ಬಜೆಟ್‌: ಬಳ್ಳಾರಿ ಜನರ ನಿರೀಕ್ಷೆಗಳ ಹುಸಿಗೊಳಿಸಿದ ಸಿಎಂ

KannadaprabhaNewsNetwork |  
Published : Mar 07, 2025, 11:47 PM IST
ಜೀನ್ಸ್‌ | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ 2025-26ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಗಣಿ ಜಿಲ್ಲೆ ಬಳ್ಳಾರಿಯನ್ನು ಸಂಪೂರ್ಣ ಕಡೆಗಣಿಸಿದ್ದು, ಈ ಭಾಗದ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ. ಕಳೆದ ಬಾರಿಯಂತೆಯೇ ಈ ಬಾರಿಯೂ ಕೆಲವು ಘೋಷಿತ ಯೋಜನೆಗಳನ್ನು ಬಜೆಟ್‌ನಲ್ಲಿ ಮಂಡಿಸಿದ್ದರೆ, ಈ ಭಾಗದ ಅಭಿವೃದ್ಧಿ ನೆಲೆಯಲ್ಲಿ ಆಗಲೇಬೇಕಾದ ಯೋಜನೆಗಳಿಗೆ ಎಳ್ಳುನೀರು ಬಿಟ್ಟಿದ್ದಾರೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ 2025-26ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಗಣಿ ಜಿಲ್ಲೆ ಬಳ್ಳಾರಿಯನ್ನು ಸಂಪೂರ್ಣ ಕಡೆಗಣಿಸಿದ್ದು, ಈ ಭಾಗದ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ.

ಕಳೆದ ಬಾರಿಯಂತೆಯೇ ಈ ಬಾರಿಯೂ ಕೆಲವು ಘೋಷಿತ ಯೋಜನೆಗಳನ್ನು ಬಜೆಟ್‌ನಲ್ಲಿ ಮಂಡಿಸಿದ್ದರೆ, ಈ ಭಾಗದ ಅಭಿವೃದ್ಧಿ ನೆಲೆಯಲ್ಲಿ ಆಗಲೇಬೇಕಾದ ಯೋಜನೆಗಳಿಗೆ ಎಳ್ಳುನೀರು ಬಿಟ್ಟಿದ್ದಾರೆ. ವಿಪರ್ಯಾಸ ಎಂದರೆ ನೆರೆಯ ಕೊಪ್ಪಳ, ರಾಯಚೂರು ಜಿಲ್ಲೆಗೆ ಸಿಕ್ಕ ಆದ್ಯತೆ ಬಳ್ಳಾರಿ ಜಿಲ್ಲೆಗೆ ಸಿಕ್ಕಿಲ್ಲ.

ಪ್ರಮುಖವಾಗಿ ಜೀನ್ಸ್‌ ಅಪರೆಲ್ ಪಾರ್ಕ್, ಸರ್ಕಾರಿ ಎಂಜಿನಿಯರಿಂಗ್, ತೋಟಗಾರಿಕೆ ಕಾಲೇಜು ಸ್ಥಾಪನೆ, ವಿಮಾನ ನಿಲ್ದಾಣಕ್ಕೆ ಅನುದಾನ, ಒಣಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆ ಸೇರಿದಂತೆ ನಿರೀಕ್ಷಿತ ಒಂದೇ ಒಂದು ಯೋಜನೆಯ ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಣ್ಣು ಹಾಯಿಸಿಲ್ಲ.

ಕಳೆದ ಬಾರಿಯ ಬಜೆಟ್‌ನಲ್ಲೂ ಬಳ್ಳಾರಿ ಜಿಲ್ಲೆಯನ್ನು ಕಡೆಗಣಿಸಲಾಗಿತ್ತು. ಆದರೆ, ಈ ಬಾರಿ ಕೆಲವು ಪ್ರಮುಖ ಯೋಜನೆಗಳಿಗೆ ಸಿದ್ದರಾಮಯ್ಯ ಅಸ್ತು ಎನ್ನಲಿದ್ದಾರೆ ಎಂಬ ನಿರೀಕ್ಷೆಗಳು ಬಲವಾಗಿದ್ದವು. ಆದರೆ, ಈ ಬಾರಿಯೂ ಸಹ ಜಿಲ್ಲೆಯನ್ನು ಕಡೆಗಣಿಸಿರುವುದು ಸ್ಪಷ್ಟವಾಗಿದೆ.

ಜೀನ್ಸ್‌ ಅಪರೆಲ್ ಪಾರ್ಕ್: ರಾಜ್ಯ ಬಜೆಟ್‌ನಲ್ಲಿ ಜೀನ್ಸ್‌ ಅಪರೆಲ್ ಪಾರ್ಕ್‌ಗೆ ಈ ಬಾರಿ ಅನುದಾನ ಲಭ್ಯವಾಗಲಿದ್ದು, ಜೀನ್ಸ್‌ ಉದ್ಯಮಕ್ಕೆ ಉತ್ತೇಜನ ಸಿಗಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಕಳೆದ ಬಾರಿ ಬಜೆಟ್‌ನಲ್ಲಿ ಬರೀ ಘೋಷಣೆಯಷ್ಟೇ ಮಾಡಿ

ಕೈ ತೊಳೆದುಕೊಂಡಿದ್ದ ಸರ್ಕಾರ, ಈ ಬಾರಿ ಅನುದಾನ ನಿಗದಿಗೊಳಿಸಲಿದೆ. ಇದರಿಂದ ಬಳ್ಳಾರಿಯ ಜೀನ್ಸ್‌ ಉದ್ಯಮ ಜಾಗತಿಕ ಮಾರುಕಟ್ಟೆಗೆ ಲಗ್ಗೆ ಹಾಕಲಿದೆ ಎಂದು ಇಲ್ಲಿನ ಉದ್ಯಮಿಗಳು ಸಂತಸದಲ್ಲಿದ್ದರು. ಆದರೆ, ಸರ್ಕಾರ ಈ ಬಗ್ಗೆ ಗಮನ ನೀಡದಿರುವುದು ಬಜೆಟ್‌ನಲ್ಲಿ ಸ್ಪಷ್ಟವಾಗಿ ಗೋಚರಿಸಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಒಣ ಮೆಣಸಿನಕಾಯಿ ಬೆಳೆಯನ್ನು ಬೆಳೆಯಲಾಗುತ್ತಿದ್ದು, ಮಾರುಕಟ್ಟೆ ಸ್ಥಾಪನೆಗೆ ಸರ್ಕಾರ ಅಸ್ತು ಎನ್ನಲಿದೆ. ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಮಾಡಲಿದೆ ಎಂಬ ನಿರೀಕ್ಷೆಯೂ ಹುಸಿಯಾಗಿದೆ. ವಿಮಾನ ನಿಲ್ದಾಣಕ್ಕೆಂದು ಜಮೀನು ವಶಪಡಿಸಿಕೊಂಡು ದಶಕ ಕಳೆದರೂ ಬಳ್ಳಾರಿಯಲ್ಲಿ ವಿಮಾನ ಹಾರಾಟ ಶುರುಗೊಳ್ಳಲಿಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ಗಮನ ನೀಡದಿರುವುದು ಹಾಗೂ ಈ ಭಾಗದ ಸಚಿವ, ಶಾಸಕರು ನಿರ್ಲಕ್ಷ್ಯ ವಹಿಸಿರುವುದು ಇದಕ್ಕೆ ಪ್ರಮುಖ ಕಾರಣವೂ ಹೌದು.

ಎಂಜಿನಿಯರಿಂಗ್ ಕಾಲೇಜು: ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಳ್ಳಾರಿಯಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಬೇಕು ಎಂಬುದು ಬಹುವರ್ಷಗಳ ಬೇಡಿಕೆಯಾಗಿದೆ. ಆದರೆ, ಸರ್ಕಾರ ಈ ವರೆಗೆ ಯಾವುದೇ ಕ್ರಮದ ಹೆಜ್ಜೆ ಇಟ್ಟಿಲ್ಲ. ಈ ಬಜೆಟ್‌ನಲ್ಲಿ ಕಾಲೇಜು ಸ್ಥಾಪನೆಗೆ ಹಸಿರು ನಿಶಾನೆ ತೋರಿಸಲಿದೆ ಎಂಬ ನಿರೀಕ್ಷೆ ಹುಸಿಗೊಂಡಿದೆ. ತೋಟಗಾರಿಕೆ ಕಾಲೇಜು ಸ್ಥಾಪನೆ ವಿಚಾರದಲ್ಲೂ ಬಜೆಟ್ ನಿರಾಸೆಗೊಳಿಸಿದೆ.

ಮಹಿಳಾ ಡಿಪ್ಲೊಮಾ ಕಾಲೇಜು, ಕಂಪ್ಲಿ ತಾಲೂಕು ಮತ್ತು ಕೊಪ್ಪಳ ಜಿಲ್ಲೆ ಗಂಗಾವತಿ ನಡುವಿನ ಸೇತುವೆ ನಿರ್ಮಾಣ, ಹಗರಿ ನದಿಗೆ ಸೇತುವೆ ನಿರ್ಮಾಣ, ಸಿರುಗುಪ್ಪದಲ್ಲಿ ಮಿನಿ ವಿಧಾನಸೌಧ, ಬಳ್ಳಾರಿ ನಗರಕ್ಕೆ ತುಂಗಭದ್ರಾ ಜಲಾಶಯದಿಂದ ನೇರವಾಗಿ ನೀರು ಪೂರೈಸುವ ಯೋಜನೆ, ಜಿಲ್ಲೆಯಲ್ಲಿ ಸರ್ಕಾರಿ ನರ್ಸಿಂಗ್ ಕಾಲೇಜು ಸ್ಥಾಪನೆ, ಬಳ್ಳಾರಿಯಲ್ಲಿ ಎಲ್‌ಎಲ್‌ಎಂ ಕಾಲೇಜು ಸ್ಥಾಪನೆ, ಐತಿಹಾಸಿಕ ಬಳ್ಳಾರಿ ಕೋಟೆಗೆ ರೋಪ್‌ವೇ ನಿರ್ಮಾಣ, ಮಿಂಚೇರಿ ಗುಡ್ಡ, ಸಂಡೂರು ಪರಿಸರ ತಾಣಗಳು ಸೇರಿದಂತೆ ಜಿಲ್ಲೆಯ ವಿವಿಧೆಡೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಸೇರಿದಂತೆ ಜಿಲ್ಲೆಯ ಜನರ ಯಾವ ನಿರೀಕ್ಷೆಗಳೂ ಈ ಬಾರಿಯ ಬಜೆಟ್‌ ಸಮಾಧಾನಪಡಿಸಿಲ್ಲ.

ಸಿರುಗುಪ್ಪ ಹಾಗೂ ಸಂಡೂರಿನ 100 ಹಾಸಿಗೆಗಳ ತಾಲೂಕು ಆಸ್ಪತ್ರೆಗಳನ್ನು 150 ಹಾಸಿಗೆಗಳ ವಿಭಾಗೀಯ ಆಸ್ಪತ್ರೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂಬುದಷ್ಟೇ ಈ ಬಜೆಟ್‌ನಿಂದ ಜಿಲ್ಲೆಗಾದ ಅನುಕೂಲ. ಬಜೆಟ್‌ನಲ್ಲಿ ಬಳ್ಳಾರಿಗೆ ಈ ಬಾರಿ ಸಿಕ್ಕಿದ್ದೇನು?:

* ಶ್ರವಣದೋಷವುಳ್ಳ ಮಕ್ಕಳ ಶಾಲೆಯನ್ನು ಪ್ರಾಥಮಿಕ ಹಂತದಿಂದ ಪ್ರೌಢಶಾಲೆ ಹಂತಕ್ಕೆ ಮೇಲ್ದರ್ಜೆಗೆ.

* ಬಳ್ಳಾರಿಯಲ್ಲಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಸ್ಥಾಪನೆಗೆ ಕ್ರಮ

* ವಾಹನ ಸಂಚಾರವನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹೆಚ್ಚಲು ಎಐ ಆಧಾರಿತ ವಿದ್ಯುನ್ಮಾನ ಕ್ಯಾಮೆರಾ ಅಳವಡಿಕೆ

* ಕಲ್ಯಾಣ ಕರ್ನಾಟಕ ಭಾಗದ ಆರೋಗ್ಯ ಅಭಿವೃದ್ಧಿ ಯೋಜನೆಯಡಿ ಕುರುಗೋಡು, ಕಂಪ್ಲಿಯ 100 ಹಾಸಿಗೆಯುಳ್ಳ ತಾಲೂಕು ಆಸ್ಪತ್ರೆಯನ್ನಾಗಿ ಪರಿವರ್ತನೆ.

* ಸಿರುಗುಪ್ಪ ಹಾಗೂ ಸಂಡೂರು ತಾಲೂಕಿನ 100 ಹಾಸಿಗೆಗಳ ತಾಲೂಕು ಆಸ್ಪತ್ರೆಗಳನ್ನು 150 ಹಾಸಿಗೆಗಳ ವಿಭಾಗೀಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ

ಬಳ್ಳಾರಿ ಜನರ ಬಜೆಟ್‌ನ ನಿರೀಕ್ಷೆಗಳೇನಿದ್ದವು?:

* ಜೀನ್ಸ್ ಅಪರೆಲ್ ಪಾರ್ಕ್‌ಗೆ ಅನುದಾನ ನೀಡಿ ಚಾಲನೆ ನೀಡಬೇಕು.

* ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಬೇಕು.

* ವಿಮಾನ ನಿಲ್ದಾಣಕ್ಕೆ ಅನುದಾನ ನೀಡಿ ಕಾಮಗಾರಿ ಪೂರ್ಣಗೊಳಿಸಬೇಕು.

* ಒಣಮೆಣಸಿನಕಾಯಿ ಮಾರುಕಟ್ಟೆ ಸ್ಥಾಪಿಸಬೇಕು.

* ಕಂಪ್ಲಿ ತಾಲೂಕು ಮತ್ತು ಕೊಪ್ಪಳ ಜಿಲ್ಲೆ ಗಂಗಾವತಿ ನಡುವಿನ ಸೇತುವೆ ನಿರ್ಮಾಣ ಮಾಡಬೇಕು.

* ಜಿಲ್ಲೆಯಲ್ಲಿ ತೋಟಗಾರಿಕೆ ಕಾಲೇಜು ಆರಂಭಿಸಬೇಕು.

* ಬಳ್ಳಾರಿಯ ಐತಿಹಾಸಿಕ ಕೋಟೆಗೆ ರೋಪ್‌ವೇ ನಿರ್ಮಿಸಬೇಕು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ