ಕನ್ನಡಪ್ರಭ ವಾರ್ತೆ ಹಾಸನ
ರಾಷ್ಟ್ರೀಯ ಹೆದ್ದಾರಿ ನಿಯಮಾವಳಿ ಪ್ರಕಾರ ಪ್ರತಿ 60 ಕಿ.ಮೀ. ಅಂತರದಲ್ಲಿ ಸುಂಕ ವಸೂಲಿ ಕೇಂದ್ರ ಇರಬೇಕು. ಆದರೆ ಹಾಸನ ತಾಲೂಕಿನ ಶಾಂತಿಗ್ರಾಮ ಬಳಿ ಕಳೆದ ಹಲವು ವರ್ಷಗಳ ಹಿಂದೆಯೇ ಟೋಲ್ ನಿರ್ಮಿಸಿ ಎಲ್ಲಾ ವಾಹನಗಳಿಂದ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಆದರೀಗ ಶಾಂತಿಗ್ರಾಮ ಕೇಂದ್ರಕ್ಕೂ ಆಲೂರು ತಾಲೂಕಿನ ಚೌಲಗೆರೆ ಟೋಲ್ಗೂ ಕೇವಲ 30 ಕಿ.ಮೀ ದೂರ ಇದ್ದರೂ, ಮತ್ತೊಂದು ಟೋಲ್ ನಿರ್ಮಿಸಿ ಈಗ ಎಲ್ಲಾ ವಾಹನಗಳಿಂದ ಶುಲ್ಕ ವಸೂಲಿಗೆ ಸಿದ್ಧತೆ ಮಾಡಲಾಗಿದೆ. ಟೋಲ್ ಶುಲ್ಕ ವಸೂಲಿ ಮಾಡಲು ತೋರುತ್ತಿರುವ ಆಸಕ್ತಿ ರಸ್ತೆ ಗುಣಮಟ್ಟ ಕಾಪಾಡುವಲ್ಲಿ ಇಲ್ಲ. ಜತೆಗೆ ಈ ಟೋಲ್ನಲ್ಲಿ ಯಾವ ವಾಹನಕ್ಕೆ ಎಷ್ಟು ಸುಂಕ ಎನ್ನುವುದನ್ನು ಈವರೆಗೂ ನಾಮಫಲಕದಲ್ಲಿ ಹಾಕಿಲ್ಲ.
ರಸ್ತೆ ಕಾಮಗಾರಿಯೇ ಮುಗಿದಿಲ್ಲ:ರಾಷ್ಟ್ರೀಯ ಹೆದ್ದಾರಿ ನಿಯಮಾವಳಿ ಪ್ರಕಾರ ಟೋಲ್ ವಸೂಲಿ ಮಾಡಬೇಕೆಂದರೆ ಹೆದ್ದಾರಿಯ ಎಲ್ಲಾ ಕಾಮಗಾರಿಗಳು ಮುಗಿಯಬೇಕು. ಹಾಗೆಯೇ ಆ ರಸ್ತೆಯಲ್ಲಿ ಸಂಚರಿಸುವ ಚಾಲಕರು ಮತ್ತು ಪ್ರಯಾಣಿಕರಿಗೆ ಎಲ್ಲಾ ಮೂಲಭೂತ ಸೌಲಭ್ಯ ಕಲ್ಪಿಸಿರಬೇಕು. ಆದರೆ, ಹಾಸನದಿಂದ ಸಕಲೇಶಪುರವರೆಗೆ ಕಾಮಗಾರಿ ಮುಗಿದಿದ್ದರೂ, ಎಲ್ಲಾ ಕಡೆ ಅಗತ್ಯ ಸೂಚನಾ ಫಲಕ ಅಳವಡಿಸಿಲ್ಲ. ಹೆದ್ದಾರಿಯ ಬಹುತೇಕ ಕಡೆಗಳಲ್ಲಿ ರಸ್ತೆ ವಿಭಜಕಗಳು ತೆರೆದುಕೊಂಡಿವೆ. ಇದರಿಂದ ಹಳ್ಳಿಗಳ ಕಡೆಯಿಂದ ಬರುವ ಟ್ರ್ಯಾಕ್ಟರ್, ಬೈಕುಗಳು ಹಾಗೂ ಗೂಡ್ಸ್ ಆಟೋಗಳು ದಿಢೀರನೆ ಹೆದ್ದಾರಿಗೆ ಬರುವುದರಿಂದ ಹೆದ್ದಾರಿಯಲ್ಲಿ ವೇಗವಾಗಿ ಸಂಚರಿಸುವ ವಾಹನಗಳಿಗೆ ತೀವ್ರ ಅಡಚಣೆ ಉಂಟಾಗುತ್ತಿದೆ. ಜತೆಗೆ ಈಗಾಗಲೇ ಇದೇ ಕಾರಣಕ್ಕೆ ಹಲವು ಅಪಘಾತಗಳು ಕೂಡ ಸಂಭವಿಸಿವೆ.
ಟೋಲ್ ಕೇಂದ್ರ ಎಂದಮೇಲೆ ಅಲ್ಲಿ ಆ್ಯಂಬುಲೆನ್ಸ್ ಇರಬೇಕು. ವೈದ್ಯಕೀಯ ಸಿಬ್ಬಂದಿಗೂ ಇರಬೇಕು. ಏಕೆಂದರೆ ಈ ರಸ್ತೆಯಲ್ಲಿ ಎಲ್ಲಿಯಾದರೂ ಅಪಘಾತವಾದಲ್ಲಿ ಆಯಾ ಟೋಲ್ನಲ್ಲಿರುವ ಆ್ಯಂಬುಲೆನ್ಸ್ ಕೂಡಲೇ ಅಲ್ಲಿಗೆ ತೆರಳಿ ಪ್ರಥಮ ಚಿಕಿತ್ಸೆ ಒದಗಿಸಿ ಅಲ್ಲಿಂದ ಆಸ್ಪತ್ರೆಗೆ ಸಾಗಿಸಬೇಕು. ಆದರೆ, ಈ ಟೋಲ್ನಲ್ಲಿ ಆ್ಯಂಬುಲೆನ್ಸ್ ಇಲ್ಲ. ಅದರ ಸಿಬ್ಬಂದಿಯೂ ಇಲ್ಲ.
ಪ್ರತಿಭಟನೆ ಎಚ್ಚರಿಕೆ:
ಇದರ ಜತೆಗೆ ಹಾಸನದ ದೇವರಾಯ ಬೈಪಾಸ್ನಿಂದ ಸಕಲೇಶಪುರದವರೆಗೆ ಕಾಂಕ್ರೀಟ್ ರಸ್ತೆ ಆಗಿದ್ದರೂ ಅದು ಗುಣಮಟ್ಟದಿಂದ ಕೂಡಿಲ್ಲ. ಉದ್ಘಾಟನೆಗೂ ಮುನ್ನವೇ ರಸ್ತೆ ಅಲ್ಲಲ್ಲಿ ಕಿತ್ತುಹೋಗಿದ್ದು, ತೇಡೆ ಹಾಕಲಾಗಿದೆ. ದೇವರಾಯಪಟ್ಟಣ ಬಳಿ ಇರುವ ಸೆತುವೆ, ಕಂದಲಿ ಹೊಳೆಗೆ ಇರುವ ಸೇತುವೆ, ಸಿಂಗಾಪುರದ ಹೊಳೆಗೆ ಇರುವ ಸೇತುವೆ ಸೇರಿದಂತೆ ರಸ್ತೆಯುದ್ದಕ್ಕೂ ಇರುವ ಸೇತುವೆಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ್ದು, ವೇಗವಾಗಿ ಸಂಚರಿಸುವ ವಾಹನಗಳು ತೇಲಾಡುವಂತಿದ್ದು, ಚಾಲಕರು ನಿಯಂತ್ರಣ ಕಳೆದುಕೊಳ್ಳುವಷ್ಟರ ಮಟ್ಟಿಗೆ ಅವೈಜ್ಞಾನಿಕವಾಗಿವೆ. ಇಂತಹ ಹಲವು ಅವೈಜ್ಞಾನಿಕತೆಗಳಿಂದ ಕೂಡಿರುವ ಈ ರಸ್ತೆಗೆ ಇದೀಗ ಟೋಲ್ ಹಾಕಲು ಹೊರಟಿರುವುದು ಭಾರೀ ವಿರೋಧಕ್ಕೆ ಕಾರಣವಾಗಿದೆ.
* ಹೇಳಿಕೆ
- ಸಿಮೆಂಟ್ ಮಂಜು, ಶಾಸಕ (15ಎಚ್ಎಸ್ಎನ್10ಬಿ)