ಧಾರವಾಡ: ಕಾಶ್ಮೀರದ ಪೆಹಲ್ಗಾಂದಲ್ಲಿ ಅಮಾಯಕ ಹಿಂದೂಗಳ ಹತ್ಯೆಯ ಹಿನ್ನೆಲೆಯಲ್ಲಿ ದೇಶದಲ್ಲಿರುವ ಪಾಕ್ ಪ್ರಜೆಗಳನ್ನು ಹೊರ ಹಾಕಲು ಪ್ರಧಾನಿ ನೀಡಿದ ಆದೇಶವನ್ನು ರಾಜ್ಯದ ಮುಖ್ಯಮಂತ್ರಿಗಳು ಪಾಲಿಸುತ್ತಿಲ್ಲ ಎಂದು ಬಿಜೆಪಿ ಮುಖಂಡರು ಬುಧವಾರ ನಗರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.
ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ರಾಜ್ಯಪಾರರಿಗೆ ಮನವಿ ಅರ್ಪಿಸಲಾಯಿತು. ದೇಶದ ಪ್ರಧಾನ ಮಂತ್ರಿಗಳು ಮಾಡಿರುವ ಆದೇಶಕ್ಕೆ ಸ್ಪಂದಿಸದೆ ಅವಮಾನ ಮಾಡುವುದು ಸಮಂಜಸ ಅಲ್ಲ. ರಾಜ್ಯಪಾಲರು ಕೂಡಲೇ ಕೋರಿಕೆ ಮನ್ನಿಸಿ ಇಂತಹ ದೇಶದ್ರೋಹಿ ಸರ್ಕಾರ ಮತ್ತು ಮುಖ್ಯಮಂತ್ರಿಗಳನ್ನು ವಜಾ ಮಾಡಬೇಕು. ದೇಶದ ಭದ್ರತೆಗೆ ಮಾರಕ ಇರುವ ಪಾಕ್ ಪ್ರಜೆಗಳನ್ನು ಕೂಡಲೇ ದೇಶದಿಂದ ಹೊರ ಹಾಕಲು ಸೂಚಿಸಬೇಕು ಎಂದು ಒತ್ತಾಯಿಸಲಾಯಿತು.
ಮಾಜಿ ಮೇಯರ್ ಈರೇಶ ಅಂಚಟಗೇರಿ, ಶಂಕರ ಶೇಳಕೆ, ಮಂಜುನಾಥ ಗಾಮನಗಟ್ಟಿ, ಶಿವಣ್ಣ ಬಡವನ್ನಣವರ, ಮೋಹನ ರಾಮದುರ್ಗ, ಶಂಕರಕುಮಾರ ದೇಸಾಯಿ, ನಾಗರಾಜ ನಾಯಕ, ಸುನೀಲ ಮೋರೆ, ಪ್ರಮೂದ ಕಾರಕುನ, ಈರಣ್ಣ ಹಪಳ್ಳಿ, ಶ್ರೀನಿವಾಸ ಕೊಟ್ಯನ್, ಸದಾಶಿವ ಭಜಂತ್ರಿ, ರಮೇಶ ದೊಡ್ಡವಾಡ, ಶಫಿ ಬಿಜಾಪುರಿ, ಸಿದ್ದು ಕಲ್ಯಾಣ ಶಟ್ಟಿ, ಬಸವರಾಜ ರುದ್ರಾಪುರ, ಬಸವರಾಜ ಬಾಳಗಿ, ಮಂಜುನಾಥ ನೀರಲಕಟ್ಟಿ, ಬಸವರಾಜ ಚಳಗೇರಿ ಮತ್ತಿತರರು ಇದ್ದರು.