ಕಬ್ಬಿನಲ್ಲಿರುವ ಸಕ್ಕರೆ ಅಂಶ ಪರಿಶೀಲಿಸಿ: ರಮೇಶ್‌ರಾಜು

KannadaprabhaNewsNetwork |  
Published : Jul 20, 2025, 01:15 AM IST
೧೯ಕೆಎಂಎನ್‌ಡಿ-೪ಮಂಡ್ಯದ ಗಾಂಧಿ ಭವನದಲ್ಲಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ, ರಾಜ್ಯ ಕಬ್ಬು ಬೆಳೆಗಾರರ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಸಂಘದ ದಕ್ಷಿಣ ಪ್ರಾಂತ ಅಧ್ಯಕ್ಷ ಹಾಡ್ಯ ರಮೇಶ್‌ರಾಜು ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ರೈತರಿಗೆ ದರ ನೀಡುವ ಸಮಯದಲ್ಲಿ ಉಪ ಉತ್ಪನ್ನಗಳನ್ನು ಗಣನೆಗೆ ತೆಗೆದುಕೊಳ್ಳದೆ ಕೇವಲ ಸಕ್ಕರೆ ಉತ್ಪಾದನೆಯಿಂದ ಬರುವ ಹಣವನ್ನಷ್ಟೇ ಪರಿಗಣಿಸಿ ನೀಡಲಾಗುತ್ತಿದೆ. ಇದರಿಂದ ರೈತರಿಗೆ ವೈಜ್ಞಾನಿಕ ಬೆಲೆ ದೊರಕುತ್ತಿಲ್ಲ. ಹಾಗಾಗಿ ಸಕ್ಕರೆ ಕಾರ್ಖಾನೆಗಳಿಗೆ ಉಪ ಉತ್ಪನ್ನಗಳಿಂದ ಬರುವಂತಹ ಲಾಭವನ್ನೂ ಪರಿಗಣಿಸಿ ರೈತರಿಗೆ ಉತ್ತಮ ದರವನ್ನು ನೀಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಕಬ್ಬಿನಲ್ಲಿ ಸಕ್ಕರೆ ಅಂಶ ಎಷ್ಟಿದೆ ಎನ್ನುವುದನ್ನು ಸರ್ಕಾರ ಖುದ್ದು ಪರಿಶೀಲನೆ ನಡೆಸದಿರುವುದರಿಂದಲೇ ಕೇಂದ್ರ ಸರ್ಕಾರ ನಿಗದಿಪಡಿಸಿದ ಎಫ್‌ಆರ್‌ಪಿ ದರವನ್ನು ರೈತರಿಗೆ ಪಾವತಿಸಿ ಸಕ್ಕರೆ ಕಾರ್ಖಾನೆಗಳು ವಂಚಿಸುತ್ತಿವೆ ಎಂದು ಭಾರತೀಯ ಕಿಸಾನ್ ಸಂಘ (ಕರ್ನಾಟಕ ಪ್ರದೇಶ)ದ ಪ್ರಾಂತ ಅಧ್ಯಕ್ಷ ಹಾಡ್ಯ ರಮೇಶ್‌ರಾಜು ಆರೋಪಿಸಿದರು.

ನಗರದ ಗಾಂಧಿ ಭವನದಲ್ಲಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ, ರಾಜ್ಯ ಕಬ್ಬು ಬೆಳೆಗಾರರ ವೇದಿಕೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಸಕ್ಕರೆ ಕಾರ್ಖಾನೆಗಳು ಕೇವಲ ಸಕ್ಕರೆಯನ್ನು ಮಾತ್ರ ಉತ್ಪಾದನೆ ಮಾಡದೆ ಉಪ ಉತ್ಪನ್ನಗಳನ್ನೂ ತಯಾರಿಸುತ್ತಿವೆ. ಸಹ ವಿದ್ಯುತ್ ಘಟಕ, ಎಥನಾಲ್, ಡಿಸ್ಟಿಲರಿಯಿಂದಲೂ ಅಧಿಕ ಲಾಭ ಗಳಿಸುತ್ತಿವೆ ಎಂದರು.

ರೈತರಿಗೆ ದರ ನೀಡುವ ಸಮಯದಲ್ಲಿ ಉಪ ಉತ್ಪನ್ನಗಳನ್ನು ಗಣನೆಗೆ ತೆಗೆದುಕೊಳ್ಳದೆ ಕೇವಲ ಸಕ್ಕರೆ ಉತ್ಪಾದನೆಯಿಂದ ಬರುವ ಹಣವನ್ನಷ್ಟೇ ಪರಿಗಣಿಸಿ ನೀಡಲಾಗುತ್ತಿದೆ. ಇದರಿಂದ ರೈತರಿಗೆ ವೈಜ್ಞಾನಿಕ ಬೆಲೆ ದೊರಕುತ್ತಿಲ್ಲ. ಹಾಗಾಗಿ ಸಕ್ಕರೆ ಕಾರ್ಖಾನೆಗಳಿಗೆ ಉಪ ಉತ್ಪನ್ನಗಳಿಂದ ಬರುವಂತಹ ಲಾಭವನ್ನೂ ಪರಿಗಣಿಸಿ ರೈತರಿಗೆ ಉತ್ತಮ ದರವನ್ನು ನೀಡಬೇಕೆಂಬುದು ರೈತರ ಆಗ್ರಹವಾಗಿದ್ದರೂ ಆಳುವ ಸರ್ಕಾರಗಳು ಅದನ್ನು ಪರಿಗಣಿಸದೆ ಖಾಸಗಿ ಕಾರ್ಖಾನೆಗಳ ಪರವಾಗಿ ನಿಂತಿವೆ ಎಂದರು.

ಖಾಸಗಿ ಸಕ್ಕರೆ ಕಾರ್ಖಾನೆಗಳು ಉಪ ಉತ್ಪನ್ನಗಳಿಂದ ಕೋಟಿಗಟ್ಟಲೆ ಆದಾಯ ಗಳಿಸುತ್ತಿವೆ. ರೈತರಿಗೆ ಅದರ ಲಾಭ ದೊರಕುತ್ತಿಲ್ಲ. ಈ ಲಾಭದಲ್ಲಿ ಅರ್ಧದಷ್ಟನ್ನಾದರೂ ರೈತರಿಗೆ ನೀಡುವುದು ಅಗತ್ಯವಾಗಿದೆ. ಕಬ್ಬಿನ ಇಳುವರಿಯನ್ನೂ ನಿಖರವಾಗಿ ತೋರಿಸದೆ ಕಾರ್ಖಾನೆಗಳು ವಂಚಿಸುತ್ತಿವೆ. ವೈಜ್ಞಾನಿಕ ಬೆಲೆ ನೀಡದೆ ರೈತರನ್ನು ಶೋಷಿಸುತ್ತಿರುವುದರಿಂದಲೇ ಕಬ್ಬು ಬೆಳೆಗಾರರು ಸಾಲಗಾರರಾಗಿಯೇ ಉಳಿದುಕೊಂಡಿದ್ದಾರೆ ಎಂದರು.

ಕೇಂದ್ರ ಸರ್ಕಾರವು ಕಬ್ಬಿಗೆ ಅತಿ ಹೆಚ್ಚು ಪ್ರಾಮುಖ್ಯತೆ ಕೊಡಬೇಕು. ಸರ್ಕಾರ ಇಳುವರಿ ಮಿತಿಯನ್ನು ಕನಿಷ್ಠ ಶೇ.೮ಕ್ಕೆ ಇಳಿಸಬೇಕು ಎಂದು ಒತ್ತಾಯಿಸಿದ ಅವರು, ರೈತರು ಒಂದು ಟನ್ ರಸಗೊಬ್ಬರನ್ನು ಒಂದು ಎಕರೆ ಜಮೀನಿಗೆ ಹಾಕುತ್ತಿದ್ದಾರೆ. ಇದರಲ್ಲಿ ರಸಗೊಬ್ಬರ ಕಂಪನಿಗಳಿಗೆ ಸರ್ಕಾರ ಸಬ್ಸಿಡಿ ನೀಡುತ್ತಿದೆ. ಒಂದು ಬ್ಯಾಗ್ ಯೂರಿಯಾಗೆ ಕನಿಷ್ಠ ೨೫೦ ರು. ಹಣವನ್ನು ರೈತ ಕೊಟ್ಟರೆ ೧,೨೫೦ ರು. ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಕೊಡುತ್ತಿದೆ ಎಂದು ಆರೋಪಿಸಿದರು.

ಇಲ್ಲಿ ರಸಗೊಬ್ಬರಗಳನ್ನು ಮುಕ್ತವಾಗಿ ಮಾರುಕಟ್ಟೆಗೆ ಬಿಡಿ. ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿರುವ ರೈತರಿಗೆ ಪ್ರತಿ ಒಂದು ಟನ್‌ಗೆ ಸಬ್ಸಿಡಿ ಹಣದ ರೂಪದಲ್ಲಿ ಹಣ ನೀಡಿ. ಆಗ ಫರ್ಟಿಲೈಸರ್‌ಗಳಿಗೆ ಸಾವಿರಾರು ರೂಪಾಯಿ ಹಣ ಏಕೆ ನೀಡಬೇಕೆಂದು ಸಾವಯವ ಬೆಳೆ ಬೆಳೆಯಲು ರೈತರು ಮುಂದಾಗುತ್ತಾರೆ. ಆಗ ರಸಗೊಬ್ಬರದ ಮೇಲೆ ಅವಲಂಬಿತರಾಗಿರುವ ರೈತರ ಸಂಖ್ಯೆಯೂ ಕ್ರಮೇಣ ಕಡಿಮೆ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಉತ್ತರ ಪ್ರಾಂತದ ಅಧ್ಯಕ್ಷ ಶಿವಣ್ಣ ಸರದಾರ್, ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಮಹಿಳಾ ಮೋರ್ಚಾದ ಪುಟ್ಟಮ್ಮ, ಉತ್ತರ ಪ್ರಾಂತದ ಅಧ್ಯಕ್ಷ ವಿವೇಕ್ ಮೋರೆ, ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ಅಪ್ಪಾಜಿ ಬೂದನೂರು, ಕಾರ್ಯದರ್ಶಿ ಜೆ.ಕೆ.ಬಸವರಾಜು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''