಆಧ್ಯಾತ್ಮದ ಅರಿವು ಮೂಡಿಸಿಕೊಂಡರೆ ನಿಮ್ಮ ಬದುಕು ಸಾರ್ಥಕವಾಗುತ್ತದೆ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಅನ್ನದಾಸೋಹದೊಂದಿಗೆ ಜನರಲ್ಲಿ ಭಕ್ತಿಯ ಮಾರ್ಗ ತೋರುತ್ತಾ ಆಧ್ಯಾತ್ಮದ ಅರಿವು ಮೂಡಿಸುವ ಜ್ಞಾನ ದಾಸೋಹದ ಕೇಂದ್ರ ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮ ಎಂದು ತಿಕೋಟಾದ ವಿರಕ್ತಮಠದ ಚನ್ನಮಲ್ಲಿಕಾರ್ಜುನ ಶ್ರೀಗಳು ಹೇಳಿದರು.

ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ನಡೆಯುತ್ತಿರುವ ಬ್ರಹ್ಮಾನಂದರ ಉತ್ಸವ ನಿಮಿತ್ತ ಹಮ್ಮಿಕೊಂಡ ಗುರು ಪರಂಪರೆ ಸ್ಮರಣೆ ಕಾರ್ಯಕ್ರಮದಲ್ಲಿ ಸಮ್ಮುಖ ವಹಿಸಿ ಮಾತನಾಡಿದ ಅವರು, ಇಂದಿನ ನಾಗಾಲೋಟದ ಬದುಕಿನಲ್ಲಿ ಜನ ಆರೋಗ್ಯದತ್ತ ಗಮನ ಹರಿಸದೇ ಕೇವಲ ಹಣ ಹಾಗೂ ಅಧಿಕಾರದ ಬೆನ್ನುಹತ್ತಿದ್ದು ಸರಿಯಾದ ಮಾರ್ಗವಲ್ಲ. ಮೊದಲು ಆರೋಗ್ಯ, ಆರ್ಥಿಕ ಸಂಪತ್ತು ಜೊತೆಗೆ ಒಂದಿಷ್ಟು ಗುರುವಿನ ಮಾರ್ಗದಲ್ಲಿ ಆಧ್ಯಾತ್ಮದ ಅರಿವು ಮೂಡಿಸಿಕೊಂಡರೆ ನಿಮ್ಮ ಬದುಕು ಸಾರ್ಥಕವಾಗುತ್ತದೆ ಎಂದರು.

ಹುನ್ನೂರ ಕೊಣ್ಣೂರಮಠದ ವಿಶ್ವನಾಥ ಶಾಸ್ತ್ರಿಗಳು ಮಾತನಾಡಿ, ಈ ನಾಡಿನಲ್ಲಿ ಅನೇಕ ಶರಣರು, ಸಂತರು ತಿರುಗಾಡಿದ ಪುಣ್ಯದ ನೆಲ, ಅಲ್ಲಮರ ಮಾರ್ಗದರ್ಶನದಂತೆ ಗುರುವಿನ ಮಾರ್ಗದರ್ಶನ ಮಾಡಿಕೊಳ್ಳಿರಿ. ಗುರುದೇವ ಬ್ರಹ್ಮಾನಂದರ ಆಶೀರ್ವಾದದಿಂದ ನಿಮಗೆ ಗುರುಸಿದ್ಧೇಶ್ವರ ಶ್ರೀಗಳು ದೊರಕಿದ್ದು ಇಲ್ಲಿನ ಭಕ್ತರು ಪುಣ್ಯವಂತರು. ಅವರು ಕೇವಲ ಭಕ್ತಿಯ ಮಾರ್ಗ ತೋರಲು ಬಂದವರು, ಅದಕ್ಕಾಗಿ ಇಷ್ಟೊಂದು ಭಕ್ತಿ ಹಾಗೂ ಭಾರತೀಯ ಸಂಪ್ರದಾಯ ಉಳಿಸಿ ಬೆಳೆಸಲು ೧೦ಕ್ಕೂ ಅಧಿಕ ಗ್ರಂಥಗಳನ್ನು ಬರೆದವರು ಗುರುಸಿದ್ಧೇಶ್ವರ ಶ್ರೀಗಳು ಎಂದರು.

ಮರೆಗುದ್ದಿ ದಿಗಂಬರೇಶ್ವರಮಠದ ತೋಂಟದಾರ್ಯ ಶ್ರೀಗಳು, ರಾಮಪುರ ಶಿವಾನಂದ ಕುಟೀರದ ಭಸ್ಮೇ ಮಹಾರಾಜರು ಮಾತನಾಡಿದರು. ವಿರುಪಾಕ್ಷಪ್ಪ ಕೋಕಟನೂರ, ಪ್ರಕಾಶ ಅಳವಾಡಿ, ಅಣ್ಣಪ್ಪ ಕುಂಬಿ, ನಾಗನಗೌಡ ಪಾಟೀಲ ವೇದಿಕೆ ಮೇಲಿದ್ದರು.

ಸಮಾರಂಭದಲ್ಲಿ ಶ್ರೀ ಮಠದ ಗುರುಸಿದ್ಧೇಶ್ವರ ಶ್ರೀಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಇದಕ್ಕೂ ಪೂರ್ವದಲ್ಲಿ ಶ್ರೀಮಠಕ್ಕೆ ಸೇವೆ ಮಾಡಿದವರಿಗೆ ಹಾಗೂ ದಾಸೋಹ ಸೇವೆ ಮಾಡಿದ ಪರಿವಾರಗಳಿಗೆ ಸನ್ಮಾನಿಸಲಾಯಿತು. ಗಿರೀಶ ಮುತ್ತೂರ, ಶಿವಾನಂದ ದಾಶ್ಯಾಳ, ಮಹಾದೇವ ಕವಿಶಟ್ಟಿ , ವಿರುಪಾಕ್ಷಯ್ಯ ಹಿರೇಮಠ, ಶಿಲ್ಪಾ ಅರೇನಾಡ ಇದ್ದರು.