ದಾವಣಗೆರೆ: ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ರಚಿಸಿದ ಸಂವಿಧಾನವನ್ನೇ ಬದಲಿಸುವ ಅಜೆಂಡಾ ಹೊಂದಿರುವ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಜೊತೆಗೆ ಸಾಮಾಜಿಕ ನ್ಯಾಯದಡಿ ಅಧಿಕಾರ ನೀಡುವ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರುವಂತೆ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ ಮನವಿ ಮಾಡಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಪಕ್ಷದ ಸಾಮಾಜಿಕ ನ್ಯಾಯ ಸಮಿತಿ ಹಮ್ಮಿಕೊಂಡಿದ್ದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸನ್ನು ದೇಶದ ಜನತೆ ಅಧಿಕಾರಕ್ಕೆ ತರಬೇಕು ಎಂದರು.ಇಡೀ ವಿಶ್ವದಲ್ಲಿ ಭಾರತಕ್ಕೆ ತನ್ನದೇ ಆದ ಇತಿಹಾಸವಿದೆ. ಇಂತಹ ದೇಶದಲ್ಲಿ ಕೋಮುವಾದಿತ್ವವನ್ನು ತಂದು, ಸಂವಿಧಾನವನ್ನು ಬದಲಿಸಲು ಹೊರಟಿರುವ ಬಿಜೆಪಿ ಅಧಿಕಾರದಲ್ಲಿ ಸರ್ವಾಧಿಕಾರಿ ಧೋರಣೆ ಮಾಡುತ್ತಿದೆ. ಇಂತಹ ಸರ್ಕಾರವನ್ನು ಬದಲಿಸುವ ಕಾಲ ಬಂದಿದೆ. ಜಾತ್ಯತೀತ ನಿಲುವನ್ನು ಹೊಂದಿರುವವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪಕ್ಷದ ಸಾಮಾಜಿಕ ನ್ಯಾಯ ಸಮಿತಿ ಜಿಲ್ಲಾಧ್ಯಕ್ಷ, ವಕೀಲ ಎಸ್.ಪರಮೇಶ ಮಾತನಾಡಿ, ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆ ಜಾರಿಗಳಿಸುವ ಮೂಲಕ ಜನಹಿತವನ್ನು ನಮ್ಮ ಸರ್ಕಾರ ಕಾಪಾಡಿದೆ. ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಎಸ್.ಎಸ್. ಕೇರ್ ಟ್ರಸ್ಟ್ನಿಂದ ಜನಸಾಮಾನ್ಯರಿಗೆ ಅನುಕೂಲವಾಗಲು ಬಡಮಕ್ಕಳಿಗೆ ಶಿಷ್ಯವೇತನ, ಉಚಿತ ಆರೋಗ್ಯಶಿಬಿರ ನಡೆಸುತ್ತಿದ್ದಾರೆ. ಅತಿ ಹೆಚ್ಚು ಮತಗಳ ಅಂತರದಲ್ಲಿ ಡಾ.ಪ್ರಭಾ ಅವರನ್ನು ಗೆಲ್ಲಿಸಲು ಶ್ರಮಿಸೋಣ ಎಂದರು.ಹಿರಿಯ ವಕೀಲರಾದ ಬಿ.ಎಂ.ಹನುಮಂತಪ್ಪ, ಕಂಚಿಕೇರಿ ಮಂಜಪ್ಪ, ಡೋಲಿ ಚಂದ್ರು, ಡಾ.ಪ್ರಭಾ ಮಲ್ಲಿಕಾರ್ಜುನ ಅಭಿಮಾನಿ ಬಳಗದ ಶುಭಮಂಗಳ, ಮಹಿಳಾ ಕಾಂಗ್ರೆಸ್ನ ಮಂಗಳಮ್ಮ, ಮಹ್ಮದ್ ಇಸ್ಮಾಯಿಲ್, ಕವಿತಾ ಚಂದ್ರಶೇಖರ್, ಅರುಣಕುಮಾರ್, ಮಹ್ಮದ್ ಇಲಿಯಾಜ್, ತಿಪ್ಪೇಶಪ್ಪ, ಮಂಜಪ್ಪ ಇತರರು ಇದ್ದರು.
- - - -2ಕೆಡಿವಿಜಿ1:ದಾವಣಗೆರೆಯಲ್ಲಿ ಕಾಂಗ್ರೆಸ್ ಸಾಮಾಜಿಕ ನ್ಯಾಯ ಸಮಿತಿ ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ ಮಾತನಾಡಿದರು.