ಸಾಮೂಹಿಕ ಮತದಾನ ಬಹಿಷ್ಕಾರಕ್ಕೆ ಚನ್ನನಕೆರೆ ಗ್ರಾಮಸ್ಥರ ನಿರ್ಧಾರ

KannadaprabhaNewsNetwork | Published : Apr 21, 2024 2:22 AM

ಸಾರಾಂಶ

ಕಟ್ಟೆಗೆ ನೀರು ತುಂಬಿಸಿ, ಜಾನುವಾರುಗಳ ಕುಡಿಯುವ ನೀರು ನೀಡುವಂತೆ ಒತ್ತಾಯಿಸಿದರೂ ಪ್ರಯೋಜವಾಗಿಲ್ಲ. ಸುತ್ತಮುತ್ತಲಿನ ಜಕ್ಕನಹಳ್ಳಿ, ಆಲಗೂಡು, ಎಲೆಚಾಕನಹಳ್ಳಿ ಗ್ರಾಮಗಳ ಕೆರೆ, ಕಟ್ಟೆಗಳಿಗೆ ನೀರೊದಗಿಸಿದ್ದಾರೆ, ಆದರೆ, ನಮ್ಮ ಗ್ರಾಮವನ್ನು ಸಂಪೂರ್ಣವಾಗಿ ಕಡೆಕಾಣಿಸಿದ್ದಾರೆ. ಎ.26 ರಂದು ಮತದಾನ ಮಾಡದೇ ಸಾಮೂಹಿಕವಾಗಿ ದೂರ ಉಳಿಯಲು ತೀರ್ಮಾನ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕಳೆದ 8 ವರ್ಷಗಳಿಂದ ಗ್ರಾಮದ ಕಟ್ಟೆಗೆ ನೀರು ತುಂಬಿಸಿ, ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದ ಜನಪ್ರತಿನಿಧಿ, ಅಧಿಕಾರಿಗಳ ಧೋರಣೆ ಖಂಡಿಸಿ ಪ್ರಸ್ತುತ ಲೋಕಸಭಾ ಚುನಾವಣೆ ಮತದಾನದಿಂದ ದೂರ ಉಳಿಯುಲು ತಾಲೂಕಿನ ಚನ್ನನಕೆರೆ ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಗ್ರಾಮಸ್ಥರು ಒಗ್ಗಟ್ಟಾಗಿ ಸೇರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ, ಹಲವು ವರ್ಷಗಳ ಬೇಡಿಕೆ ಈಡೇರಿಸದ ಹಿನ್ನೆಲೆಯಲ್ಲಿ ಏ.26 ರಂದು ಮತದಾನ ಮಾಡದೇ ಸಾಮೂಹಿಕವಾಗಿ ದೂರ ಉಳಿಯುವುದಾಗಿ ಖಾಲಿ ಕೊಡ ಹಿಡಿದು, ನೀರು ಕೊಡಿ, ಮತ ಕೇಳಿ ಎಂಬ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸಿದರು.

ಕಟ್ಟೆಗೆ ನೀರು ತುಂಬಿಸಿ, ಜಾನುವಾರುಗಳ ಕುಡಿಯುವ ನೀರು ನೀಡುವಂತೆ ಒತ್ತಾಯಿಸಿದರೂ ಪ್ರಯೋಜವಾಗಿಲ್ಲ. ಸುತ್ತಮುತ್ತಲಿನ ಜಕ್ಕನಹಳ್ಳಿ, ಆಲಗೂಡು, ಎಲೆಚಾಕನಹಳ್ಳಿ ಗ್ರಾಮಗಳ ಕೆರೆ, ಕಟ್ಟೆಗಳಿಗೆ ನೀರೊದಗಿಸಿದ್ದಾರೆ, ಆದರೆ, ನಮ್ಮ ಗ್ರಾಮವನ್ನು ಸಂಪೂರ್ಣವಾಗಿ ಕಡೆಕಾಣಿಸಿದ್ದಾರೆ ಎಂದು ದೂರಿದರು.

ಗ್ರಾಮದಿಂದ ಕೇವಲ 2ಕಿ.ಮೀ ಅಂತರದಲ್ಲೇ ಭುಗ ನಾಲೆ ಹಾದುಹೋಗಿದೆ. ಗ್ರಾಮದ ಕಟ್ಟೆ ನೀರು ಸೇರಿದಂತೆ ಅಂತರ್ಜಲ ನಾಲೆಗೆ ಸೇರಿ ಭತ್ತಿಯೋಗಿದೆ. ಭುಗ ನಾಲೆಯಿಂದ ಪೈಪ್ ಲೈನ್ ಮೂಲಕ ಕಟ್ಟೆ ತುಂಬಿಸುವಂತೆ ಕೇಳಿಕೊಂಡರು ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಇತ್ತ ಗಹನಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಜಾನುವಾರುಗಳಿಗೆ ನೀರಿನ ಹಾಹಾಕಾರ ಹೆಚ್ಚಾಗಿದೆ. ಜೊತೆಗೆ ಕ್ವಾರೆ, ಜಲ್ಲಿ ಕ್ರಷರ್‌ಗಳಿಂದ ನಿತ್ಯ ನೂರಾರು ವಾಹನಗಳು ಗ್ರಾಮದ ರಸ್ತೆಯಲ್ಲಿ ಓಡಾಡುತ್ತಿರುವುದರಿಂದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆ ಅಭಿವೃದ್ದಿ ಪಡಿಸುವಂತೆಯೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನ ಒತ್ತಾಯಿಸಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಹಾಗಾಗಿ ಗ್ರಾಮಸ್ಥರು ಒಗ್ಗಟ್ಟಾಗಿ ಮತದಾನ ಬಹಿಷ್ಕರಿಸುವುದಾಗಿ ತಿಳಿಸಿದರು.

ಈ ವೇಳೆ ಗ್ರಾಮದ ಮುಖಂಡರಾದ ದೇಶಿಲಿಂಗೇಗೌಡ, ನರೇಂದ್ರ, ಅಶೋಕ್, ತಿಮ್ಮೇಗೌಡ, ದೇಶಿಗೌಡ, ಪ್ರಮೋದ್, ಲಿಂಗರಾಜು, ಮಹದೇವು, ಸಣ್ಣಮ್ಮ, ಗಾಯಿತ್ರಿ, ರಾಣಿ, ಸರೋಜಮ್ಮ, ಅನುಸೂಯಮ್ಮ, ಸುಧಾ ಸೇರಿದಂತೆ ಗ್ರಾಮದ ನೂರಾರು ಮಂದಿ ಇದ್ದರು.

Share this article