ಆಹಾರ ಧಾನ್ಯ ಪರಿಶೀಲಿಸಿ ಉಪಯೋಗಿಸಿ: ಪೂಜಾರ

KannadaprabhaNewsNetwork | Published : Dec 7, 2024 12:32 AM

ಸಾರಾಂಶ

ಅಂಗನವಾಡಿ ಕೇಂದ್ರಗಳು ಪ್ರಾಥಮಿಕ ಹಂತದಲ್ಲಿಯೇ ಮಕ್ಕಳ ಆರೋಗ್ಯವಂತರನ್ನಾಗಿ ಮಾಡುವ ಶಿಶು ಅಭಿವೃದ್ಧಿ ಕೇಂದ್ರಗಳಾಗಿವೆ

ಗದಗ: ಅಂಗನವಾಡಿ ಮಕ್ಕಳ ಆರೋಗ್ಯ ರಕ್ಷಣೆಗಾಗಿ ಸರ್ಕಾರ ಆಹಾರ ಧಾನ್ಯ ಒದಗಿಸುತ್ತಿದ್ದು, ಆಹಾರ ಧಾನ್ಯ ಕಳಪೆ ಮಟ್ಟದಾಗಿದ್ದರೆ ಅದರ ಬಗ್ಗೆ ಗ್ರಾಪಂಗೆ ಗಮನಕ್ಕೆ ತಂದು ಉಪಯೋಗಿಸಬೇಕೆಂದು ಗ್ರಾಪಂ ಅಧ್ಯಕ್ಷ ಕೆ.ಎಸ್. ಪೂಜಾರ ಹೇಳಿದರು.

ತಾಲೂಕಿನ ಲಕ್ಕುಂಡಿ ಗ್ರಾಮದ ಅನದಾನೀಶ್ವರ ಮಠದಲ್ಲಿ ನಡೆದ ಗ್ರಾಮ ಸಭೆಯಲ್ಲಿ 13 ಅಂಗನವಾಡಿ ಕೇಂದ್ರಗಳ ಕಾರ್ಯಕರ್ತರಿಗೆ ಇ-ಸ್ವತ್ತು ಉತಾರ ನೀಡಿ ಮಾತನಾಡಿದರು.

ಅಂಗನವಾಡಿ ಕೇಂದ್ರಗಳು ಪ್ರಾಥಮಿಕ ಹಂತದಲ್ಲಿಯೇ ಮಕ್ಕಳ ಆರೋಗ್ಯವಂತರನ್ನಾಗಿ ಮಾಡುವ ಶಿಶು ಅಭಿವೃದ್ಧಿ ಕೇಂದ್ರಗಳಾಗಿವೆ. ಇಲ್ಲಿ ಬೆಳೆಯುವ ಮಕ್ಕಳು ಈ ನಾಡಿನ ಆರೋಗ್ಯವಂತ ಪ್ರಜೆಗಳಾಗಲು ಸಾಧ್ಯವಾಗುತ್ತದೆ. ಇಲ್ಲಿಯ ಬರುವ ಬಡ ಮಕ್ಕಳ ಆರೋಗ್ಯ ಕುರಿತು ಕಾರ್ಯಕರ್ತರು ಕಾಳಜಿ ವಹಿಸಬೇಕು. ಮಕ್ಕಳು, ಬಾಣಂತಿಯರು ಹಾಗೂ ವಿಕಲಚೇತನರಿಗೆ ನೀಡುವ ಆಹಾರವು ಸ್ವಚ್ಛ ಹಾಗೂ ಶುಚಿತ್ವವಾಗಿರಬೇಕು. ಗಾಮದಲ್ಲಿಯ ಶಿಥಿಲಾವಸ್ಥೆಯಲ್ಲಿದ್ದ ಕೆಲ ಅಂಗನವಾಡಿ ಕೇಂದ್ರಗಳನ್ನು ನೂತನ ಕಟ್ಟಡಗಳನ್ನಾಗಿ ನಿರ್ಮಾಣ ಮಾಡಲಾಗುತ್ತಿದೆ. ನಿರ್ಮಾಣ ಮಾಡಲು ಇ ಸ್ವತ್ತು ಉತಾರ ಇಲ್ಲದೇ ಸರ್ಕಾರದ ಅನುದಾನ ಮಂಜೂರಿಯಾಗಲು ಅಡ್ಡಿಯಾಗುತ್ತಿತ್ತು. ಆದ್ದರಿಂದ ಗ್ರಾಮದ 14 ಅಂಗನವಾಡಿ ಕೇಂದ್ರಗಳಲ್ಲಿ 13 ಕೇಂದ್ರಗಳಿಗೆ ಇ-ಸ್ವತ್ತು ಒದಗಿಸಲಾಗಿದೆ. ಒಂದು ಕೇಂದ್ರದ ಕಟ್ಟಡದ ಬಗ್ಗೆ ತಕರಾರು ಇದ್ದು ಕೂಡಲೇ ಸರಿಪಡಿಸಲಾಗವುದು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯ ಹುಲಿಗೆಮ್ಮ ಜೋಗೇರ ಮಾತನಾಡಿ, ಗದಗ ತಾಲೂಕಿನ 27 ಗ್ರಾಪಂನಲ್ಲಿಯೇ ಲಕ್ಕುಂಡಿ ಗ್ರಾಪಂ ಇ-ಸ್ವತ್ತು ಒದಗಿಸಿದ್ದು ಪ್ರಥಮವಾಗಿದೆ. ಅಂಗನವಾಡಿ ಕೇಂದ್ರಗಳಿಗೆ ಇಂದು ಉತ್ತಮ ಆಸ್ತಿಯಾಗಿದ್ದು ನಮ್ಮ ಜವಾಬ್ದಾರಿ ಹೆಚ್ಚಾಗಿದೆ. ಅಂಗನವಾಡಿ ಕಾರ್ಯಕರ್ತರು ಮಕ್ಕಳು, ಬಾಣಂತಿಯರ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದರು.

ಈ ವೇಳೆ ಗ್ರಾಪಂ ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾ ಅಧಿಕಾರಿ ರಾಧಾ ಮಣ್ಣೂರು, ಪಿಡಿಒ ರಾಜಕುಮಾರ ಭಜಂತ್ರಿ, ಅಂಗನವಾಡಿ ಮೇಲ್ವಿಚಾರಿಕಿ ಎಸ್.ಎ. ಹತ್ತಿವಾಲೆ, ನೋಡೆಲ್ ಅಧಿಕಾರಿ ಪಿ.ಡಿ. ಮಂಗಳೂರು, ಸಂತೋಷ ಪಾಟೀಲ, ಎಸ್.ಡಿ.ಎ ತುಕಾರಾಮ ಹುಲಗಣ್ಣವರ, ಎಂ.ಮರಿಬಸವಗೌಡ್ರ ಹಾಗೂ ಗ್ರಾಪಂ ಸದಸ್ಯರು ಇದ್ದರು.

Share this article