ಹುಬ್ಬಳ್ಳಿ: ಬ್ರಿಟಿಷರ ವಿರುದ್ಧ ಹೋರಾಡಿದ ವೀರರಾಣಿ ಕಿತ್ತೂರು ಚೆನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಾಡಿನ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಅವರನ್ನು ನಿತ್ಯ ಸ್ಮರಿಸುವ ಜತೆಗೆ ಅವರ ಜೀವನ ಮತ್ತು ಸಾಧನೆಗಳನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.
ರಾಯಣ್ಣ ಮತ್ತು ಚೆನ್ನಮ್ಮನ ಹೆಸರು ಚಿರಾಯುವಾಗಿ ಉಳಿಯುವಂತಾಗಲು ರಾಜ್ಯದ ಪ್ರಮುಖ ವಿಮಾನ ನಿಲ್ದಾಣಕ್ಕೆ ಅವರ ಹೆಸರನ್ನು ಇಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಅದರಂತೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ವೀರರಾಣಿ ಕಿತ್ತೂರು ಚೆನ್ನಮ್ಮ, ವಿಜಯಪುರ ನಿಲ್ದಾಣಕ್ಕೆ ಬಸವಣ್ಣ ಹಾಗೂ ಶಿವಮೊಗ್ಗದ ನಿಲ್ದಾಣಕ್ಕೆ ಕುವೆಂಪು ಅವರ ಹೆಸರಿಡಲು ಸ್ವತಃ ನಾನೂ ಹಲವಾರು ಬಾರಿ ಮನವಿ ಮಾಡಿದ್ದೇನೆ ಎಂದರು.
ರಾಯಣ್ಣನ ನೆನಪು ಅಜರಾಮರವಾಗಿ ಉಳಿಯಲು ಪ್ರತಿವರ್ಷ ಹುಬ್ಬಳ್ಳಿ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ಅತಿಥಿಗಳಾಗಿ ಆಗಮಿಸಿದ್ದ ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ದೇಶದ ಹೆಮ್ಮೆಯ ಪ್ರತೀಕವಾದ ಸಂಗೊಳ್ಳಿ ರಾಯಣ್ಣ ಹಾಗೂ ಕಿತ್ತೂರು ರಾಣಿ ಚೆನ್ನಮ್ಮಳನ್ನು ನಿತ್ಯ ಸ್ಮರಿಸುವಂತಾಗಬೇಕು. ಅವರ ಹೆಸರಿನಲ್ಲಿ ಪ್ರಶಸ್ತಿ ಪಡೆದ ಸಾಧಕರು ಮತ್ತಷ್ಟು ಮಾದರಿ ಸೇವೆ ಸಲ್ಲಿಸುವಂತಾಗಲಿ ಎಂದರು.
92 ಸಾಧಕರಿಗೆ ಪ್ರಶಸ್ತಿ ಪ್ರದಾನ
ಕನ್ನಡಪ್ರಭದ ಮುಖ್ಯ ಉಪಸಂಪಾದಕ ಶಿವಾನಂದ ಅಂಗಡಿ, ಪತ್ರಕರ್ತ ನಿಜಗುಣಿ ದಿಂಡಲಕೊಪ್ಪ, ಪ್ರಕಾಶ ಚಳಗೇರಿ, ವಿಜಯಕುಮಾರ ಪೂಜಾರಿ, ಎಸ್.ಎನ್. ಗೋವರ್ಧನ, ಹೇಮರಡ್ಡಿ ಸೈದಾಪುರ, ಸಂಗಮೇಶ ಮೆಣಸಿನಕಾಯಿ, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಬಸವರಾಜ ಬಳಿಗಾರ ಸೇರಿ ಐವರು, ಸಾರಿಗೆ ಕ್ಷೇತ್ರದಲ್ಲಿ ಎಚ್. ರಾಮನಗೌಡರ, ಆರ್.ಎಫ್. ಕವಳಿಕಾಯಿ ಸೇರಿ ಐವರು, ಕ್ರೀಡಾ ಕ್ಷೇತ್ರದಲ್ಲಿ ಪಾಂಡಪ್ಪ ಮಾದರ ಸೇರಿ ಐವರು, ಸುದ್ದಿ ವಾಹಿನಿ ಕ್ಷೇತ್ರದಲ್ಲಿ ನಾಲ್ವರು, ನ್ಯಾಯವಾದಿ ಕ್ಷೇತ್ರದಲ್ಲಿ ಇಬ್ಬರು, ಕೃಷಿ ಕ್ಷೇತ್ರದಲ್ಲಿ ನಾಲ್ವರು, ಕಲಾ ಸೇವೆ ಕ್ಷೇತ್ರದಲ್ಲಿ ಮೂವರು, ಸಮಾಜ ಸೇವೆ ಕ್ಷೇತ್ರದಲ್ಲಿ ಶ್ರೀಕಾಂತ ಪೂಜಾರ ಸೇರಿ 15, ಪೊಲೀಸ್ ಇಲಾಖೆ-16, ವಿಮಾನ ನಿಲ್ದಾಣ ಸರ್ಕಾರಿ ಸೇವಾ ಕ್ಷೇತ್ರದಲ್ಲಿ-2, ಶಿಕ್ಷಣ ಕ್ಷೇತ್ರ-3 ಸಾಧಕರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಹಾಗೂ ವಿವಿಧ ಮಹಿಳಾ ಕ್ಷೇತ್ರದಲ್ಲಿ ಸೇವೆಗೈದ 20 ಮಹಿಳೆಯರಿಗೆ ವೀರರಾಣಿ ಕಿತ್ತೂರ ಚೆನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು.